ನೋಟು ನಿಷೇಧ: ಭುಗಿಲೆದ್ದ ಪ್ರತಿಪಕ್ಷಗಳ ಆಕ್ರೋಶ
ನೋಟು ನಿಷೇಧ ವಿರೋಧಿಸಿ ಪ್ರತಿಪಕ್ಷ ಮುಖಂಡರು ಬುಧವಾರ ಸಂಸತ್ ಭವನದ ಎದುರು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದರು. ಮಾನವ ಸರಪಳಿ ನಿರ್ಮಿಸಿ ಒಗ್ಗಟ್ಟು ಪ್ರದರ್ಶಿಸಿದರು.
ನವದೆಹಲಿ, ನವೆಂಬರ್, 23: ಅಧಿಕ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ 2 ವಾರಗಳು ಗತಿಸಿವೆ. ನೋಟು ನಿಷೇಧ ಆದೇಶ ಕ್ರಮ ಹೊರಡಿಸಿದ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಪ್ರತಿಭಟನೆಗಳ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ.
ನೋಟು ನಿಷೇಧ ಆದೇಶ ವಿರೋಧಿಸಿ ಸೋಮವಾರ (ನವೆಂಬರ್ 28)ದಂದು ದೇಶದಾದ್ಯಂತ ತೀವ್ರ ಪ್ರತಿಭಟನೆ ವ್ಯಕ್ತಪಡಿಸಲು ಪ್ರತಿಪಕ್ಷಗಳು ಒಗ್ಗಟ್ಟಾಗಿ 'ಆಕ್ರೋಶ ದಿವಸ್' ಹಮ್ಮಿಕೊಂಡಿವೆ.[ಸಮೀಕ್ಷೆ ತೆರೆದಿಟ್ಟ ರಹಸ್ಯ: ನೋಟು ರದ್ದು ಬಗ್ಗೆ ಜನ ಏನಂತಾರೆ?]
ರೂ. 500 ಹಾಗೂ, ರೂ. 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿರುವ ಪ್ರಧಾನಿ ಮೋದಿ ಅವರು ಕೂಡಲೇ ಅಧಿವೇಶನದಲ್ಲಿ ಭಾಗವಹಿಸಿ ಈ ಕುರಿತು ಮಾತನಾಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.
ಮೋದಿ ಅಧಿವೇಶನದಲ್ಲಿ ಭಾಗವಹಿಸಬೇಕು ಎಂದು ಆಗ್ರಹಿಸಿ ಪ್ರತಿಪಕ್ಷ ಮುಖಂಡರು ಬುಧವಾರ ಸಂಸತ್ ಭವನದ ಎದುರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ವ್ಯಕ್ತಪಡಿಸಿದರು. ಪ್ರತಿಪಕ್ಷಗಳ ತೀವ್ರ ಗದ್ದಲದಿಂದಾಗಿ ಎರಡೂ ಸದನಗಳನ್ನು ಗುರುವಾರಕ್ಕೆ ಮುಂದೂಡಲಾಯಿತು.
ಪ್ರಧಾನಿ ಮಾತನಾಡಬೇಕು ರಾಹುಲ್ ಪಟ್ಟು
ಬುಧವಾರ ಕಲಾಪದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು, ಆದರೆ ಸದನವನ್ನುದ್ದೇಶಿಸಿ ಮಾತನಾಡಲಿಲ್ಲ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು "ಪ್ರಧಾನಿ ಉಪಸ್ಥಿತರಿದ್ದರೆ ಸಾಲದು ನೋಟು ನಿಷೇಧದ ಬಗ್ಗೆ ಮಾತನಾಡಬೇಕು" ಎಂದು ಪಟ್ಟು ಹಿಡಿದರು. ಮಾಧ್ಯಮಗಳ ಮುಂದೆಯೂ ಸಹ ನೋಟು ನಿಷೇಧದ ಕುರಿತು ಮಾತನಾಡಿದರು.
ಪ್ರತಿಭಟನೆಯಲ್ಲಿ ಜಯಾ ಬಚ್ಚನ್ ಭಾಗಿ
ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಸಹ ನೋಟು ನಿಷೇಧ ವಿರೋಧಿಸಿ ಕಾಂಗ್ರೆಸ್ ಹಾಗು ಪ್ರತಿಪಕ್ಷ ಮುಖಂಡರು ಸಂಸತ್ ಭವನದೆದರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಸಂಸದ ಜೈರಾಂ ರಮೇಶ್ ಜಯಾ ಬಚ್ಚನ್ ಅವರೊಂದಿಗೆ ಕಾಣಿಸಿಕೊಂಡರು.
