ರಫೇಲ್ ಡೀಲ್: ಸೂಕ್ಷ್ಮ ಮಾಹಿತಿಗೂ ಆರ್ಟಿಐ ಅನ್ವಯ ಎಂದ ಸುಪ್ರೀಂ
ನವದೆಹಲಿ, ಮಾರ್ಚ್ 14: ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಲ್ಲಿ ಗುರುವಾರ ಕಾವೇರಿದ ಚರ್ಚೆ ನಡೆಯಿತು.
ರಫೇಲ್ ಒಪ್ಪಂದದ ವಿಚಾರದಲ್ಲಿ ಸಲ್ಲಿಸಲಾಗಿರುವ ಅರ್ಜಿಗಳಲ್ಲಿರುವ ಸೋರಿಕೆಯಾದ ಪುಟಗಳನ್ನು ಕಡತದಿಂದ ತೆಗೆದುಹಾಕುವಂತೆ ಸುಪ್ರೀಂಕೋರ್ಟ್ ನಿರ್ದೇಶಿಸಬೇಕು ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಒತ್ತಾಯಿಸಿದರು. ಈ ದಾಖಲೆಗಳ ಮೇಲೆ ಕೇಂದ್ರ ಸರ್ಕಾರ ವಿಶೇಷ ಹಕ್ಕುಗಳನ್ನು ಹೊಂದಿದೆ ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್, ನೀವು (ಅಟಾರ್ನಿ ಜನರಲ್) ಯಾವ ವಿಶೇಷ ಹಕ್ಕನ್ನು ಪ್ರತಿಪಾದಿಸುತ್ತಿದ್ದೀರಿ? ಅವರು ಈಗಾಗಲೇ ಅವುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದರು. ಇದಕ್ಕೆ ಉತ್ತರಿಸಿದ ವೇಣುಗೋಪಾಲ್, ಅವುಗಳನ್ನು ಕದ್ದ ಬಳಿಕ ಹಾಜರುಪಡಿಸಿದ್ದಾರೆ. ಅನುಮತಿ ಪಡೆದುಕೊಳ್ಳದೆ ಸರ್ಕಾರದ ದಾಖಲೆಗಳನ್ನು ಪ್ರಕಟಿಸುವಂತಿಲ್ಲ ಎಂದು ವಾದಿಸಿದರು.

ಬಳಿಕ ಮಾಹಿತಿ ಹಕ್ಕು ಕಾಯ್ದೆಯನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್, ಆರ್ಟಿಐ ಕಾಯ್ದೆಯ ಸೆಕ್ಷನ್ 22 ಮತ್ತು 24ರ ಪ್ರಕಾರ ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳೂ ಭ್ರಷ್ಟಾಚಾರ ಹಾಗೂ ಮಾನವ ಹಕ್ಕು ಉಲ್ಲಂಘನೆಗೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸುವುದಕ್ಕೆ ಬದ್ಧವಾಗಿರಬೇಕಾಗುತ್ತದೆ ಎಂದು ಹೇಳಿತು. ದೇಶದ ಭದ್ರತೆ ಎಲ್ಲಕ್ಕಿಂತಲೂ ಮುಖ್ಯವಾಗಿರುತ್ತದೆ ಎಂದು ಅಟಾರ್ನಿ ಜನರಲ್ ಪ್ರತಿಕ್ರಿಯೆ ನೀಡಿದರು.
ರಫೇಲ್ ಪ್ರಕರಣದಲ್ಲಿ ಸೋರಿಕೆಯಾದ ದಾಖಲೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರದ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿತು.
ಗುರುವಾರ ನಡೆದ ವಿಚಾರಣೆ ವೇಳೆ ಚರ್ಚೆಗೆ ಬಂದ ಕೆಲವು ಅಂಶಗಳು ಇಲ್ಲಿವೆ.
