ಮನಿ ಲಾಂಡ್ರಿಂಗ್ ಕೇಸ್: ಡಿಕೆಶಿ ಆಪ್ತವಲಯದ ಬೆಳಗಾವಿ ಶಾಸಕಿ ಲಕ್ಷ್ಮಿಗೆ 'ಇಡಿ' ಸಮನ್ಸ್
ನವದೆಹಲಿ, ಸೆ. 17: ಮನಿಲಾಂಡ್ರಿಂಗ್ ಕೇಸಿನಲ್ಲಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಅವರ ಆಪ್ತರಿಗೆ ಜಾರಿ ನಿರ್ದೇಶನಾಲಯ(ಇಡಿ) ನೀಡಿದ ಸಮನ್ಸ್ ಜಾರಿಯಲ್ಲಿದೆ. ಇಲ್ಲಿ ತನಕ ಸುಮಾರು 9 ಮಂದಿಯನ್ನು ವಿಚಾರಣೆಗೊಳಪಡಿಸಿದ್ದೇವೆ ಎಂದು ದೆಹಲಿ ವಿಶೇಷ ನ್ಯಾಯಾಲಯದಲ್ಲಿ ಇಡಿ ಅಧಿಕಾರಿಗಳು ಹೇಳಿದ್ದಾರೆ. ಈ ನಡುವೆ ಮಹತ್ವದ ಬೆಳವಣಿಗೆಯಲ್ಲಿ ಡಿಕೆಶಿ ಆಪ್ತವಲಯದ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಮಂಗಳವಾರದಂದು ಇಡಿ ನೋಟಿಸ್ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಸೆ. 14ರಂದು ದೆಹಲಿಯ ಇಡಿ ಕಚೇರಿಗೆ ಆಗಮಿಸುವಂತೆ ಸೂಚಿಸಿದ್ದರು. ಆದರೆ, ಬೇರೆ ದಿನಾಂಕ ನೀಡುವಂತೆ ಕೋರಿದ್ದೆ. ಸೆ. 17ರಂದು ಮತ್ತೊಮ್ಮೆ ಹೊಸ ದಿನಾಂಕ ನಿಗದಿ ಮಾಡಿ ಸಮನ್ಸ್ ಕಳಿಸಿದ್ದಾರೆ. ಅದರಂತೆ ನಾಳೆ(ಸೆ. 18) ಇಡಿ ಕಚೇರಿಯಿರುವ ದೆಹಲಿಯ ಲೋಕನಾಯಕ ಭವನಕ್ಕೆ ತೆರಳುತ್ತೇನೆ, ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ" ಎಂದಿದ್ದಾರೆ
ಡಿ.ಕೆ.ಶಿವಕುಮಾರ್ ಅವರಿಗೆ ಸೇರಿರುವ ದೆಹಲಿಯ ಫ್ಲಾಟ್ ನಲ್ಲಿ ಸಿಕ್ಕ 8.69 ಕೋಟಿ ರು ಬಗ್ಗೆ ಪ್ರಶ್ನಿಸಲು ಇಡಿ ಮುಂದಾಗಿದ್ದು ಈ ಕುರಿತಂತೆ ಸಮನ್ಸ್ ನೀಡಲಾಗಿದೆ. ಸದ್ಯ ಇಡಿ ಬಂಧನದಲ್ಲಿರುವ ಡಿಕೆಶಿ ಅವರ ಜಾಮೀನು ಅರ್ಜಿ ವಿಚಾರಣೆ ಕೂಡಾ ಸೆ.18ಕ್ಕೆ ಮುಂದೂಡಲಾಗಿದ್ದು, ಡಿಕೆಶಿಗೆ ನ್ಯಾಯಾಂಗ ಬಂಧನ ವಿಧಿಸಿ ದೆಹಲಿಯ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಈ ನಡುವೆ ಡಿಕೆ ಶಿವಕುಮಾರ್ ಆಪ್ತರಾದ ಸಚಿನ್ ನಾರಾಯಣ್, ಸುನಿಲ್ ಶರ್ಮಾ, ಆಂಜನೇಯ, ಹನುಮಂತಯ್ಯ ಅವರಿಗೆ ಬಂಧನದಿಂದ ಒಂದು ತಿಂಗಳ ತನಕ ತಾತ್ಕಾಲಿಕ ರಕ್ಷಣೆ ಸಿಕ್ಕಿದ್ದು, ವಿಚಾರಣೆಗೆ ಹಾಜರಾಗುವಂತೆ ಕರ್ನಾಟಕ ಹೈಕೋರ್ಟ್ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ದೆಹಲಿಯ ಫ್ಲಾಟಿನಲ್ಲಿ ಮೊತ್ತವಲ್ಲದೆ, 200 ಕೋಟಿ ರು ಗೂ ಅಧಿಕ ಅವ್ಯವಹಾರ ನಡೆದಿದ್ದು, 20 ಬ್ಯಾಂಕ್ ಗಳ 317 ಬ್ಯಾಂಕ್ ಗಳ ಡೀಟೈಲ್ ಸಿಕ್ಕಿಲ್ಲ ಆಪ್ತರ ಮೂಲಕ ಹಣ ಅವ್ಯವಹಾರ ಹಾಗೂ ಸಾಗಾಟ ದಾಖಲೆಗಳು ಲಭ್ಯವಿಲ್ಲ ಎಂದು ಇಡಿ ಅಧಿಕಾರಿಗಳು ದೆಹಲಿ ಕೋರ್ಟಿನಲ್ಲಿ ಇಂದು ವಾದಿಸಿದರು.












Click it and Unblock the Notifications