ಅಲ್ಪಸಂಖ್ಯಾತರೇ ನಿಮ್ಮ ರಕ್ಷಣೆಗೆ ನಾವಿದ್ದೇವೆ : ಮೋದಿ ಅಭಯ
ನವದೆಹಲಿ, ಫೆ. 17: ಘರ್ ವಾಪಸಿ ಹಾಗೂ ರಾಷ್ಟ್ರ ರಾಜಧಾನಿಯಲ್ಲಿ ಚರ್ಚ್ ಮೇಲೆ ನಡೆದಿದ್ದ ದಾಳಿ ಹಿನ್ನೆಲೆಯಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಯಾವುದೇ ಪ್ರತಿಕ್ರಿಯೆ ನೀಡದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಆದರೆ, ನರೇಂದ್ರ ಮೋದಿ ಅವರು ತಮ್ಮ ಸರ್ಕಾರ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಕಟಿಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ. ನವದೆಹಲಿಯ ಕ್ರಿಶ್ಚಿಯನ್ ಸಮುದಾಯದ ಸಂತರ ಸಭೆಯಲ್ಲಿ ಅವರು ಮಾತನಾಡಿದ್ದಾರೆ.
"ಅಲ್ಪಸಂಖ್ಯಾತರಿರಲಿ, ಬಹುಸಂಖ್ಯಾತರಿರಲಿ, ಯಾವುದೇ ಧಾರ್ಮಿಕ ಗುಂಪು ಮತ್ತೊಬ್ಬರ ಮೇಲೆ ದಾಳಿ ಮಾಡಲು ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ. ಭಾರತದಲ್ಲಿ ಪ್ರತಿಯೊಬ್ಬರಿಗೂ ಇಚ್ಛಿಸಿದ ಧರ್ಮ ಅನುಸರಿಸುವ ಸ್ವಾತಂತ್ರ್ಯವಿದೆ" ಎಂದು ಹೇಳಿದ್ದಾರೆ. [ಹಿಂದೂ ದೇಗುಲದ ಮೇಲೆ ದಾಳಿ]

ಸ್ವಾಮಿ ವಿವೇಕಾನಂದ ಅವರನ್ನು ನೆನೆಸಿಕೊಂಡ ಮೋದಿ, "ಭಾರತದಲ್ಲಿರುವ ಪ್ರತಿಯೊಬ್ಬರೂ ಸಮಾನ ಗೌರವ ಹೊಂದಿದ್ದಾರೆ. ಪ್ರತಿ ಧರ್ಮವೂ ಸತ್ಯವನ್ನು ಹೊಂದಿವೆ" ಎಂದು ಹೇಳಿದರು.
ಸಂತ ಇಯುಫ್ರಾಸಿಯಾ ಅವರನ್ನು ಹೊಗಳಿದ ಮೋದಿ, "ಅವರು ತಮ್ಮ ಜೀವನವನ್ನು ಪ್ರಾರ್ಥನೆ ಹಾಗೂ ಭಕ್ತಿಗಾಗಿ ಮೀಸಲಿಟ್ಟಿದ್ದರು" ಎಂದು ಶ್ಲಾಘಿಸಿದರು.
ಆರ್ಚ್ಬಿಷಪ್ ಜಾರ್ಜ್ ಅಲೆಂಚೆರ್ರಿ ಅವರು ಚರ್ಚ್ ಮೇಲೆ ನಡೆದ ಆಕ್ರಮಣ ಹಾಗೂ ಮತಾಂತರ ವಿರೋಧಿ ಕಾನೂನು ತರುವ ಪ್ರಸ್ತಾವವನ್ನು ವಿರೋಧಿಸಿದರು. ಆದರೆ, ಚರ್ಚ್ ಮೇಲೆ ದಾಳಿ ನಡೆಸಿದವರ ವಿರುದ್ಧ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ ಎಂದು ಶ್ಲಾಘಿಸಿದರು.
ನಂತರ ಕೇಂದ್ರ ವಿತ್ತ ಸಚಿವ ಅರುಣ್ ಜೈಟ್ಲಿ ನರೇಂದ್ರ ಮೋದಿ ಅವರ ಮಾತನ್ನು ಬೆಂಬಲಿಸಿದರು. ಚರ್ಚ್ ಮೇಲೆ ದಾಳಿ ನಡೆಸಿದ ಆರೋಪಿಗಳ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.












Click it and Unblock the Notifications