ಸಂವಿಧಾನಕ್ಕೆ ಮಾಡಿದ ಅವಮಾನ : ಮೋದಿ ವಿರುದ್ಧ ರಾಹುಲ್ ಕಿಡಿ
ನವದೆಹಲಿ, ಅಕ್ಟೋಬರ್ 26 : "ಪ್ರಧಾನಿಯವರು ಓಡಿ ಹೋಗಬಹುದು, ಎಲ್ಲಾದರೂ ಅಡಗಿಕೊಳ್ಳಬಹುದು, ಆದರೆ ಸತ್ಯ ಯಾವಾಗಿದ್ದರೂ ಹೊರಗೆ ಬಂದೇ ಬರುತ್ತದೆ. ಸಿಬಿಐ ನಿರ್ದೇಶಕರನ್ನು ತೆಗೆದು ಹಾಕುವುದರಿಂದ ಯಾವುದೇ ಪ್ರಯೋಜನವಿಲ್ಲ" ಎಂದು ಪ್ರಧಾನಿಯ ವಿರುದ್ಧ ರಾಹುಲ್ ಗಾಂಧಿ ಕೆಂಡ ಕಾರಿದ್ದಾರೆ.
"ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಕ್ರಮ ತೆಗೆದುಕೊಂಡು ತಪ್ಪು ಮಾಡಿದ್ದಾರೆ. ತೀವ್ರ ಗಲಿಬಿಲಿಯಿಂದ ತೆಗೆದುಕೊಂಡಂಥ ಕ್ರಮವದು. ಭಾರತದ ಸಂವಿಧಾನಕ್ಕೆ ಮಾಡಿದ ಅವಮಾನ." ನವದೆಹಲಿಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಬಂಧನಕ್ಕೊಳಗಾಗಿ, ಬಿಡುಗಡೆಯಾಗಿ ಬಂದ ನಂತರ ರಾಹುಲ್ ಆಡಿದ ಮಾತುಗಳಿವು.
ಪರಸ್ಪರ ಭ್ರಷ್ಟಾಚಾರದ ಆರೋಪ ಹೊರಿಸಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರನ್ನು, ಕೇಂದ್ರ ಜಾಗೃತ ದಳದ ಶಿಫಾರಸಿನ ಮೇರೆಲೆ, ಬಲವಂತದ ರಜಾ ಮೇಲೆ ಕೇಂದ್ರ ಸರಕಾರ ಕಳಿಸಿದೆ. ಅವಧಿ ಮುಗಿಯುವ ಮುನ್ನವೇ ಹುದ್ದೆಯಿಂದ ತೆಗೆದಿರುವುದು ವಿರೋಧಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕೇಂದ್ರ ಸರಕಾರದ ಈ ಕ್ರಮದ ವಿರುದ್ಧ ನವದೆಹಲಿಯಲ್ಲಿ ಮಾತ್ರವಲ್ಲ, ಕರ್ನಾಟಕ, ಹೈದರಾಬಾದ್ ಮುಂತಾದೆಡೆಗಳಲ್ಲಿ ಪ್ರತಿಭಟನೆಗಳು ನಡೆದಿವೆ. ರಾಹುಲ್ ಗಾಂಧಿಯವರ ಜೊತೆ ಅಶೋಕ್ ಗೆಹ್ಲೋಟ್, ಮೋತಿಲಾಲ್ ವೋರಾ, ವೀರಪ್ಪ ಮೊಯ್ಲಿ, ಆನಂದ್ ಶರ್ಮಾ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಜೊತೆಗೆ ತೃಣಮೂಲ ಕಾಂಗ್ರೆಸ್, ಸಿಪಿಐ(ಎಂ), ಆಪ್, ಲೋಕತಾಂತ್ರಿಕ ಜನತಾ ದಳದ ನಾಯಕರು ಕೂಡ ಜೊತೆಯಾದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ನರೇಂದ್ರ ಮೋದಿಯವರು ಸಿಬಿಐಯನ್ನು ಮಾತ್ರವಲ್ಲ, ಜಾರಿ ನಿರ್ದೇಶನಾಲಯ, ಚುನಾವಣಾ ಆಯೋಗವನ್ನೂ ಸರ್ವನಾಶ ಮಾಡಿದ್ದಾರೆ. ಚೌಕಿದಾರನೇ ಚೋರಿ ಮಾಡಲು ಕಾಂಗ್ರೆಸ್ ಬಿಡುವುದಿಲ್ಲ ಎಂದು ಕಿಡಿ ಕಾರಿದರು.

