3 ವರ್ಷದ ಹಿಂದಿನ ಥ್ರಿಲ್ಲರ್ ಹತ್ಯೆ ಪ್ರಕರಣ ಭೇದಿಸಿದ ದೆಹಲಿ ಪೊಲೀಸರು!
ನವದೆಹಲಿ, ಜನವರಿ 11: ಮೂರು ವರ್ಷದ ಹಿಂದೆ ಸೋದರ ಸಂಬಂಧಿಯನ್ನು ವ್ಯಕ್ತಿಯೊಬ್ಬ ಕೊಂದು ಬಾಲ್ಕನಿಯ ಗಾರ್ಡನ್ ನಲ್ಲಿ ಆತನ ದೇಹವನ್ನು ಹೂತಿಟ್ಟಿದ್ದ ಶಾಕಿಂಗ್ ಪ್ರಕರಣವನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ.
ಒಡಿಶಾ ಮೂಲದ ಬಿಜಯ್ ಕುಮಾರ್ ಮಹಾರಾಣ ಎಂಬ ವ್ಯಕ್ತಿ ದೆಹಲಿಯ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆತ ಪ್ರೀತಿಸುತ್ತಿದ್ದ ಹುಡುಗಿಯ ವಿಷಯಕ್ಕಾಗಿ ಸೋದರ ಸಂಬಂಧಿ ಜೈ ಪ್ರಕಾಶ್ ಮತ್ತು ಬಿಜಯ್ ಕುಮಾರ್ ಅವರ ನಡುವೆ ಮನಸ್ತಾಪ ಉಂಟಾಗಿತ್ತು.
2016 ರಲ್ಲಿ ಇದ್ದಕ್ಕಿದ್ದಂತೆ ಜೈ ಪ್ರಕಾಶ್ ಕಾಣೆಯಾಗಿದ್ದು, ಸ್ವತಃ ಬಿಜಯ್ ಕುಮಾರ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದ. ತನ್ನೊಂದಿಗೆ ದೆಹಲಿಯ ಫ್ಲ್ಯಾಟ್ ವೊಂದರಲ್ಲಿ ವಾಸಿಸುತ್ತಿದ್ದ ಜೈ ಪ್ರಕಾಶ್ ಕೆಲವು ದಿನಗಳಿಂದ ಕಾಣೆಯಾಗಿದ್ದಾನೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದ. ಮೊದಲಿಗೆ ಪೊಲೀಸರಿಗೆ ಬಿಜಯ್ ಕುಮಾರ್ ಮೇಲೆ ಯಾವುದೇ ಅನುಮಾನ ಬಂದಿರಲಿಲ್ಲ. ಸಾಕ್ಷ್ಯಾಧಾರವಿಲ್ಲದೆ ಪ್ರಕರಣವನ್ನು ಮುಚ್ಚುವ ಹಂತಕ್ಕೆ ಬರುವವರೆಗೂ ಪೊಲೀಸರಿಗೆ ಯಾವುದೇ ಅನುಮಾನ ಬರದಷ್ಟು ನಾಜೂಕಾಗಿ ಆತ ಪಿತೂರಿ ಹೆಣೆದಿದ್ದ.

ಏನಿದು ಘಟನೆ?
ಒಡಿಶಾದ ಗಂಜಮ್ ಮೂಲದ ಬಿಜಯ್ ಕುಮಾರ್ ಮಹಾರಾಣ 2012 ರಲ್ಲಿ ಕೆಲಸದ ನಿಮಿತ್ತ ದೆಹಲಿಗೆ ತೆರಳಿದ್ದ. ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದ ಆತ, ದೆಹಲಿಯಲ್ಲಿ ಆಗಾಗ ಆಕೆಯನ್ನು ಭೇಟಿ ಮಾಡುತ್ತಿದ್ದ. 2015 ರಲ್ಲಿ ಬಿಜಯ್ ನ ಸೋದರ ಸಂಬಂಧಿ ಜೈ ಪ್ರಕಾಶ್ ಸಹ ದೆಹಲಿಗೆ ಬಂದು ಬಿಜಯ್ ಇದ್ದ ಪ್ಲ್ಯಾಟಿನಲ್ಲೇ ವಾಸಿಸುತ್ತಿದ್ದ. ಕ್ರಮೇಣ ಬಿಜಯ್ ಪ್ರೀತಿಸುತ್ತಿದ್ದ ಯುವತಿಯನ್ನು ಜೈ ಪ್ರಕಾಶ್ ಪರಿಚಯ ಮಾಡಿಕೊಂಡಿದ್ದರು. ಆದರೆ ಜೈ ಪ್ರಕಾಶ್ ಮತ್ತು ತನ್ನ ಪ್ರಿಯತಮೆ ಹೆಚ್ಚು ಮಾತನಾಡುವುದು ಬಿಜಯ್ ಗೆ ಇಷ್ಟವಾಗುತ್ತಿರಲಿಲ್ಲ.

