'ಜಗವೇನೇ ಹೇಳಲಿ ರಾಹುಲ್ ನಮ್ಮ ನಾಯಕ'
ನವದೆಹಲಿ, ಜ. 10: ರಾಹುಲ್ ಗಾಂಧಿ ಹೆಸರಲ್ಲಿ ಎದುರಿಸಿದ ಎಲ್ಲ ಚುನಾವಣೆಯನ್ನೂ ಕಾಂಗ್ರೆಸ್ ಸೋಲುತ್ತಿದೆ. ಆದರೆ, ಪಕ್ಷಕ್ಕೆ ಇನ್ನೂ ರಾಹುಲ್ ಮೇಲಿನ ಭರವಸೆ ಹಾಗೆಯೇ ಇದ್ದಂತೆ ಕಾಣುತ್ತಿದೆ. "ಜಗವೇನೇ ಹೇಳಲಿ ರಾಹುಲ್ ನಮ್ಮ ನಾಯಕ" ಎಂದು ಕಾಂಗ್ರೆಸ್ ಗುನುಗುತ್ತಿದೆ.
ಹೊಸ ಬೆಳವಣಿಗೆ ಏನೆಂದರೆ ರಾಹುಲ್ ಗಾಂಧಿಗೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಪಟ್ಟ ಕಟ್ಟಲು ಪಕ್ಷ ಮುಂದಾಗಿದೆ ಎಂಬುದು. ಈ ಮೂಲಕ ಯುವರಾಜ ಎನ್ನಿಸಿಕೊಂಡಿರುವ ರಾಹುಲ್ ಗಾಂಧಿಯನ್ನು ಇನ್ನು ಮುಂದೆ ಮಹಾರಾಜ ಎಂದು ಬಿಂಬಿಸಲು ಕಾಂಗ್ರೆಸ್ ಸಜ್ಜಾಗಿದೆ. ಇತ್ತೀಚೆಗೆ ಸೋನಿಯಾ ಗಾಂಧಿ ಪದೇ ಪದೆ ಅನಾರೋಗ್ಯಕ್ಕೀಡಾಗುತ್ತಿರುವ ಕಾರಣ ರಾಹುಲ್ಗೆ ಪಕ್ಷದ ಸಂಪೂರ್ಣ ಜವಾಬ್ದಾರಿ ನೀಡಲು ವೇದಿಕೆ ನಿರ್ಮಾಣಗೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ. [ರಾಹುಲ್ ಗಾಂಧಿ ದೃಢ ಹೆಜ್ಜೆ ಇಡಲಿ]
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಮಂಗಳವಾರ ಆಯೋಜಿಸಿರುವ ಸಭೆಯಲ್ಲಿ ರಾಹುಲ್ಗೆ ಪಟ್ಟ ಕಟ್ಟುವ ಕುರಿತು ಚರ್ಚಿಸುವ ಸಾಧ್ಯತೆ ಇದೆ.
ಈ ಸುದ್ದಿಗೆ ಪುಷ್ಠಿ ನೀಡುವಂತೆ ಮಾತನಾಡಿರುವ ಪಕ್ಷದ ವಕ್ತಾರೆ ಶೋಭಾ ಓಝಾ "ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇಬ್ಬರೂ ನಮ್ಮ ಮುಖಂಡರು. ಪಕ್ಷಕ್ಕೊಂದು ಸಂವಿಧಾನವಿದೆ ಮತ್ತು ನಾಯಕನ ಆಯ್ಕೆಗೆ ಚುನಾವಣೆಯೂ ನಡೆಯುತ್ತದೆ" ಎಂದು ತಿಳಿಸಿದ್ದಾರೆ. [ರಾಹುಲ್ ಟೀಂನಲ್ಲಿ ಸಿಖ್ ದಂಗೆ ಆರೋಪಿಗಳು]
ಕೆಲವು ದಿನಗಳ ಹಿಂದಷ್ಟೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮಾತನಾಡಿ, "ರಾಹುಲ್ ಗಾಂಧಿ ಪಕ್ಷದ ರಾಷ್ಟ್ರಾಧ್ಯಕ್ಷರಾಗಬೇಕು. ಸೋನಿಯಾ ಗಾಂಧಿ ಅವರು ರಾಹುಲ್ ಅವರಿಗೆ ಎಐಸಿಸಿ ಜವಾಬ್ದಾರಿ ವಹಿಸಿಕೊಡಬೇಕು" ಎಂದು ಹೇಳಿಕೆ ನೀಡಿದ್ದರು. [ಗಾಂಧಿ ಕುಟುಂಬಕ್ಕೆ ಕಾಂಗ್ರೆಸ್ ಅಧ್ಯಕ್ಷಗಿರಿ ಬೇಡ]
ಪಕ್ಷದ ಮೂಲದ ಪ್ರಕಾರ ಇದೇ ವರ್ಷ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಹೊಸ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಕುರಿತು ಚರ್ಚಿಸಲು ಮಾರ್ಚ್ ತಿಂಗಳಲ್ಲಿ ಎಐಸಿಸಿ ಸಭೆ ನಡೆಸುವ ನಿರೀಕ್ಷೆಯಿದೆ.
ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಜವಾಬ್ದಾರಿಯನ್ನು 1998ರಿಂದಲೂ ಸೋನಿಯಾ ಗಾಂಧಿ ನಿರ್ವಹಿಸುತ್ತಿದ್ದಾರೆ. 2013ರ ಜನವರಿ ತಿಂಗಳಲ್ಲಿ ರಾಹುಲ್ ಗಾಂಧಿ ಪಕ್ಷದ ಉಪಾಧ್ಯಕ್ಷರಾಗುವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಹತ್ತಿರವಾಗಿದ್ದರು. [ಬಿಜೆಪಿ ದಂಡಯಾತ್ರೆ ತಡೆಯಲು ರಾಹುಲ್ ಗೆ ಸಾಧ್ಯವೇ?]
ಇದೇ ವರ್ಷ ನಡೆಯಲಿರುವ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಹಾಗೂ ಈಚೆಗಷ್ಟೇ ಒಗ್ಗೂಡಿರುವ ಜನತಾ ಪರಿವಾರಗಳು ಪ್ರಬಲ ಸ್ಪರ್ಧೆ ಒಡ್ಡಲಿವೆ. ಈ ಚುನಾವಣೆಯಲ್ಲಿ ಅಧಿಕಾರಕ್ಕೇರುವ ಉದ್ದೇಶದಿಂದ ಪಕ್ಷದ ತಳಮಟ್ಟದಿಂದಲೂ ಬದಲಾವಣೆ ತರಲು ಕಾಂಗ್ರೆಸ್ ಯೋಜಿಸಿದೆ.