ರಾಷ್ಟ್ರಪತಿ ಕೋವಿಂದ್ ಆರೋಗ್ಯ ಸ್ಥಿರ: ಏಮ್ಸ್ಗೆ ದಾಖಲಿಸಲು ಸಲಹೆ
ನವದೆಹಲಿ, ಮಾರ್ಚ್ 27: ಎದೆನೋವಿನ ಕಾರಣದಿಂದ ಸೇನಾ ಆಸ್ಪತ್ರೆಗೆ ದಾಖಲಾಗಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ಗೆ (ಏಮ್ಸ್) ದಾಖಲಿಸುವಂತೆ ಸಲಹೆ ನೀಡಲಾಗಿದೆ.
ಪ್ರಸ್ತುತ ರಾಮನಾಥ್ ಕೋವಿಂದ್ ಅವರ ಆರೋಗ್ಯವು ಸ್ಥಿರವಾಗಿದೆ. ಆದರೆ ಮಾರ್ಚ್ 30ರಂದು ಬೈಪಾಸ್ ಸರ್ಜರಿ ಮಾಡುವುದಕ್ಕೆ ವೈದ್ಯರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಗೆ ಶುಕ್ರವಾರ ದಾಖಲಾಗಿದ್ದ ರಾಮನಾಥ್ ಕೋವಿಂದ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಶನಿವಾರ ತಿಳಿಸಿದ್ದಾರೆ. ಎದೆನೋವಿನ ಕಾರಣದಿಂದ ದಾಖಲಾಗಿರುವ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ.
'ಮಾಮೂಲಿ ವೈದ್ಯಕೀಯ ತಪಾಸಣೆಗಳ ಬಳಿಕ ರಾಷ್ಟ್ರಪತಿ ಅವರನ್ನು ವೈದ್ಯರು ನೋಡಿಕೊಳ್ಳುತ್ತಿದ್ದಾರೆ. ತಮ್ಮ ಆರೋಗ್ಯದ ಕುರಿತು ಮಾಹಿತಿ ತಿಳಿದು ಪ್ರಾರ್ಥಿಸುತ್ತಿರುವ ಮತ್ತು ಶುಭಾ ಹರಸುತ್ತಿರುವವರಿಗೆ ರಾಷ್ಟ್ರಪತಿಯವರು ಧನ್ಯವಾದ ಸಲ್ಲಿಸಿದ್ದಾರೆ' ಎಂದು ರಾಷ್ಟ್ರಪತಿ ಕಚೇರಿ ಟ್ವೀಟ್ ಮಾಡಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಲ್ಲಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೇನಾ ಸಂಶೋಧನಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಾಂಗ್ಲಾದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಕೋವಿಂದ್ ಅವರ ಆರೋಗ್ಯ ಸ್ಥಿರವಾಗಿರುವುದರಿಂದ ಹೆಚ್ಚಿನ ತಪಾಸಣೆಗಾಗಿ ಏಮ್ಸ್ಗೆ ಕರೆದೊಯ್ಯುವುದು ಸೂಕ್ತ ಎಂದು ಸೇನಾ ಆಸ್ಪತ್ರೆ ಸಲಹೆ ನೀಡಿದೆ.












Click it and Unblock the Notifications