ತಾವೇ ಉದ್ಘಾಟಿಸಿದ ಸಿಬಿಐ ಕಟ್ಟಡದಲ್ಲಿ ಬಂಧಿಯಾದ ಚಿದಂಬರಂ
ನವದೆಹಲಿ, ಆಗಸ್ಟ್ 22: ಸನ್ನಿವೇಶದ ವ್ಯಂಗ್ಯ ಎಂದರೆ ಇದೇ ಇರಬೇಕು. ತಾವೇ ಉದ್ಘಾಟಿಸಿದ ಕಟ್ಟಡದಲ್ಲಿ ರಾತ್ರಿಯಿಡೀ ಕುಳಿತು ವಿಚಾರಣೆಗೆ ಒಳಗಾಗುವ ಪರಿಸ್ಥಿತಿ ಎದುರಾಗುತ್ತದೆ ಎಂದು ಮಾಜಿ ಸಚಿವ ಪಿ. ಚಿದಂಬರಂ ಊಹಿಸಿರಲಿಲ್ಲ. ಇಂತಹದೊಂದು ವೈಚಿತ್ರ್ಯ ಭಾರತೀಯ ರಾಜಕೀಯ ಇತಿಹಾಸದಲ್ಲಿ ದಾಖಲಾಗಿದೆ.
ಕಾಂಗ್ರೆಸ್ ನಾಯಕರೇ ಉದ್ಘಾಟಿಸಿದ ಕಟ್ಟಡದಲ್ಲಿ ಸಿಬಿಐ ಅಧಿಕಾರಿಗಳಿಂದ ವಿಚಾರಣೆಗೆ ಒಳಗಾಗುವ ದುರಂತ ಸನ್ನಿವೇಶಕ್ಕೆ ಹಿರಿಯ ಕಾಂಗ್ರೆಸ್ ಮುಖಂಡ ಚಿದಂಬರಂ ಸಾಕ್ಷಿಯಾಗಿದ್ದಾರೆ.
ಬುಧವಾರ ರಾತ್ರಿ ನಡೆದ ಸಿನಿಮೀಯ ಘಟನೆಯಲ್ಲಿ ಸಿಬಿಐ, ಕಾಂಗ್ರೆಸ್ ಮುಖಂಡ ಚಿದಂಬರಂ ಅವರನ್ನು ಬಂಧಿಸಿತ್ತು. ಸಿಬಿಐ ಅಧಿಕಾರಿಗಳು ಚಿದಂಬರಂ ಅವರ ನಿವಾಸದ ಒಳಗೆ ಪ್ರವೇಶಿಸದಂತೆ ತಡೆಯಲು ಕಾಂಗ್ರೆಸ್ ಕಾರ್ಯಕರ್ತರು ಸಾಕಷ್ಟು ಪ್ರಯತ್ನಿಸಿದರು. ಗೇಟ್ಗಳನ್ನು ಬಂದ್ ಮಾಡಿ ಪ್ರತಿಭಟಿಸಿದರು. ಆದರೆ, ಕಾಂಪೌಂಡ್ ಹಾರಿ ಒಳಗೆ ಪ್ರವೇಶಿಸಿದ ಅಧಿಕಾರಿಗಳು ಅವರನ್ನು ಬಂಧಿಸಿದರು.
ಜೋರ್ ಬಾಗ್ ನಿವಾಸದಿಂದ ಕಾರ್ನಲ್ಲಿ ಚಿದಂಬರಂ ಅವರನ್ನು ನೇರವಾಗಿ ಸಿಬಿಐ ಕೇಂದ್ರ ಕಚೇರಿಗೆ ಕರೆದೊಯ್ಯಲಾಯಿತು. ಅಲ್ಲಿ ಅವರನ್ನು ಐಎನ್ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ರಾತ್ರಿಯಿಡೀ ವಿಚಾರಣೆಗೆ ಒಳಪಡಿಸಲಾಯಿತು.

