ಸಂಗಮ್ ವಿಹಾರ್ ಪ್ರಕರಣ: ಆಪ್ ಶಾಸಕರ ಪ್ರತಿಭಟನೆ, ಬಂಧನ
ನವದೆಹಲಿ ಸೆಪ್ಟೆಂಬರ್ 1: ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ 16 ವರ್ಷದ ಶಾಲಾ ಬಾಲಕಿಗೆ ಗುಂಡು ಹಾರಿಸಿ ಗಾಯಗೊಳಿಸಿದ ಆರೋಪದ ಮೇಲೆ 19 ವರ್ಷದ ಯುವಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆದರೆ ಆಪ್ ಶಾಸಕರು ಇದು ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಪ್ರತಿಭಟನೆ ಮಾಡಿದ್ದಾರೆ.
ಸಣ್ಣ ಪುಟ್ಟ ವಿಷಯಕ್ಕೆ ಗುಂಡಿನ ದಾಳಿಗಳು ನಡೆಯುತ್ತವೆ. ಇದು ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಆರೋಪಿಸಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರು ಇಂದು (ಸೆಪ್ಟೆಂಬರ್ 1) ದೆಹಲಿಯ ಎಲ್-ಜಿ ವಿನಯ್ ಕುಮಾರ್ ಸಕ್ಸೇನಾ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು. ಈ ವೇಳೆ ದೆಹಲಿ ಪೊಲೀಸರು ಸೌರಭ್ ಭಾರದ್ವಾಜ್, ದಿಲೀಪ್ ಕೆ ಪಾಂಡೆ, ದುರ್ಗೇಶ್ ಪಾಠಕ್, ಅಮಾನತುಲ್ಲಾ ಖಾನ್, ಸೋಮನಾಥ್ ಭಾರ್ತಿ ಮತ್ತು ಸಂಜೀವ್ ಝಾ ಸೇರಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಕೆಲವು ಶಾಸಕರನ್ನು ಬಂಧಿಸಿದ್ದಾರೆ.
ಆಪ್ ಆರೋಪ ಏನು?
ಆಗಸ್ಟ್ 25 ರಂದು ಈ ಘಟನೆ ನಡೆದಿತ್ತು. ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದನು. ಆರೋಪಿ ಅಮಾನತ್ ಅಲಿ ತನ್ನ ಪರಿಚಯದ ಹುಡುಗಿ ತನ್ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುವುದನ್ನು ನಿಲ್ಲಿಸಿದ್ದಕ್ಕೆ ಕೋಪಗೊಂಡು ಕೊಲೆ ಮಾಡಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಈತನ ಸಹಚರರಾದ ಬಾಬಿ (24) ಮತ್ತು ಪವನ್ (19) ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ಕ್ಷುಲ್ಲಕ ಕಾರಣಕ್ಕೆ ಕೊಲೆ ಯತ್ನಗಳು ನಡೆಯುತ್ತಿರುವುದು ಪೋಲೀಸ್ ವ್ಯವಸ್ಥೆ ಮೇಲಿನ ಅಭಯವನ್ನು ಸೂಚಿಸುತ್ತದೆ. ಎಂದು ಆಪ್ ಶಾಸಕರು ದೂರಿದ್ದಾರೆ. ಹೀಗಾಗಿ ಪೊಲೀಸ್ ವ್ಯವಸ್ಥೆಯನ್ನು ಅವರು ದೂರಿದ್ದಾರೆ.
ಆಗಸ್ಟ್ 25 ರಂದು ಮಧ್ಯಾಹ್ನ ಘಟನೆಯ ಕುರಿತು ತಮಗೆ ಕರೆ ಬಂದಿದ್ದು, ಭುಜಕ್ಕೆ ಗುಂಡೇಟಿನಿಂದ ಶಾಲಾ ವಿದ್ಯಾರ್ಥಿನಿಯನ್ನು ಬಾತ್ರಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಂಡವು ಆರೋಪಿಯನ್ನು ಪತ್ತೆಹಚ್ಚಿದೆ.
