ದೆಹಲಿ ಮುಖಭಂಗಕ್ಕೆ ಮೋದಿ, ಅಮಿತ್ ಶಾ ಎಡವಟ್ಟೇ ಕಾರಣ?
ದೆಹಲಿ ಅಸೆಂಬ್ಲಿಗೆ ಚುನಾವಣಾ ಆಯೋಗ ದಿನಾಂಕ ಘೋಷಿಸಿದಾಗ ಬಿಜೆಪಿ ಗೆಲ್ಲುವ ಫೇವರೇಟ್ ಕುದುರೆಯಾಗಿತ್ತು. ನಂತರದ ದಿನಗಳಲ್ಲೂ ಬಿಜೆಪಿ ತನ್ನ ಮುನ್ನಡೆ ಕಾಯ್ದುಕೊಂಡಿತ್ತು. ಇದೇ ಗುಂಗಿನಲ್ಲಿ ಅಮಿತ್ ಶಾ ಅವರ ಏಕಪಕ್ಷೀಯ ನಿರ್ಧಾರಗಳೂ ಮುಂದುವರಿದಿತ್ತು.
ಆದರೆ ಚುನಾವಣೆಯ ದಿನಾಂಕ ಸಮೀಪಿಸುತ್ತಿದ್ದಂತೇ ಪರಿಸ್ಥಿತಿ ಬದಲಾಗಲಾರಂಭಿಸಿತು. ಕೇಜ್ರಿವಾಲ್ ದೆಹಲಿ ಮತದಾರರ ಮನಸ್ಸು ಗೆಲ್ಲುವಲ್ಲಿ ದಾಪುಗಾಲು ಇಡಲಾರಂಭಿಸಿದರು. ದೆಹಲಿ ಚುನಾವಣೆಯ ground reality ಯನ್ನು ತಡವಾಗಿ ಅರ್ಥಮಾಡಿಕೊಂಡ ಅಮಿತ್ ಶಾ ಮತ್ತು ನರೇಂದ್ರ ಮೋದಿ ಪಕ್ಷದ 'ಚಾಣಾಕ್ಷ' ಮುಖಂಡ, ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ಪ್ರಚಾರದ ಜವಾಬ್ದಾರಿ ವಹಿಸಿಕೊಳ್ಳುವಂತೆ ಆಖಾಡಕ್ಕಿಳಿಸಿತು. (ನೆಗೆಟಿವ್ ಪಬ್ಲಿಸಿಟಿ ಬಿಜೆಪಿ ಸೋಲಿಗೆ ಕಾರಣ)
ಮನಸ್ಸಿಲ್ಲದ ಮನಸ್ಸಿನಲ್ಲೇ ಗುರುತರ ಜವಾಬ್ದಾರಿಯನ್ನು ವಹಿಸಿಕೊಂಡ ಜೇಟ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ ಎಂದು ಅಂದೇ ಅಮಿತ್ ಶಾಗೆ ಸೂಕ್ಷ್ಮವಾಗಿ ಸೂಚಿಸಿದ್ದರು ಎನ್ನುವ ಸುದ್ದಿಯೂ ಇದೆ.
ಲೋಕಸಭಾ ಚುನಾವಣೆಯ ನಂತರ ಮತ್ತು ದೆಹಲಿ ಅಸೆಂಬ್ಲಿ ಚುನಾವಣೆಗೆ ಮಹೂರ್ತ ಫಿಕ್ಸ್ ಆಗುವ ಮೊದಲು ಆಮ್ ಆದ್ಮಿ ಪಕ್ಷದ ಕೆಲವು ಮುಖಂಡರೇ 'ಕೇಂದ್ರಕ್ಕೆ ಮೋದಿ, ದೆಹಲಿಗೆ ಕೇಜ್ರಿ' ಎಂದು ಹೇಳಿಕೆ ನೀಡಿದ್ದನ್ನು ನಾವು ಸ್ಮರಿಸಿಕೊಳ್ಳಬಹುದು. ದೆಹಲಿಯ ಜನಾದೇಶ ಮೋದಿ ವಿರುದ್ದ ಅಲ್ಲ ಎನ್ನುವುದೂ ವಾಸ್ತವತೆಗೆ ಹತ್ತಿರವಾಗಿರಬಹುದು.
ಅತಿ ಹೆಚ್ಚು ಲೋಕಸಭಾ ಸೀಟನ್ನು ಹೊಂದಿರುವ ಉತ್ತರಪ್ರದೇಶದ ಜವಾಬ್ದಾರಿ ವಹಿಸಿಕೊಂಡಿದ್ದ ಅಮಿತ್ ಶಾ, ಪಕ್ಷಕ್ಕೆ ಯಾವ ರೀತಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಫಸಲು ತಂದುಕೊಟ್ಟಿದ್ದರು ಎನ್ನುವುದನ್ನು ಯಾರೂ ಮರೆತಿರಲಾರರು. ಮುಂದೆ ಓದಿ..

