ಕಾಂಗ್ರೆಸ್ ಮತ್ತೊಂದು ಬೂಟಾಟಿಕೆ; ಶಶಿ ತರೂರ್ ಹಳೇ ಟ್ವೀಟ್ ಹಂಚಿಕೊಂಡ ಜಾವಡೇಕರ್
ನವದೆಹಲಿ, ಫೆಬ್ರುವರಿ 06: ಧಾನ್ಯಗಳ ಶೇಖರಣೆಯಲ್ಲಿ ಖಾಸಗಿ ವಲಯದ ಅಗತ್ಯವಿರುವ ಉಲ್ಲೇಖ ಹೊಂದಿದ್ದ, ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ಹಳೆಯ ಟ್ವೀಟ್ ಒಂದನ್ನು ಹಂಚಿಕೊಂಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, "ಕಾಂಗ್ರೆಸ್ ಈಗ ಇದಕ್ಕೆ ತದ್ವಿರುದ್ಧವಾಗಿ ಯೋಚಿಸುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ. ಶಶಿ ತರೂರ್ ಅವರದ್ದು ಬರೀ ಬೂಟಾಟಿಕೆ ಎಂದು ಆರೋಪಿಸಿದ್ದಾರೆ.
2010ರ ಜನವರಿ 23ರಂದು ಶಶಿ ತರೂರ್ ಆ ಟ್ವೀಟ್ ಮಾಡಿದ್ದು, ಅದರಲ್ಲಿ, ಪ್ರತಿ ವರ್ಷ ಭಾರತ ಸೂಕ್ತ ಧಾನ್ಯ ಶೇಖರಣೆ ಹಾಗೂ ವಿತರಣೆ ವ್ಯವಸ್ಥೆಯಿಲ್ಲದೇ ಅಧಿಕ ಮಟ್ಟದಲ್ಲಿ ಗೋಧಿಯನ್ನು ವ್ಯರ್ಥ ಮಾಡುತ್ತಿದೆ. ಆಸ್ಟ್ರೇಲಿಯಾ ಬೆಳೆಯುವಷ್ಟು ಧಾನ್ಯವನ್ನು ವಾರ್ಷಿಕ ನಾವು ವ್ಯರ್ಥ ಮಾಡುತ್ತಿದ್ದೇವೆ. ಧಾನ್ಯ ಸಂಗ್ರಹಣೆ ವಿಷಯದಲ್ಲಿ ಖಾಸಗಿ ವಲಯದ ನಿಜವಾದ ಅಗತ್ಯವಿದೆ ಎಂದು ಬರೆದುಕೊಂಡಿದ್ದರು.
ಈ ಟ್ವೀಟ್ ಸ್ಕ್ರೀನ್ ಶಾಟ್ ತೆಗೆದು ಹಂಚಿಕೊಂಡಿರುವ ಪ್ರಕಾಶ್ ಜಾವಡೇಕರ್, "ಕಾಂಗ್ರೆಸ್ ಬೂಟಾಟಿಕೆಯ ಮತ್ತೊಂದು ಮುಖ ಇದು. 2010ರ ಈ ಟ್ವೀಟ್ ನೋಡಿ. ಈಗ ಕಾಂಗ್ರೆಸ್ ಎಷ್ಟು ವಿರೋಧವಾಗಿ ಮಾತನಾಡುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಶಶಿ ತರೂರ್, "ನನ್ನ ಹಳೆ ಟ್ವೀಟ್ ನಲ್ಲಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ತೆಗೆದುಹಾಕಬೇಕು ಎಂದು ನಾನೇನಾದರೂ ಉಲ್ಲೇಖಿಸಿದ್ದೇನೆಯೇ? ರೈತರ ಬೇಡಿಕೆ ಏನು ಎಂಬುದಾದರು ನಿಮಗೆ ತಿಳಿದಿದೆಯೇ? ಮಾಹಿತಿ ಹಾಗೂ ಪ್ರಸಾರ ಸಚಿವರೇ ನೀವು ಈ ರೀತಿ ತಪ್ಪು ಮಾಹಿತಿಯನ್ನು ಹರಡುವುದನ್ನು ನಿಲ್ಲಿಸಿದರೆ ಒಳ್ಳೆಯದು" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಮೂರು ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಈಚೆಗೆ ಗಣರಾಜ್ಯೋತ್ಸವ ದಿನದಂದು ರೈತರ ಮೆರವಣಿಗೆ ಸಂದರ್ಭ ನಡೆದ ಹಿಂಸಾಚಾರದ ವೇಳೆ ಯುವಕನೊಬ್ಬ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡುವ ಟ್ವೀಟ್ ಮಾಡಿದ್ದಕ್ಕಾಗಿ ಸಂಸದ ಶಶಿ ತರೂರ್ ಮೇಲೆ ಪ್ರಕರಣ ದಾಖಲಿಸಲಾಗಿತ್ತು.












Click it and Unblock the Notifications