ಸಂಚು ಹೆಣೆದ ಬಿಜಯ್
ಜೈಪ್ರಕಾಶ್ ಮತ್ತು ತನ್ನ ಪ್ರಿಯತಮೆಯ ನಡುವೆ ಅಕ್ರಮ ಸಂಬಂಧವಿದೆ ಎಂಬ ಅನುಮಾನ ಬಿಜಯ್ ಗೆ ಶುರುವಾಗಿತ್ತು. 2016 ರ ಫೆಬ್ರವರಿ 6 ರಂದು ಜೈಪ್ರಕಾಶ್ ಮಲಗಿದ್ದ ಸಮಯದಲ್ಲಿ ಸೀಲಿಂಗ್ ಫ್ಯಾನಿನ ಮೋಟಾರ್ ನಿಂದ ಆತನ ತಲೆಗೆ ಜೋರಾಗಿ ಏಟು ಕೊಟ್ಟು ಆತನನ್ನು ಅಲ್ಲಿಯೇ ಕೊಂದುಹಾಕಿದ್ದ.

ಶವವನ್ನು ಬಾಲ್ಕನಿಯಲ್ಲಿ ಹೂತಿಟ್ಟ ಬಿಜಯ್!
ಮೊದಲೇ ವ್ಯವಸ್ಥಿತ ತಂತ್ರ ರೂಪಿಸಿದ್ದ ಬಿಜಯ್ ತನ್ನ ಬಾಲ್ಕನಿಯಲ್ಲಿ ಒಂದಷ್ಟು ಮಣ್ಣು ತಂದುಹಾಕಿದ್ದ. ಬಾಲ್ಕನಿಯಲ್ಲಿ ಗಾರ್ಡನ್ ಮಾಡಬೇಕೆಂದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದ. ಜೈ ಪ್ರಕಾಶ್ ನನ್ನು ಕೊಂದ ನಂತರ ಆತನ ದೇಹವನ್ನು ಎಳೆದುಕೊಂಡು ಬಂದು ತಮ್ಮ ಮನೆಯ ಬಾಲ್ಕನಿಯ ಮಣ್ಣಿನಲ್ಲಿ ಹೂತಿಟ್ಟು, ಅಲ್ಲಿ ಅನುಮಾನ ಬಾರದಂತೆ ಗಿಡಗಳನ್ನು ನೆಟ್ಟಿದ್ದ.

ಪೊಲೀಸರಿಗೆ ತಾನೇ ದೂರು ನೀಡಿದ್ದ!
ಜೈ ಪ್ರಕಾಶ್ ನನ್ನು ತಾನೇ ಕೊಂದು, ನಂತರ ಪೊಲೀಸರಿಗೆ ತಾನೇ ನಾಪತ್ತೆ ದೂರು ನೀಡಿದ್ದ. ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಹೋಗಿದ್ದ ಜೈಪ್ರಕಾಶ್ ಮನೆಗೆ ವಾಪಸ್ ಬರಲಿಲ್ಲ ಎಂದಿದ್ದ. ಈ ಘಟನೆಯ ನಂತರ ಆತ 2017 ರಲ್ಲಿ ಹೈದರಾಬಾದಿನಲ್ಲಿ ವಾಸಿಸತೊಡಗಿದ್ದ. ತಾನಯ ಸೋದರ ಸಂಬಂಧಿಯನ್ನು ಕೊಂದಿದ್ದೇನೆ ಎಂಬುದೇ ಮರೆತು ಹೋಗುವಷ್ಟು ಹಾಯಾಗಿದ್ದ!

ಮುಚ್ಚಿಹೋಗುತ್ತಿದ್ದ ಪ್ರಕರಣಕ್ಕೆ ಮರುಜೀವ!
ಜೈ ಪ್ರಕಾಶ್ ಪತ್ತೆಯೂ ಆಗದೆ, ಶವವೂ ಸಿಗದೆ ಈ ಪ್ರಕರಣ ಬಹುತೇಕ ಮುಚ್ಚಿಹೋಗುವ ಹಂತದಲ್ಲಿದ್ದಾಗ ಅದಕ್ಕೆ ಮರುಜೀವ ಸಿಕ್ಕಿದ್ದು, ಬಿಜಯ್ ವಾಸಿಸುತ್ತಿದ್ದ ದೆಹಲಿಯ ಫ್ಲ್ಯಾಟ್ ಅನ್ನು ರಿನೋವೇಟ್ ಮಾಡಲು ಹೊರಟಾಗ ಬಾಲ್ಕನಿಯ ಗಾರ್ಡನ್ನಿನ ಮಣ್ಣಿನಲ್ಲಿ ಅಸ್ಥಿಪಂಜರವೊಂದು ಸಿಕ್ಕಾಗ! ಎರಡು ವಾರಗಳ ಸತತ ಪ್ರಯತ್ನದ ನಂತರ ಹೈದರಾಬಾದಿನಲ್ಲಿದ್ದ ಬಿಜಯ್ ನನ್ನು ಪತ್ತೆ ಮಾಡಲು ಪೊಲೀಸರು ಯಶಸ್ವಿಯಾಗಿದ್ದು, ಆತ ತಪ್ಪೊಪ್ಪಿಕೊಂಡಿದ್ದಾನೆ.












Click it and Unblock the Notifications