ಸಿಬಿಐ : ಗುವಾಹತಿ 'ಹೈ' ತೀರ್ಪಿಗೆ ಸುಪ್ರೀಂ ತಡೆ

ಶನಿವಾರ ಕೇಂದ್ರ ಸರ್ಕಾರ ಗುಹವಾತಿ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಸಿಬಿಐ ನಡೆಸುತ್ತಿರುವ ಪಕ್ರರಣಗಳ ವಿಚಾರಣೆಗೆ ಹೈಕೋರ್ಟ್ ತೀರ್ಪು ಅಡ್ಡಿಯಾಗಿದೆ. ಆದ್ದರಿಂದ ತೀರ್ಪಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿತ್ತು.
ದೀಪಾವಳಿ ಹಬ್ಬದ ಪ್ರಯುಕ್ತ ಸುಪ್ರೀಂಕೋರ್ಟ್ಗೆ ರಜೆ ಇರುವ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಅವರು ಇದೊಂದು ತುರ್ತು ಪ್ರಕರಣ ಎಂದು ಪರಿಗಣಿಸಿ ತಮ್ಮ ನಿವಾಸದಲ್ಲಿ ಶನಿವಾರ ಮಧ್ಯಾಹ್ನ ಅರ್ಜಿಯ ವಿಚಾರಣೆ ನಡೆಸಿದರು. ವಿಚಾರಣೆ ನಂತರ ಹೈಕೋರ್ಟ್ ಆದೇಶಕ್ಕೆ ತಾತ್ಕಲಿಕ ತಡೆಯಾಜ್ಞೆ ನೀಡಿ, ಡಿ.6ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿದರು.
ವಿಚಾರಣೆ ವೇಳೆ ಕೇಂದ್ರ ಗೃಹ ಸಚಿವಾಲಯ ಮತ್ತು ಸಿಬಿಐಗೆ ನೋಟಿಸ್ ಜಾರಿಗೊಳಿಸಿರುವ ಸುಪ್ರೀಂಕೋರ್ಟ್, ಡಿ.6ರಂದು ಪ್ರಕರಣದ ಕುರಿತು ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದೆ. ಸುಪ್ರೀಂ ಆದೇಶದಿಂದಾಗಿ ಸಿಬಿಐ ಮತ್ತು ಕೇಂದ್ರ ಸರ್ಕಾರಕ್ಕೆ ತಾತ್ಕಾಲಿಕ ನೆಮ್ಮದಿ ದೊರಕಿದ್ದು, ಸಿಬಿಐ ನಡೆಸುತ್ತಿದ್ದ ಪ್ರಕರಣಗಳ ವಿಚಾರಣೆಯನ್ನು ನಿರಾತಂಕವಾಗಿ ಮುಂದುವರೆಸಬಹುದಾಗಿದೆ.
ಗುಹವಾತಿ ಹೈಕೋರ್ಟ್ ಆದೇಶ : 1963ರ ಏಪ್ರಿಲ್ 1ರಂದು ಸಿಬಿಐ ಸ್ಥಾಪನೆಯಾಗಿದ್ದು, ಇದು ದೆಹಲಿ ವಿಶೇಷ ಪೊಲೀಸ್ ದಳ ಸ್ಥಾಪನೆ ಕಾಯ್ದೆ(Delhi Special Police Establishment-1946)ಯನ್ನು ಒಳಗೊಂಡಿಲ್ಲ. ಸಿಬಿಐ ಕೇವಲ ಗೃಹ ಸಚಿವಾಲಯದ ನಿಲುವಳಿ ಮೇಲೆ ಸ್ಥಾಪಿತವಾಗಿದೆ, ಸಿಬಿಐ ಪೊಲೀಸ್ ಇಲಾಖೆಯ ಅಂಗವಲ್ಲ.
ಸಿಬಿಐ ಸ್ಥಾಪನೆ ಮಸೂದೆಗೆ ರಾಷ್ಟ್ರಪತಿಗಳ ಅನುಮೋದನೆ ಕೂಡ ಪಡೆದಿಲ್ಲ. ಹೀಗಾಗಿ ಸಿಬಿಐ ಸ್ಥಾಪನೆ ಅಸಂವಿಧಾನಿಕ. ಪ್ರಕರಣದ ವಿಚಾರಣೆ ನಡೆಸುವ, ವ್ಯಕ್ತಿಗಳನ್ನು ಬಂಧಿಸುವ ಹಕ್ಕು ಸಿಬಿಐಗೆ ಇಲ್ಲ ಎಂದು ಗುಹವಾತಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಐ.ಎ. ಅನ್ಸಾರಿ ಮತ್ತು ಇಂದಿರಾ ಷಾ ಅವರನ್ನೊಳಗೊಂಡ ವಿಭಾಗೀಯ ಪೀಠ ಮೂರು ದಿನಗಳ ಹಿಂದೆ ಆದೇಶ ನೀಡಿತ್ತು.












Click it and Unblock the Notifications