ಅಮಿತ್ ಶಾ ಓವರ್ ಕಾನ್ಫಿಡೆನ್ಸ್
ಅದಾದ ನಂತರದ ಕೆಲವು ರಾಜ್ಯಗಳ ಚುನಾವಣೆಯಲ್ಲಿನ ಬಿಜೆಪಿ ಸಾಧನೆಯ ಹಿಂದೆ ಅಮಿತ್ ಶಾ ಅವರ ಜಾಣ ನೇರ, ನಿಷ್ಠುರ ನಡೆಗಳು ಪಕ್ಷಕ್ಕೆ ಜಯ ತಂದುಕೊಟ್ಟಿತ್ತು. ಚುನಾವಣೆಯನ್ನು ಎಂದೂ ಲಘುವಾಗಿ ತೆಗೆದುಕೊಳ್ಳದ ಅಮಿತ್ ಶಾ ದೆಹಲಿ ಚುನಾವಣೆಯ ವಿಚಾರದಲ್ಲಿ (ಚುನಾವಣೆಯ ಒಂದು ವಾರದ ಮೊದಲು) ಓವರ್ ಕಾನ್ಫಿಡೆನ್ಸ್ ಆಗಿದಿದ್ದೇ ಶಾ ಮಾಡಿಕೊಂಡ ಮೂಲ ಎಡವಟ್ಟು.

ಅಸೆಂಬ್ಲಿ ವಿಸರ್ಜಿಸದೇ ಇದ್ದದ್ದು
ಲೋಕಸಭಾ ಚುನಾವಣೆ ಗೆದ್ದ ಕೂಡಲೇ ಬರ್ಖಾಸ್ತಿನಲ್ಲಿದ್ದ ದೆಹಲಿ ಅಸೆಂಬ್ಲಿಯನ್ನು ವಿಸರ್ಜಿಸುವ (ಪರೋಕ್ಷವಾಗಿ) ಎಲ್ಲಾ ಅಧಿಕಾರ ಮೋದಿ ಸರಕಾರಕ್ಕೆ ಇತ್ತು. ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದು ಬಿಜೆಪಿಯ ಇನ್ನೊಂದು ತಪ್ಪು. ಆಮ್ ಆದ್ಮಿ ಪಕ್ಷದ ಜನಪ್ರಿಯತೆಯನ್ನು ಮಟ್ಟಹಾಕಲು ಬಿಜೆಪಿ ತನಗಿದ್ದ ಸುವರ್ಣಾವಕಾಶವನ್ನು ಕಳೆದುಕೊಂಡಿತು.

