ನವದೆಹಲಿಯಲ್ಲಿ ಮಫ್ಲರ್ ಮ್ಯಾನ್ ಎದುರು ಮಂಕಾಗಿದ್ದೇಕೆ ಬಿಜೆಪಿ?
ನವದೆಹಲಿ, ಫೆಬ್ರವರಿ.11: ಹಳ್ಳಿಗಾಡು ಪ್ರದೇಶಗಳಲ್ಲಿ 'ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು' ಎಂಬ ಗಾದೆ ಮಾತಿದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಈ ಮಾತು ನಿಜವಾಗಿ ಬಿಟ್ಟಿತಾ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದೆ. 70 ವಿಧಾನಸಭಾ ಕ್ಷೇತ್ರಗಳ ಪೈಕಿ ಆಮ್ ಆದ್ಮಿ ಪಕ್ಷವು ಬಹುಮತ ಪಡೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿವೆ.
ತೀವ್ರ ಕುತೂಹಲ ಕೆರಳಿಸಿದ್ದ ರಾಷ್ಟ್ರ ರಾಜಧಾನಿ ರಾಜಕಾರಣದಲ್ಲಿ ಆಪ್ ಎದುರಾಳಿ ಪಕ್ಷಗಳನ್ನು ಸರಿಯಾಗಿ ಗುಡಿಸಿ ಹಾಕಿದೆ. ಬಿಜೆಪಿ ಎರಡಂಕಿ ತಲುಪುವುದಕ್ಕೂ ಹರಸಾಹಸ ಪಟ್ಟರೆ, ಕಾಂಗ್ರೆಸ್ ಪಕ್ಷವು ಶೂನ್ಯ ಸಾಧನೆ ಮೂಲಕ ಲಿಸ್ಟ್ ನಿಂದಲೇ ಔಟ್ ಆಗಿದೆ.
'ಕೇಜ್ರಿವಾಲ್ ಒಬ್ಬ ಭಯೋತ್ಪಾದಕ, ಅದಕ್ಕೆ ಸಾಕಷ್ಟು ಪುರಾವೆಗಳಿವೆ'
ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ 8 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ ಭಾರತೀಯ ಜನತಾ ಪಕ್ಷವು ಚುನಾವಣೆಯಲ್ಲಿ ಮುಖಭಂಗ ಅನುಭವಿಸಲು ಸಾಕಷ್ಟು ಕಾರಣಗಳಿವೆ. ಈ ಕುರಿತು ಸಂಪೂರ್ಣ ಮಾಹಿತಿ ವರದಿಯಲ್ಲಿ ಸವಿವರವಾಗಿ ತಿಳಿಸಲಾಗಿದೆ.
ಜೆಎನ್ ಯು ವಿದ್ಯಾರ್ಥಿಗಳ ಬಗ್ಗೆ ಬಿಜೆಪಿ ಅವಹೇಳನಕಾರಿ ಹೇಳಿಕೆ
ನವದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಶುಲ್ಕ ಏರಿಕೆಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ಉಗ್ರ ಹೋರಾಟ ನಡೆಸಲಾಯಿತು. ವಿಧಾನಸಭಾ ಚುನಾವಣೆ ಹೊಸ್ತಿಲಲ್ಲೇ ನಡೆದ ಹೋರಾಟವನ್ನು ಬಿಜೆಪಿ ರಾಜಕೀಯಗೊಳಿಸುವ ಪ್ರಯತ್ನ ಮಾಡಿತು. ಜೆಎನ್ ಯು ವಿದ್ಯಾರ್ಥಿಗಳ ಪ್ರತಿಭಟನೆಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಯಿತು. ಇನ್ನೊಂದು ಕಡೆಯಲ್ಲಿ ಕೇಂದ್ರ ಸರ್ಕಾರವು ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸವನ್ನು ಮಾಡಿತು. ಇದಷ್ಟೇ ಅಲ್ಲದೇ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಹೋರಾಟದ ಹಿಂದೆ ಎಡಬಿಡಂಗಿ ಎಂದರೆ ಎಡಪಂಥೀಯರ ಕೈವಾಡವಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ವಿರುದ್ಧ ಮತದಾರರ ಕಣ್ಣು ಕೆಂಪಾಯಿತು ಎನ್ನಲಾಗುತ್ತಿದೆ.