ಆರೋಪಿ ಬಂಧನ
ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 307 (ಕೊಲೆ ಯತ್ನ) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಟೈಗ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಗೆ ಅಲಿ ಪರಿಚಯವಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೂವರು ಆರೋಪಿಗಳು ತನ್ನ ಸಂಬಂಧಿಕರೊಂದಿಗೆ ಶಾಲೆಯಿಂದ ಹಿಂತಿರುಗುತ್ತಿದ್ದಾಗ ಬಾಲಕಿ ಮೇಲೆ ದ್ವಿಚಕ್ರ ವಾಹನದಲ್ಲಿ ಆಕೆಯನ್ನು ಹಿಂಬಾಲಿಸಿ ಸಂಗಮ್ ವಿಹಾರ್ನ ಬಿ ಬ್ಲಾಕ್ ಬಳಿ ಗುಂಡು ಹಾರಿಸಿದ್ದಾರೆ. ಅಲಿ ತನ್ನ ಮನೆಯ ಬಳಿ ಅಡ್ಡಾಡುತ್ತಿದ್ದ ಎಂದು ಬಾಲಕಿಯ ಕುಟುಂಬದ ಸದಸ್ಯರು ಈ ಹಿಂದೆ ಹೇಳಿದ್ದರು.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪೊಲೀಸರು ವಿಶ್ಲೇಷಿಸಿದ್ದಾರೆ. ದೃಶ್ಯದಲ್ಲಿ ಮೂವರ ಉತ್ತರ ಪ್ರದೇಶದ ಮುಜಾಫರ್ನಗರ ಕಡೆಗೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ. ಗುಂಡು ಹಾರಿಸಿದ ಬಳಿಕ ಅಲ್ಲಿದ್ದ ತಂಡ ತಪ್ಪಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದರು.
ಆರೋಪಿ ಅಮಾನತ್ ಅಲಿ ಬಂಧನ
ಆರೋಪಿಗಳು ದೆಹಲಿಗೆ ಮರಳಿದ ನಂತರ, ಪೊಲೀಸರು ಬಾಬಿ ಮತ್ತು ಪವನ್ ಅವರನ್ನು ಆಗಸ್ಟ್ 26 ರಂದು ಸಂಗಮ್ ವಿಹಾರ್ನಿಂದ ಬಂಧಿಸಿದರು. ಅವರಿಂದ ಎರಡು ದೇಶ ನಿರ್ಮಿತ ಪಿಸ್ತೂಲ್ಗಳು ಮತ್ತು ಮೂರು ಕಾಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಶೇಷ ಸಿಬ್ಬಂದಿಯ ಪೊಲೀಸರು ರಹಸ್ಯ ಮಾಹಿತಿ ಆಧರಿಸಿ ಪ್ರಮುಖ ಆರೋಪಿ ಅಮಾನತ್ ಅಲಿಯನ್ನು ತ್ರಿಲೋಕಪುರಿಯಿಂದ ಬಂಧಿಸಿದ್ದಾರೆ.
ಬಾಲಕಿಯೊಂದಿಗೆ ಮಾತನಾಡಲು ವಿಫಲ
ಪೊಲೀಸ್ ಉಪ ಕಮಿಷನರ್ (ದಕ್ಷಿಣ) ಬೆನಿಟಾ ಮೇರಿ ಜೈಕರ್ ಮಾತನಾಡಿ, "ಹುಡುಗಿಯು ತನ್ನೊಂದಿಗೆ ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕ ಹೊಂದಿದ್ದಳು ಮತ್ತು ಅವಳು ಸ್ವಲ್ಪ ಸಮಯದ ಹಿಂದೆ ಅವನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದಳು ಎಂದು ಆರೋಪಿ ಬಹಿರಂಗಪಡಿಸಿದ್ದಾನೆ. ಅವನು ಮತ್ತು ಅವನ ಸ್ನೇಹಿತರಾದ ಬಾಬಿ ಮತ್ತು ಪವನ್ ಬಾಲಕಿ ಶಾಲೆಯಿಂದ ಹಿಂದಿರುಗುವಾಗ ಅವಳನ್ನು ತಡೆಯಲು ಪ್ರಯತ್ನಿಸಿದ್ದರು. ಅದು ಸಾಧ್ಯವಾಗದೇ ಇದ್ದಾರೆ ಆಕೆಯ ಮೇಲೆ ಗುಂಡು ಹಾರಿಸಿರುವುದಾಗಿ ಹೇಳಿಕೊಂಡಿದ್ದಾರೆ.