ಸಿಖ್ ದಂಗೆ: ಕೋರ್ಟಿಗೆ ಶರಣಾದ ಮಾಜಿ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್
ನವದೆಹಲಿ, ಜನವರಿ 01: 1984ರ ಸಿಖ್ ದಂಗೆಗೆ ಸಂಬಂಧಿಸಿದಂತೆ ಕಾಂಗ್ರೆಸ್ಸಿನ ಮಾಜಿ ಮುಖಂಡ ಸಜ್ಜನ್ ಕುಮಾರ್ ಅವರು ಸೋಮವಾರ ದೆಹಲಿಯ ಕರ್ಕರಡೂಮ ಕೋರ್ಟಿಗೆ ಶರಣಾದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ನಂತರ ನಡೆದ ಸಿಖ್ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಸಜ್ಜನ್ ಕುಮಾರ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಡಿ.17 ರಂದು ತೀರ್ಪು ನೀಡಿತ್ತು. ಈ ಮೂಲಕ ಸಜ್ಜನ್ ಕುಮಾರ್ ಅವರನ್ನು ಖುಲಾಸೆಗೊಳಿಸಿದ್ದ ಟ್ರಯಲ್ ಕೋರ್ಟ್ ಆದೇಶಕ್ಕೆ ವ್ಯತಿರಿಕ್ತವಾದ ಆದೇಶವನ್ನು ಹೈಕೋರ್ಟ್ ನೀಡಿತ್ತು.
ಡಿ.31 ರೊಳಗೆ ಶರಣಾಗುವಂತೆ ಸಜ್ಜನ್ ಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಆದೇಶಿಸಿತ್ತು. ಆದರೆ ಜ.31 ರವರೆಗೆ ಶರಣಾಗತಿಗೆ ಕಾಲಾವಕಾಶ ಕೋರಿ ಅವರು ಸಲ್ಲಿಸಿದ್ದ ಅರ್ಜಿಯೂ ವಜಾ ಆದ ಹಿನ್ನೆಲೆಯಲ್ಲಿ ಅವರು ಸೋಮವಾರ ಕೋರ್ಟಿನೆದುರು ಶರಣಾಗಿದ್ದಾರೆ.

ಅವರನ್ನು ಮಾಂಡೋಲಿ ಜೈಲಿನಲ್ಲಿ ಇರಿಸಲಾಗಿದ್ದು, ಭದ್ರತೆಯ ದೃಶಃ್ಟಿಯಿಂದ ಅವರ ಸಂಚಾರಕ್ಕಾಗಿ ವಾಹನವೊಂದನ್ನು ಪೂರೈಸಲಾಗಿದೆ ಎಂದು ಸಜ್ಜನ್ ಕುಮಾರ್ ಅವರ ವಕೀಲರು ತಿಳಿಸಿದ್ದಾರೆ.
ಏನಿದು ಘಟನೆ?
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ನಂತರ ನಡೆದಿದ್ದ ಸಿಖ್ ನರಮೇಧ ಪ್ರಕರಣದಲ್ಲಿ, ಕಾಂಗ್ರೆಸ್ ಹಿರಿಯ ಮುಖಂಡ ಸಜ್ಜನ್ ಕುಮಾರ್ ಅವರು ಪ್ರಮುಖ ಆರೋಪಿಯಾಗಿದ್ದರು. ಅವರು ದೆಹಲಿಯ ಕಂಟೋನ್ಮೆಂಟ್ ಬಳಿ ಸಿಖ್ ಧರ್ಮೀಯರ ಮೇಲೆ ತಮ್ಮ ಬೆಂಬಲಿಗರಿಂದ ದಾಳಿ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಹಿಂಸಾಚಾರಕ್ಕೆ ಬೆಂಬಲ ನೀಡಿದ ಆರೋಪದ ಎರಡು ಪ್ರಕರಣವನ್ನೂ ಅವರು ಎದುರಿಸುತ್ತಿದ್ದರು.












Click it and Unblock the Notifications