ಲೋಧಿ ರಸ್ತೆಯಲ್ಲಿರುವ ದೀನ್ ದಯಾಳ್ ಕಾಲೇಜಿನಿಂದ ಸಿಬಿಐ ಕಚೇರಿವರೆಗೆ 4.2 ಕಿ.ಮೀ. ಉದ್ದಕ್ಕೂ ರಾಹುಲ್ ಗಾಂಧಿ ಅವರು ನಡೆದು ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದರು. ಮಾರ್ಗದುದ್ದಕ್ಕೂ ಬಿಜೆಪಿ ವಿರುದ್ಧ ಕಾರ್ಯಕರ್ತರು ಧಿಕ್ಕಾರ ಕೂಗುತ್ತಲೇ ಇದ್ದರು. ನಂತರ ಪೊಲೀಸ್ ವಾಹನವನ್ನು ರಾಹುಲ್ ಗಾಂಧಿ ಅವರು ಹತ್ತಿದರು. ಅವರನ್ನು ಲೋಧಿ ಕಾಲೋನಿ ಪೊಲೀಸ್ ಸ್ಟೇಷನ್ನಿಗೆ ಕರೆತರಲಾಯಿತು. ಕೆಲಸಮಯ ಅಲ್ಲೇ ಕುಳಿತಿದ್ದ ಅವರು ನಂತರ ಹೊರಬಂದು ಮೋದಿಯವರ ಮೇಲೆ ಮತ್ತೆ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಬಿಜೆಪಿ, ಕಾಂಗ್ರೆಸ್ಸಿಗೆ ಪ್ರತಿಭಟನೆ ಮಾಡಲು ಬೇರೆ ಯಾವುದೇ ವಿಷಯ ಇಲ್ಲದ್ದರಿಂದ ಈ ವಿಷಯವನ್ನು ಎತ್ತಿಕೊಂಡಿದೆ. ಸರ್ವೋಚ್ಚ ನ್ಯಾಯಾಲಯ ಹೇಳಿದಂತೆ, ನಿವೃತ್ತ ನ್ಯಾಯಮೂರ್ತಿ ವಿಚಾರಣೆ ನಡೆಸಿ ವರದಿ ನೀಡುವವರೆಗೆ ನಾವು ಕಾಯಲೇಬೇಕು ಎಂದು ತಿರುಗೇಟು ನೀಡಿದೆ.

ಈ ಪ್ರಕರಣದ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯ, ಹದಿನಾಲ್ಕು ದಿನಗಳೊಳಗಾಗಿ ತನಿಖೆಯನ್ನು ನಡೆಸಿ ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಸಲ್ಲಿಸಬೇಕೆಂದು ಆದೇಶಿಸಿದೆ. ಅಲ್ಲಿಯವರೆಗೆ, ಸಿಬಿಐನ ಹಂಗಾಮಿ ನಿರ್ದೇಶಕ ಎಂ ನಾಗೇಶ್ವರ ರಾವ್ ಅವರಿಗೆ ಯಾವ ವಿಶೇಷ ಅಧಿಕಾರವನ್ನೂ ನೀಡಿಲ್ಲ. ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಕೆ ಪಟ್ನಾಯಕ್ ಅವರು ತನಿಖೆ ನಡೆಸಿ ವರದಿ ಸಲ್ಲಿಸಲಿದ್ದಾರೆ.












Click it and Unblock the Notifications