ತಮಿಳುನಾಡು ಸಂಸದರು ಭಾಗಿ
ನೋಟು ನಿಷೇದ ಕ್ರಮವನ್ನು ಪ್ರಶ್ನಿಸಿ ಪ್ರತಿಪಕ್ಷಗಳು ಒಗ್ಗಟ್ಟಾಗಿ ಹಮ್ಮಿಕೊಂಡಿದ್ದ ಮಾನವ ಸರಪಳಿಯಲ್ಲಿ ತಮಿಳುನಾಡು ಸಂಸದರೂ ಸಹ ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ
ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಸಭೆ ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಇತರೆ ಕಾಂಗ್ರೆಸ್ ಮುಖಂಡರು ಸಂಸತ್ ಭವನದ ಬಳಿ ಇರುವ ಗಾಂಧಿ ಪ್ರತಿಮೆ ಎದುರು ನೋಟು ನಿಷೇಧ ವಿರೋಧಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.
ಮೋದಿ ಮಾತು ಕೇಳುವ ಸ್ಥಿತಿಯಲ್ಲಿ ಪ್ರತಿಪಕ್ಷಗಳು ಇಲ್ಲ
ಪ್ರತಿಪಕ್ಷಗಳಿಗೆ ಉತ್ತರ ನೀಡುವ ಸಲುವಾಗಿಯೇ ಪ್ರಧಾನಿ ಮೋದಿ ಅವರು ಬುಧವಾರ ಅಧಿವೇಶನದಲ್ಲಿ ಭಾಗವಹಿಸಿದ್ದರು. ಆದರೆ ಪ್ರತಿಪಕ್ಷಗಳು ಪ್ರಧಾನಿಯವರ ಮಾತುಗಳನ್ನು ಕೇಳಲು ಸಿದ್ದರಿಲ್ಲ ಎಂದು ಕೇಂದ್ರ ಸಚಿವ ರಾಜ್ಯ ವರ್ಧನ ಸಿಂಗ್ ರಾಥೋಡ್ ತಿಳಿಸಿದರು.
ಇವರ ಪ್ರತಿಭಟನೆಯಲ್ಲಿ ತರ್ಕವಿಲ್ಲ
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗಳನ್ನು ಮಾಡಲು ಎಲ್ಲರಿಗೂ ಅಧಿಕಾರವಿದೆ. ಅಧಿವೇಶನದಲ್ಲಿ ನೋಟು ನಿಷೇಧ ವಿರೋಧಿಸಿ ಪ್ರತಿಭಟಿಸಿದರೆ ಜನರು ನೋಡುತ್ತಾರೆ. ಆ ಭಯದಿಂದ ಪ್ರತಿಪಕ್ಷಗಳು ಹೊರಗೆ ಬಂದು ಪ್ರತಿಭಟಿಸುತ್ತಿವೆ. ಇವರ ಪ್ರತಿಭಟನೆಯಲ್ಲಿ ತರ್ಕವಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.
ವಾಪಸ್ ಪಡೆಯುವುದು ಮೋದಿ ರಕ್ತದಲ್ಲೇ ಇಲ್ಲ
ವಾಪಸ್ ತೆಗೆದುಕೊಳ್ಳುವುದು ಮೋದಿಯವರ ರಕ್ತದಲ್ಲೇ ಇಲ್ಲ. ಪ್ರತಿಪಕ್ಷಗಳೆಲ್ಲಾ ಒಟ್ಟಾಗಿ ಸೇರಿರುವುದೇ ನನಗೆ ಆಶ್ಚರ್ಯತಂದಿದೆ. ಒಟ್ಟಾಗಿ ಸೇರಿದರೂ ಸಹ ಅವರ ಶಕ್ತಿ ಏನೆಂಬುದು ರಾಷ್ಟ್ರಕ್ಕೆ ಗೊತ್ತಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯನಾಯ್ಡು ವ್ಯಂಗ್ಯವಾಡಿದರು.
ಗಿಡಗಳಿಗೆ ನೀರುಣಿಸುವ ಕಾರ್ಯದಲ್ಲಿ ಮಗ್ನರಾಗಿದ್ದ ಸಿಬ್ಬಂದಿ
ನೋಟು ನಿಷೇಧ ವಿರೋಧಿಸಿ ಸಂಸತ್ ಒಳಗೆ ಮತ್ತು ಹೊರಗೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಸಹ ಅದರ ಪರಿವೆ ಇಲ್ಲದಂತೆ ಮಹಿಳಾ ಸಿಬ್ಬಂದಿಯೊಬ್ಬರು ಗಿಡಗಳಿಗೆ ನೀರುಣಿಸುವ ಕೆಲಸದಲ್ಲಿ ಮಗ್ನರಾಗಿದ್ದರು.