ಮಾಧ್ಯಮದ ಪ್ರಮುಖ ಪಾತ್ರ
ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಯಲ್ಲಿ ದೆಹಲಿ ಬರುವುದರಿಂದ ಕೇಂದ್ರ ಮತ್ತು ದೆಹಲಿ ಸರಕಾರ ಜೊತೆ ಜೊತೆಯಾಗಿ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ, ಬೇರೆ ರಾಜ್ಯಕ್ಕೂ ಮತ್ತು ದೆಹಲಿಗೂ ತುಂಬಾ ವ್ಯತ್ಯಾಸವಿದೆ. ಅಲ್ಲದೇ, ಮಾಧ್ಯಮಗಳ attention ಇಲ್ಲಿ ಹೆಚ್ಚು. ಕೇಜ್ರಿವಾಲ್ ಮಾಧ್ಯಮದವರನ್ನು ಮಿತ್ರರಂತೆ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು, ಬಿಜೆಪಿ ಇಲ್ಲೂ ಮುಗ್ಗರಿಸಿತು.

ಮಧ್ಯಮವರ್ಗದ ಮತಬ್ಯಾಂಕ್
ಮಧ್ಯಮವರ್ಗದ ಮತಬ್ಯಾಂಕಿನ ಮೇಲೆ ಅಮಿತ್ / ಮೋದಿ ಸರಿಯಾದ ರಾಜಕೀಯ ತಂತ್ರ ಬಳಸಿಕೊಳ್ಳಲಿಲ್ಲ, ಅವರ ಮೂಲಭೂತ ಸೌಕರ್ಯದ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಇತ್ತ ಆಮ್ ಆದ್ಮಿ ಪಕ್ಷದ ಮುಖಂಡರು ಮನೆ ಮನೆಗೆ ತೆರಳಿ, ವ್ಯವಸ್ಥಿತ ಪ್ರಚಾರ ನಡೆಸಿದರು. ಕಳೆದ ಬಾರಿ 49 ದಿನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಕ್ಷಮೆಯಾಚಿಸಿದರು. ಇದು ಆಮ್ ಆದ್ಮಿ ಪಕ್ಷಕ್ಕೆ ಚೆನ್ನಾಗಿ ವರ್ಕೌಟ್ ಆಯಿತು, ಜನರ ಅನುಕಂಪ ಗಿಟ್ಟಿಸಿಕೊಂಡರು.

ಬಿಜೆಪಿ ನೆಗೆಟಿವ್ ತಂತ್ರ
ಬಿಜೆಪಿ ಮುಖಂಡರು ಚುನಾವಣೆಯ ವೇಳೆ ಆಮ್ ಆದ್ಮಿ ಪಕ್ಷ ಮತ್ತು ಮುಖಂಡರನ್ನು ಅವಹೇಳನ ಮಾಡುವ ನೆಗೆಟಿವ್ ತಂತ್ರ ಬಳಸಿಕೊಂಡಿತು. ಆದರೆ ಆಮ್ ಆದ್ಮಿ ಎಲ್ಲೂ ಮೋದಿಯನ್ನಾಗಲಿ, ಬಿಜೆಪಿಯನ್ನಾಗಲಿ ಅವಹೇಳನ ಅಥವಾ ವ್ಯಂಗ್ಯವಾಡದೇ issue based ವಿಚಾರವನ್ನು ಮಾತ್ರ ಬಳಸಿಕೊಂಡು ಸೈ ಎನಿಸಿಕೊಂಡಿತು.