ಸಿಎಎ ಮತ್ತು ಶಾಹಿನ್ ಬಾಗ್ ಹೋರಾಟ: ದೆಹಲಿಯಲ್ಲಿ ಗುಂಡಿನ ಮೊರೆತ
ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರಿಕ ನೋಂದಣಿ
ಜೆಎನ್ ಯು ವಿರುದ್ಧದ ಹೋರಾಟ ಕೊಂಚ ತಣ್ಣಗಾಗುತ್ತಿದ್ದಂತೆ ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ವಿಚಾರ ಸದ್ದು ಮಾಡಿತು. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಉಗ್ರ ಹೋರಾಟ ಶುರುವಾಯಿತು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದಿಯಾಗಿ ಬಹುತೇಕ ನಾಯಕರು ಕೇಂದ್ರ ಸರ್ಕಾರವು ಜಾರಿಗೊಳಿಸಲು ಹೊರಟ ಸಿಎಎ ವಿರುದ್ಧ ಧ್ವನಿ ಎತ್ತಿದರು. ಬಿಜೆಪಿ ದೇಶವನ್ನು ಇಬ್ಭಾಗಗೊಳಿಸಲು ಹೊರಟಿದೆ ಎನ್ನುವಂತೆ ಚುನಾವಣಾ ಅಖಾಡದಲ್ಲಿ ಬಿಂಬಿಸಲು ಶುರು ಮಾಡಿದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಿಎಎ ಮತ್ತು ಎನ್ಆರ್ ಸಿ ವಿರುದ್ಧ ನಡೆಸಿದ ಹೋರಾಟಕ್ಕೆ ಪಾಕಿಸ್ತಾನ್ ಸಚಿವ ಚೌಧರಿ ಫವಾದ್ ಹುಸೇನ್ ಬೆಂಬಲ ಸೂಚಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ಬಿಜೆಪಿ ಮುಂದಾಗಿತ್ತು. ಅಷ್ಟರೊಳಗೆ ಪ್ರಧಾನಮಂತ್ರಿ ಪರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೇ, ಪಾಕಿಸ್ತಾನ್ ಸಚಿವರ ವಿರುದ್ಧ ಹರಿಹಾಯ್ದರು. ದೆಹಲಿ ಚುನಾವಣೆ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯು ನಮ್ಮ ಆಂತರಿಕ ವಿಚಾರವಾಗಿದೆ. ಇದರ ಬಗ್ಗೆ ಯಾರೇ ಮಾತನಾಡಿದರೂ ಸಹಿಸಲು ಆಗುವುದಿಲ್ಲ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಕಿಡಿ ಕಾರಿದ್ದರು.
ಶಾಹಿನ್ ಬಾಗ್ ಹೋರಾಟದ ಹಿಂದೆ ಬಿಜೆಪಿ ಬೆಂಬಲದ ಆರೋಪ?
ಕಳೆದ ಎರಡು ತಿಂಗಳಿನಿಂದಲೂ ದೆಹಲಿಯ ಶಾಹಿನ್ ಬಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಉಗ್ರ ಹೋರಾಟ ನಡೆಸಲಾಗುತ್ತಿತ್ತು. ವಿಧಾನಸಭಾ ಮತದಾನಕ್ಕೆ ಒಂದು ವಾರ ಮುಂಚಿತವಾಗಿ ಇರುವಂತೆ ಶಾಹಿನ್ ಬಾಗ್ ನಲ್ಲಿ ಗುಂಡಿನ ಮೊರೆತ ಕೇಳಿ ಬಂತು. ಫೆಬ್ರವರಿ.01ರಂದು ಕಪಿಲ್ ಗುಜ್ಜರ್ ಎಂಬ ವ್ಯಕ್ತಿಯು ಸಾರ್ವಜನಿಕ ಪ್ರದೇಶದಲ್ಲೇ ನಿಂತು ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದನು. ಮೂರು ದಿನಗಳಲ್ಲಿ ನಡೆದ ಎರಡನೇ ಗುಂಡಿನ ದಾಳಿ ಪ್ರಕರಣ ಇದಾಗಿತ್ತು.
