4 ದಿನದ ಬಳಿಕ ಪ್ರಮಾಣ ವಚನ ಸ್ವೀಕರಿಸಿದ ಪ್ರಜ್ವಲ್ ರೇವಣ್ಣ: ಕಾರಣವೇನು?
Recommended Video
ನವದೆಹಲಿ, ಜೂನ್ 21: ಹದಿನೇಳನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಿ ನಾಲ್ಕು ದಿನಗಳ ನಂತರ ಐದನೇ ದಿನ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಇಂದು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಜೂನ್ 17 ರಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದೆ. ಪ್ರಧಾನಿ ಮೋದಿ ಸೇರಿದಂತೆ ಬಹುತೇಕ ಎಲ್ಲ ಸಂಸದರು ಪ್ರಮಾಣ ವಚನ ಸ್ವೀಕರಿಸಿದರು, ಆದರೆ ಹಾಸನ ಸಂಸದ ಜೆಡಿಎಸ್ನ ಪ್ರಜ್ವಲ್ ರೇವಣ್ಣ ಅವರು ಮಾತ್ರ ಪ್ರಮಾಣ ವಚನ ಸ್ವೀಕರಿಸಿರಲಿಲ್ಲ.
ಪ್ರಜ್ವಲ್ ರೇವಣ್ಣ ಅವರು ಇಂದು ತಮ್ಮ ತಂದೆ ಸಚಿವ ಎಚ್.ಡಿ.ರೇವಣ್ಣ, ತಾಯಿ ಭವಾನಿ ರೇವಣ್ಣ ಅವರ ಆಶೀರ್ವಾದ ಪಡೆದು, ಗಣೇಶನಿಗೆ ನಮಿಸಿ ಮೋದಿ ಅವರ ರೀತಿಯ ಉಡುಪು ಧರಿಸಿ ಸಂಸತ್ಗೆ ಹೆಜ್ಜೆ ಇಟ್ಟಿದ್ದಾರೆ.

ನಾಲ್ಕು ದಿನ ಸದನಕ್ಕೆ ಗೈರಾಗಿದ್ದು ಏಕೆ?
ಮೊದಲ ಬಾರಿಗೆ ಸಂಸದರಾಗಿರುವ ಪ್ರಜ್ವಲ್ ರೇವಣ್ಣ ಅವರು ನಾಲ್ಕು ದಿನಗಳ ಕಾಲ ಸಂಸತ್ಗೆ ಗೈರಾಗಿದ್ದು ಏಕೆ ಎಂಬ ಪ್ರಶ್ನೆಗೆ ಅವರೇ ಉತ್ತರಿಸಿದ್ದು, ಆರೋಗ್ಯ ಸರಿ ಇಲ್ಲದ ಕಾರಣ ಅವರು ಸಂಸತ್ಗೆ ಹೋಗಲು ಸಾಧ್ಯವಾಗಿರಲಿಲ್ಲವಂತೆ. ಹಾಗಾಗಿ ಇಂದು ಸಂಸತ್ ಪ್ರವೇಶಿಸಿದ್ದಾರೆ.

ಮಗನ ಪ್ರಮಾಣ ವಚನ ನೋಡಲು ದೆಹಲಿಗೆ ರೇವಣ್ಣ ದಂಪತಿ
ಮಗ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ಕಣ್ಣು ತುಂಬಿಕೊಳ್ಳಲು ತಾಯಿ ಭವಾನಿ ರೇವಣ್ಣ, ತಂದೆ ಎಚ್.ಡಿ.ರೇವಣ್ಣ ಅವರೂ ಸಹ ಸಂಸತ್ಗೆ ಭೇಟಿ ನೀಡಿದ್ದರು.

ಪ್ರಮಾಣ ವಚನ ತಡವಾಗಿದ್ದಕ್ಕೆ ಎಚ್.ಡಿ.ರೇವಣ್ಣ ಕಾರಣ?
ಪ್ರಜ್ವಲ್ ರೇವಣ್ಣ ಅವರು ಮೊದಲ ದಿನ ಪ್ರಮಾಣ ವಚನ ಸ್ವೀಕರಿಸದೇ ಇದ್ದುದಕ್ಕೆ ತಂದೆ ಎಚ್.ಡಿ.ರೇವಣ್ಣ ಅವರೇ ಕಾರಣ ಎಂಬ ಸುದ್ದಿಯೂ ಹಬ್ಬಿತ್ತು. ಜಾತಕ, ಜೋತಿಷ್ಯ ನಂಬಿಕೆಯ ರೇವಣ್ಣ ಅವರು, ಸರಿಯಾದ ಸಮಯ ನೋಡಿ ಪ್ರಜ್ವಲ್ ರೇವಣ್ಣ ಪ್ರಮಾಣ ವಚನ ಸ್ವೀಕರಿಸಲಿ ಎಂದು ಮೊದಲ ದಿನ ಪ್ರಮಾಣ ವಚನ ಸ್ವೀಕರಿಸಲು ಬಿಟ್ಟಿಲ್ಲ ಎನ್ನಲಾಗಿತ್ತು!

ಹಾಸನದಿಂದ ಸ್ಪರ್ಧಿಸಿದ್ದ ಪ್ರಜ್ವಲ್
ಪ್ರಜ್ವಲ್ ರೇವಣ್ಣ ಅವರು ಹಾಸನದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಅವರು ಬಿಜೆಪಿಯ ಎ.ಮಂಜು ಅವರನ್ನು ಸೋಲಿಸಿ ಸಂಸತ್ ಪ್ರವೇಶಿಸಿದ್ದಾರೆ. ಈ ಬಾರಿ ಸಂಸತ್ ಪ್ರವೇಶಿಸಿದ ಏಕೈಕ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಆಗಿದ್ದಾರೆ.












Click it and Unblock the Notifications