ಅಲ್ಪಸಂಖ್ಯಾತರ ಮತಬ್ಯಾಂಕ್
ಬಿಜೆಪಿಗೆ ತೀವ್ರ ಹೊಡೆತ ಬಿದ್ದದ್ದು ವ್ಯಾಪಾರಸ್ಥರಿಂದ ಮತ್ತು ಅಲ್ಪಸಂಖ್ಯಾತ ಮತಬ್ಯಾಂಕ್ ನಿಂದ. ವ್ಯಾಪಾರಸ್ಥರು ಕಿರಣ್ ಬೇಡಿ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದಕ್ಕೆ ಬಿಜೆಪಿ ಮೇಲೆ ಸಿಟ್ಟಾದರೆ, ಅಲ್ಪಸಂಖ್ಯಾತರು ಬಿಜೆಪಿ ವಿರುದ್ದ ಬೀಳಲು ಹೆಚ್ಚಿನ ಕಾರಣದ ಅವಶ್ಯಕತೆ ಇರುವುದಿಲ್ಲ. ಆದರೂ ನಾಲ್ಕು ಮಕ್ಕಳು ಹೆರಬೇಕು, ಘರ್ ವಾಪ್ಸಿ ಮುಂತಾದ ಕಾರ್ಯಕ್ರಮಗಳು ಬಿಜೆಪಿಗೆ ಬರುವ ಅಲ್ಪಸ್ವಲ್ಪ ಮತಕ್ಕೂ ಸಂಚಕಾರವನ್ನು ತಂದೊಡ್ಡಿತು.

ಆಡ್ವಾಣಿ ಮೂಲೆಗುಂಪು
ಆಡ್ವಾಣಿ ಅವರನ್ನು ಪಕ್ಷ ಸಂಪೂರ್ಣವಾಗಿ ಮೂಲೆಗುಂಪು ಮಾಡಿದ್ದು, ದೆಹಲಿಯ ಹಿರಿಯ ಮತದಾರರಿಗೆ ಬಿಜೆಪಿಯ ಮೇಲೆ ಸಿಟ್ಟಾಗಲು ಒಂದು ಕಾರಣ ಎನ್ನುವ ಮಾತೂ ಕೇಳಿ ಬರುತ್ತಿದೆ. ಗ್ರಾಸ್ ರೂಟ್ ಕಾರ್ಯಕರ್ತರ, ಮುಖಂಡರ ಮಾತಿಗೆ ಬೆಲೆ ಕೊಡದೇ ಇದ್ದದ್ದು ದೆಹಲಿ ಚುನಾವಣೆಯಲ್ಲಿ ಪಕ್ಷದ ಅಧೋಗತಿಗೆ ಕಾರಣ ಎಂದೂ ಹೇಳಲಾಗುತ್ತಿದೆ.

ಬಿಹಾರ, ಉತ್ತರಪ್ರದೇಶ ಚುನಾವಣೆ
ದೆಹಲಿ ಚುನಾವಣೆಯಲ್ಲಿ ಮಧ್ಯಾಹ್ನ ಮೂರರಿಂದ ತುರುಸಿನ ಮತದಾನ ನಡೆದಿದೆ. ಆಪ್ ಕಾರ್ಯಕರ್ತರು ಮನೆಮನೆಗೆ, ಕಚೇರಿಗೆ ತೆರಳಿ ವೋಟ್ ಮಾಡದೇ ಇರುವವರಿಂದ ಮತದಾನ ಮಾಡಿಸುವಲ್ಲಿ ಯಶಸ್ವಿಯಾದರು. ಇದರಲ್ಲಿ ಹೆಚ್ಚಾಗಿ ಅಲ್ಪಸಂಖ್ಯಾತರು ಎನ್ನುವುದು ಕೂಡಾ ಗಮನಿಸಬೇಕಾದ ಅಂಶ. ಒಂದು ಚುನಾವಣೆ ಸೋತರೆ ಮೋದಿ ಜನಪ್ರಿಯತೆ ಕಮ್ಮಿಯಾದಂತಲ್ಲ, ಅಮಿತ್ ಶಾ ರಾಷ್ಟ್ರಾಧ್ಯಕ್ಷ ಹುದ್ದೆಗೆ ಅನರ್ಹ ಎಂದಲ್ಲ. ಇದು ಬಿಜೆಪಿಗೆ ಎಚ್ಚರಿಕೆಯ ಗಂಟೆ, ಬಿಹಾರ ಮತ್ತು ಉತ್ತರಪ್ರದೇಶ ಚುನಾವಣೆ ಮುಂದಿದೆ.












Click it and Unblock the Notifications