ಗಾಳಿಯಲ್ಲಿ ಮೂರು ಸುತ್ತು ಗುಂಡಿನ ದಾಳಿ ನಡೆಸಿದ ಕಪಿಲ್ ಗುಜ್ಜರ್, ಭಾರತದಲ್ಲಿ ಹಿಂದೂಗಳ ಆಟವಷ್ಟೇ ನಡೆಯುತ್ತದೆ. ಇಲ್ಲಿ ಬೇರೆ ಯಾರ ಆಟವೂ ನಡೆಯುವುದಿಲ್ಲ ಎಂದು ಪೊಲೀಸರ ಎದುರಿನಲ್ಲೇ ಘೋಷಣೆ ಕೂಗಿದ್ದನು. ಈ ವಿಡಿಯೋ ಸಾಮಾಜಿಕ ಜಾಲತಾಮಗಳಲ್ಲಿ ವೈರಲ್ ಆಗಿತ್ತು. ಈ ಘಟನೆಗೆ ಬಿಜೆಪಿ ನಾಯಕರು ನೀಡಿದ ಪ್ರಚೋದನಾಕಾರಿ ಹೇಳಿಕೆಯೇ ಕಾರಣವಾಯಿತಾ ಎಂಬ ಅನುಮಾನ ಮತದಾರರಲ್ಲಿ ಮೂಡಿತು. ಇದು ಬಿಜೆಪಿ ಪಾಲಿಗೆ ಕೊಂಚ ಹಿನ್ನಡೆ ಅನುಭವಿಸಲು ಕಾರಣವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.
ಮೋದಿ ನನ್ನ ಪ್ರಧಾನಿ ಕೂಡ: ಪಾಕ್ ಸಚಿವನಿಗೆ ಕೇಜ್ರಿವಾಲ್ ತಿರುಗೇಟು
ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಬಳಿ ಹಿಂಸಾಚಾರ
ಇನ್ನು, ಶಾಹಿನ್ ಬಾಗ್ ಅಷ್ಟೇ ಅಲ್ಲ. ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಹೋರಾಟ ಉಗ್ರ ಸ್ವರೂಪಕ್ಕೆ ತಿರುಗಿತ್ತು. ಕಳೆದ ಜನವರಿ.30ರಂದು ಮೊದಲ ಬಾರಿಗೆ ಜಾಮಿಯಾ ವಿಶ್ವವಿದ್ಯಾಲಯದ ಬಳಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನಡುರಸ್ತೆಯಲ್ಲೇ ನಿಂತು ಗುಂಡಿನ ದಾಳಿ ನಡೆಸಿದ್ದನು. ಈತನ ಫೇಸ್ ಬುಕ್ ಪೋಸ್ಟ್ ಗಳು ಹಿಂದೂವಾದಿಯಾಗಿದ್ದು, ಬಿಜೆಪಿ ನಾಯಕರ ಜೊತೆಗೆ ಗುರುತಿಸಿಗೊಂಡಿದ್ದನು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು.
"ಗೋಲಿ ಮಾರೋ" ಎಂಬ ಹೇಳಿಕೆ ಕಾರಣವಾಯ್ತಾ?
ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಆಯೋಜಿಸಿದ್ದ ಬಿಜೆಪಿ ಬೃಹತ್ ರೋಡ್ ಶೋನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಅನುರಾಗ್ ಠಾಕೂರ್, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಗಳೆಲ್ಲ ದೇಶದ್ರೋಹಿಗಳು ಎಂಬ ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲದೇ, ದೇಶದ್ರೋಹಿಗಳನ್ನೆಲ್ಲ ಏನು ಮಾಡಬೇಕು ಎಂದು ಪ್ರಶ್ನೆ ಮಾಡುತ್ತಿದ್ದಂತೆ, ನೆರೆದ ಕಾರ್ಯಕರ್ತರು ಗುಂಡಿಕ್ಕಿ ಕೊಲ್ಲಬೇಕು ಎಂದು ಘೋಷಣೆಗಳನ್ನು ಕೂಗಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದರಿಂದ ಅನುರಾಗ್ ಠಾಕೂರ್ ಪ್ರಚಾರಕ್ಕೆ ಚುನಾವಣಾ ಆಯೋಗ ಕೂಡಾ ತಡೆ ವಿಧಿಸಿದ್ದು, ಉತ್ತರ ನೀಡುವಂತೆ ನೋಟಿಸ್ ಜಾರಿಗೊಳಿಸಿತ್ತು. ಅನುರಾಗ್ ಠಾಕೂರ್ ನೀಡಿದ ಹೇಳಿಕೆಯನ್ನು ಆಪ್ ತನ್ನ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಂಡಿತು.