* ಭಾರತೀಯ ಪುರಾವೆ ಕಾಯ್ದೆಯ 123ನೇ ಸೆಕ್ಷನ್ ಪ್ರಕಾರ ಸಂಬಂಧಿತ ಅಧಿಕಾರಿಯ ಅನುಮತಿ ಇಲ್ಲದೆ ಪ್ರಶ್ನೆಯಲ್ಲಿರುವ ದಾಖಲೆಗಳನ್ನು ನ್ಯಾಯಾಲಯದಲ್ಲಿ ಬಳಸುವಂತಿಲ್ಲ: ವೇಣುಗೋಪಾಲ್
* 2005ರ ಆರ್ಟಿಐ ಕಾಯ್ದೆ ಕ್ರಾಂತಿ ತರಲು ಮಾಡಿರುವಂಥದ್ದು. ಮತ್ತೆ ಹಿಂದಿನ ಕಾಲಘಟ್ಟಕ್ಕೆ ಹೋಗಬೇಡಿ: ನ್ಯಾಯಮೂರ್ತಿ ಜೋಸೆಫ್ ಕುರಿಯನ್
* ರಫೇಲ್ ಒಪ್ಪಂದದ ಮಾಹಿತಿಗಳನ್ನು ಬಹಿರಂಗಪಡಿಸುವುದಕ್ಕೆ ಕೇಂದ್ರ ಸರ್ಕಾರದ ಆಕ್ಷೇಪ ಸರಿಯಲ್ಲ. ಈ ವಿರೋಧದ ಉದ್ದೇಶವು ರಾಷ್ಟ್ರೀಯ ಭದ್ರತೆಯ ರಕ್ಷಣೆ ಅಥವಾ ರಕ್ಷಣಾ ರಹಸ್ಯಗಳಿಗೆ ಸಂಬಂಧಿಸಿದ್ದಲ್ಲ: ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್.
* ಈ ದಾಖಲೆಗಳು ಈಗಾಗಲೇ ಸಾರ್ವಜನಿಕ ಮಾಧ್ಯಮಗಳಲ್ಲಿ ಲಭ್ಯವಿದೆ. ಕಾಲದಿಂದ ಕಾಲಕ್ಕೆ ಸರ್ಕಾರವೇ ಸ್ವತಃ ಈ ದಾಖಲೆಗಳನ್ನು ತನ್ನ ಆಪ್ತ ಮಾಧ್ಯಮಗಳಿಗೆ ಸೋರಿಕೆ ಮಾಡಿತ್ತು: ಪ್ರಶಾಂತ್ ಭೂಷಣ್
* ರಕ್ಷಣಾ ಖರೀದಿಗಳಿಗೆ ಸಂಬಂಧಿಸಿದ ಎಲ್ಲ ಬಗೆಯ ಮಾಹಿತಿಗಳೂ ಸಿಎಜಿ ವರದಿಯಲ್ಲಿ ಕೂಡ ಬಹಿರಂಗವಾಗಿವೆ. ಸಿಎಜಿ ವರದಿಯಲ್ಲಿ ಬೆಲೆಯ ಮಾಹಿತಿಗಳನ್ನು ಪ್ರಕಟಿಸದ ಯಾವ ನಿದರ್ಶನವೂ ಇದುವರೆಗೆ ಇರಲಿಲ್ಲ: ಪ್ರಶಾಂತ್ ಭೂಷಣ್.
* ಅಟಾರ್ನಿ ಜನರಲ್ ಅವರ ಪ್ರಾಥಮಿಕ ಆಕ್ಷೇಪಕ್ಕೆ ಪ್ರತಿಯಾಗಿ ವಾದ ಸಲ್ಲಿಸುವುದಕ್ಕೆ ಸೀಮಿತರಾಗಿರಿ. ಪ್ರಾಥಮಿಕ ಆಕ್ಷೇಪವನ್ನು ನಾವು ತಿರಸ್ಕರಿಸಿದರೆ ಮಾತ್ರ ನಾವು ಉಳಿದ ವಿವರಗಳತ್ತ ಹೋಗುತ್ತೇವೆ: ಪ್ರಶಾಂತ್ ಭೂಷಣ್ಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಸೂಚನೆ.












Click it and Unblock the Notifications