ತೈಲ ಬೆಲೆ ವಿಷಯದಲ್ಲಿ ಸರ್ಕಾರ ಧರ್ಮ ಸಂಕಟದಲ್ಲಿದೆ; ನಿರ್ಮಲಾ ಸೀತಾರಾಮನ್
ನವದೆಹಲಿ, ಮಾರ್ಚ್ 05: ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರಂತರವಾಗಿ ಏರಿಕೆ ಕಂಡಿದ್ದು, ಈ ವಿಷಯ ಸರ್ಕಾರಕ್ಕೆ ಧರ್ಮ ಸಂಕಟವಾಗಿದೆ ಎಂದಿದ್ದಾರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.
ನವ ದೆಹಲಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಬೆಲೆ ತಗ್ಗಿಸುವ ಸಾಧ್ಯತೆ ಕುರಿತು ಪ್ರಶ್ನಿಸಿದಾಗ ಈ ರೀತಿ ಉತ್ತರಿಸಿದರು.
ಭಾರತದಲ್ಲಿರುವುದೇ ನನ್ನ ಅದೃಷ್ಟ ಎಂದ ನಿರ್ಮಲಾ ಸೀತಾರಾಮನ್
ಸಾರ್ವಜನಿಕರಿಗೆ ತೈಲ ಬೆಲೆ ಏರಿಕೆ ಹೊರೆಯಾಗಿದೆ ಎಂಬುದನ್ನು ಒಪ್ಪಿಕೊಂಡ ಅವರು, ಈ ಹೊರೆಯನ್ನು ಇಳಿಸಲು ಕೇಂದ್ರ, ರಾಜ್ಯ ಸರ್ಕಾರಗಳ ನಡುವೆ ಮಾತುಕತೆ ನಡೆಯಬೇಕಿದೆ ಎಂದು ಹೇಳಿದರು.
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಗ್ರಾಹಕರ ಅವಶ್ಯಕತೆ ನಮಗೆ ಅರ್ಥವಾಗಿದೆ. ಆದರೆ ಈಗ ಸರ್ಕಾರಕ್ಕೆ ಭೀಕರ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಏನೇನು ತೆರಿಗೆ ಸಂಗ್ರಹಿಸುತ್ತದೋ ಅದರಲ್ಲಿ 41%ರಷ್ಟು ರಾಜ್ಯಗಳಿಗೆ ಹೋಗುತ್ತದೆ ಎಂದು ತಿಳಿಸಿದರು.
ದೇಶದಲ್ಲಿ ತೈಲ ಬೆಲೆ ಏರಿಕೆ ಸಾರ್ವಜನಿಕರು ಹಾಗೂ ಸರ್ಕಾರವನ್ನು ಚಿಂತೆಗೀಡು ಮಾಡಿದೆ. ಮುಂಬರುವ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಈ ವಿಷಯವನ್ನೇ ಅಸ್ತ್ರ ಮಾಡಿಕೊಳ್ಳುವುದಿಲ್ಲ ಎನ್ನುವ ನಂಬಿಕೆ ಇದೆ ಎಂದರು.
ಕೇಂದ್ರ ಸರ್ಕಾರ ಮಾತ್ರವಲ್ಲ, ರಾಜ್ಯ ಸರ್ಕಾರಗಳೂ ತೈಲ ಬೆಲೆ ಕುರಿತು ಚಿಂತಿಸಬೇಕಿದೆ. ರಾಜ್ಯಗಳಿಗೂ ಆದಾಯವಿದೆಯಲ್ಲವೇ ಎಂದು ಪ್ರಶ್ನಿಸಿದರು.