ಮುಖ್ಯಮಂತ್ರಿಯನ್ನೇ "ಉಗ್ರ" ಎಂದ ಬಿಜೆಪಿ ಮುಖಂಡ
ನವದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮನ್ನು ಅರಾಜಕತಾವಾದಿ ಎಂದು ಕರೆದುಕೊಂಡಿದ್ದು, ಒಬ್ಬ ಅರಾಜಕತಾವಾದಿಗೂ ಉಗ್ರವಾದಿಗೂ ಅಂತಹ ವ್ಯತ್ಯಾಸವೇನೂ ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಲೇವಡಿ ಮಾಡಿದ್ದರು. ಇನ್ನೊಂದೆಡೆ ಅರವಿಂದ್ ಕೇಜ್ರಿವಾಲ್ ಒಬ್ಬ 'ಉಗ್ರ' ಎಂದು ಬಿಜೆಪಿ ಸಂಸದ ಪರ್ವೇಶ್ ವರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ದೆಹಲಿ ಚುನಾವಣಾ ಆಯೋಗ ಪರ್ವೇಶ್ ವರ್ಮಾ ಅವರಿಗೂ ನೋಟಿಸ್ ಜಾರಿಗೊಳಿಸಿತ್ತು.
ಉತ್ತರ ಪ್ರದೇಶ ಸಿಎಂ ಯೋಗಿಯ 'ಬಿರಿಯಾನಿ' ಬಾತ್
ನವದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದ ಅಖಾಡದಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಲು ಸಾಲು ಪ್ರಚೋದನಕಾರಿ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಾಲ್ಕು ದಿನಗಳ ಪ್ರಚಾರದ ಸಂದರ್ಭದಲ್ಲಿ ಯೋಗಿ ನೀಡಿದ ಹೇಳಿಕೆಗಳು ಬಿಜೆಪಿ ಪಾಲಿಗೆ ಮುಳುವಾದವು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯಡವಟ್ಟುಗಳು:
- ಉಗ್ರರ ಬೆಂಬಲಿತರಿಂದ ಶಾಹಿನ್ ಬಾಗ್ ನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ
- ಜಮ್ಮು ಕಾಶ್ಮೀರದಲ್ಲಿ ಉಗ್ರರನ್ನು ಬೆಂಬಲಿಸುವವರು ಇಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ
- ಸಾರ್ವಜನಿಕರಿಗೆ ಅನ್ನ ನೀಡದ ದೆಹಲಿ ಸರ್ಕಾರ ಶಾಹಿನ್ ಬಾಗ್ ಪ್ರತಿಭಟನಾಕಾರರಿಗೆ ಬಿರಿಯಾನಿ ಸಪ್ಲೈ ಮಾಡುತ್ತಿದೆ
- ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಾಕಿಸ್ತಾನ ಬೆಂಬಲಿತ ಮುಖ್ಯಮಂತ್ರಿ
- ಪಾಕಿಸ್ತಾನದ ಸಚಿವರು ದೆಹಲಿ ಸಿಎಂಗೆ ಬೆಂಬಲ ಸೂಚಿಸುತ್ತಾರೆ ಎಂದರೆ ಅರ್ಥವೇನು?
- ಯೋಗಿ ಹೇಳಿಕೆಗೂ ಮೊದಲೇ ತಮಗೆ ಬೆಂಬಲಿಸಿದ ಪಾಕ್ ಸಚಿವರಿಗೆ ತಿರುಗೇಟು ನೀಡಿದ್ದ ಕೇಜ್ರಿವಾಲ್
- ನರೇಂದ್ರ ಮೋದಿ ನನ್ನ ಪ್ರಧಾನಮಂತ್ರಿ ಎಂದು ಹರಿಹಾಯ್ದಿದ್ದ ಅರವಿಂದ್ ಕೇಜ್ರಿವಾಲ್
- ಬಾಯಿ ಮಾತಿಗೆ ಬಗ್ಗದ ಜನರು ಬಂದೂಕಿಗೆ ಬಗ್ಗುತ್ತಾರೆ ಎಂದಿದ್ದ ಯೋಗಿ ಆದಿತ್ಯನಾಥ್
- ಶಿವನ ಭಕ್ತರು ಎಂದಾದರೂ ಹಿಂಸೆಯನ್ನು ಬೆಂಬಲಿಸುವುದು ಉಂಟೇ
- ಒಂದು ಧರ್ಮದ ಬೆಂಬಲಿತವಾಗಿ ಇಟ್ಟುಕೊಂಡೇ ಪ್ರಚಾರ ಭಾಷಣಗಳನ್ನು ಮಾಡಿದ್ದು ಮುಳ್ಳಾಯಿತು