ಉತ್ತರ ಪ್ರದೇಶದ ಮುಂದಿನ ಮುಖ್ಯಮಂತ್ರಿ ರಾಜನಾಥ್ ಸಿಂಗ್?
ಈಗಾಗಲೇ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅನುಭವವಿರುವ ರಾಜನಾಥ್ ಸಿಂಗ್ ಅವರನ್ನೇ ಬಿಜೆಪಿ ಮತ್ತು ಆರ್ ಎಸ್ ಎಸ್ ಸೂಕ್ತ ವ್ಯಕ್ತಿ ಎಂದು ಆರಿಸಿದೆ ಎಂಬ ಸುದ್ದಿಯೂ ಇದೆ.
ನವದೆಹಲಿ, ಮಾರ್ಚ್ 15: ಉತ್ತರ ಪ್ರದೇಶದ ಮುಂದಿನ ಮುಖ್ಯಮಂತ್ರಿಯಾಗಿ ರಾಜನಾಥ್ ಸಿಂಗ್ ನೇಮಕಗೊಳ್ಳುತ್ತಾರಾ? ಹೀಗೊಂದು ದಟ್ಟ ಸುದ್ದಿ ಎಲ್ಲೆಡೆ ಹಬ್ಬಿದೆ.
ಉತ್ತರ ಪ್ರದೇಶದ ಅಭೂತಪೂರ್ವ ಗೆಲುವಿನ ನಂತರ ಕೇಂದ್ರ ಬಿಜೆಪಿ ಸರ್ಕಾರದ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ದೇಶದ ರಾಜಕಾರಣದಲ್ಲೂ ನಿರ್ಣಾಯಕ ಸ್ಥಾನವನ್ನು ಹೊಂದಿರುವ ಈ ರಾಜ್ಯದ ಜನರ ನಿರೀಕ್ಷೆಯನ್ನು ಅರಿತು, ಆಡಳಿತ ನಡೆಸುವಂಥವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕಿದೆ. ಈಗಾಗಲೇ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅನುಭವವಿರುವ ರಾಜನಾಥ್ ಸಿಂಗ್ ಅವರನ್ನೇ ಬಿಜೆಪಿ ಮತ್ತು ಆರ್ ಎಸ್ ಎಸ್ ಸೂಕ್ತ ವ್ಯಕ್ತಿ ಎಂದು ಆರಿಸಿದೆ ಎಂಬ ಸುದ್ದಿಯೂ ಇದೆ. [ಉ. ಪ್ರದೇಶ ಸಿಎಂ ಯಾರೆಂಬ ಗುಟ್ಟು ಬಿಟ್ಟುಕೊಡದ ಅಮಿತ್ ಶಾ]
ಉ.ಪ್ರದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಕುರಿತು ಪ್ರಧಾನಿ ಮೋದಿಯವರು ಸಂಸದ ಕೇಶವ ಪ್ರಸಾದ್ ಮೌರ್ಯ ಅವರನ್ನು ಮಂಗಳವಾರ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಎಲ್ಲ ಸಮುದಾಯದ ಜನರನ್ನೂ ಸಮಾನತೆಯಿಂದ ನಡೆಸಿಕೊಂಡು ಹೋಗುವಂಥ ನಾಯಕನ ಅಗತ್ಯ ಉತ್ತರ ಪ್ರದೇಶಕ್ಕಿದೆ, ರಾಜನಾಥ್ ಸಿಂಗ್ ಅಂಥ ವ್ಯಕ್ತಿಯಾಗಿರುವುದರಿಂದ ಈ ಸ್ಥಾನಕ್ಕೆ ಅವರು ಸೂಕ್ತ ಎಂಬುದು ಮೋದಿಯವರ ಅಭಿಪ್ರಾಯವೂ ಹೌದು ಎನ್ನಲಾಗುತ್ತಿದೆ. [ಉತ್ತರಪ್ರದೇಶದಲ್ಲಿ ಬಿಜೆಪಿಯ ಭರ್ಜರಿ ಗೆಲುವಿಗೆ 10 ಕಾರಣ]
ಈ ಕುರಿತು ಇಂದು ಅಂತಿಮ ನಿರ್ಧಾರ ಹೊರಬೀಳಲಿದೆ. ರಾಜನಾಥ್ ಸಿಂಗ್ ಅವರೊಂದಿಗೆ ಕೇಶವ ಪ್ರಸಾದ್ ಮೌರ್ಯ, ಮನೋಜ್ ಸಿನ್ಹಾ, ಯೋಗಿ ಆದಿತ್ಯನಾಥ್, ಮಹೇಶ್ ಶರ್ಮಾ ಮುಂತಾದವರ ಹೆಸರೂ ಮುಖ್ಯಮಂತ್ರಿ ರೇಸಿನಲ್ಲಿ ಕೇಳಿಬರುತ್ತಿವೆ.