ಮನಮೋಹನ್ ಸಿಂಗ್ ಉದ್ಘಾಟಿಸಿದ ಕಟ್ಟಡ
2011ರಲ್ಲಿ ಆಗಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಚಿದಂಬರಂ ಅವರ ಜತೆಗೂಡಿ ಏಪ್ರಿಲ್ ತಿಂಗಳಲ್ಲಿ ಸಿಬಿಐ ಕೇಂದ್ರ ಕಚೇರಿಯನ್ನು ಉದ್ಘಾಟಿಸಿದ್ದರು. ಆಗ ಸಚಿವ ಪಿ. ಚಿದಂಬರಂ ಅವರು ಗೃಹಸಚಿವರಾಗಿದ್ದರು. ಅಂದರೆ ತನಿಖಾ ಸಂಸ್ಥೆಗಳು ಅವರ ಅಧೀನದಲ್ಲಿದ್ದವು. 186 ಕೋಟಿ ರೂ. ವೆಚ್ಚದಲ್ಲಿ ನ್ಯಾಷನಲ್ ಬಿಲ್ಡಿಂಗ್ಸ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ ಲಿಮಿಟೆಡ್ 11 ಮಹಡಿಯ ಕಟ್ಟಡವನ್ನು ನಿರ್ಮಿಸಿತ್ತು. ದೇಶದ ಪ್ರಮುಖ ತನಿಖಾ ಸಂಸ್ಥೆಯ ಎಲ್ಲ ಘಟಕಗಳೂ ಒಂದೇ ಸೂರಿನ ಅಡಿ ಬರಬೇಕೆನ್ನುವುದು ಮುಖ್ಯ ಉದ್ದೇಶವಾಗಿತ್ತು.

ಅತ್ಯಾಧುನಿಕ ವ್ಯವಸ್ಥೆಯುಳ್ಳ ಕಟ್ಟಡ
7,000 ಚದರ ಅಡಿ ವಿಸ್ತೀರ್ಣದಲ್ಲಿ ಅತ್ಯಧುನಿಕ ಸಂವಹನ ವ್ಯವಸ್ಥೆಯನ್ನು ಈ ಕಟ್ಟಡ ಒಳಗೊಂಡಿದೆ. ದಾಖಲೆಗಳನ್ನು ನಿರ್ವಹಿಸಲು ಆಧುನಿಕ ವ್ಯವಸ್ಥೆ, ಸಂಗ್ರಹಣಾ ಘಟಕ ಮತ್ತು ಹೊಸ ತಂತ್ರಜ್ಞಾನದ ಸೌಲಭ್ಯಗಳ ಜತೆಗೆ ಗಣಕೀಕೃತ ಪ್ರವೇಶ ನಿಯಂತ್ರಣವನ್ನು ಹೊಂದಿದೆ.

ಸಿಬಿಐ ಕಚೇರಿಯಲ್ಲಿ ಏನೇನಿದೆ?
ವಿಚಾರಣಾ ಕೊಠಡಿಗಳು, ಲಾಕಪ್ಗಳು, ವಸತಿ ಕೊಠಡಿ, ಸಭಾ ಕೊಠಡಿಗಳು ಕೂಡ ವಿವಿಧ ಅಂತಸ್ತುಗಳಲ್ಲಿವೆ. ಸುಮಾರು 500 ಜನರು ಕೂರಲು ಅವಕಾಶ ನೀಡುವಂತಹ ಬೃಹತ್ ಕಫೆಟೇರಿಯಾವನ್ನು ಅದರ ಸಿಬ್ಬಂದಿಗೆ ನಿರ್ಮಿಸಲಾಗಿದೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಜಿಮ್ಗಳು, ಟೆರೇಸ್ ಉದ್ಯಾನ, ಎರಡು ಹಂತದ ನೆಲಮಹಡಿ ಪಾರ್ಕಿಂಗ್ನಲ್ಲಿ ಸುಮಾರು 470 ವಾಹನಗಳನ್ನು ನಿಲ್ಲಿಸಲು ಸ್ಥಳವಿದೆ.

ಸಿಬಿಐ ನ್ಯಾಯಾಲಯಕ್ಕೆ ಹಾಜರು
ರಾತ್ರಿಯಿಡೀ ಸಿಬಿಐ ಕೇಂದ್ರ ಕಚೇರಿಯಲ್ಲಿ ಕಳೆದ ಚಿದಂಬರಂ ಅವರಿಗೆ ಅಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಅವರನ್ನು ಗುರುವಾರ ಸಿಬಿಐ ಅಧಿಕಾರಿಗಳು ಮಧ್ಯಾಹ್ನ 2 ಗಂಟೆ ಸುಮಾರಿಗೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಸಿಬಿಐ ರೋಸ್ ಅವೆನ್ಯೂ ಕೋರ್ಟ್ಗೆ ಅವರನ್ನು ಹಾಜರುಪಡಿಸಲಾಗುತ್ತದೆ. ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಚಿದಂಬರಂ ಅವರನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಸಿಬಿಐ ಮನವಿ ಸಲ್ಲಿಸಲಿದೆ.












Click it and Unblock the Notifications