ಸಿಎಎ ವಿಚಾರದಲ್ಲಿ ಡಬಲ್ ಗೇಮ್, ಮುಸ್ಲಿಂರಿಗೆ ನೋ ಪ್ರಾಬ್ಲಂ-ರಜನಿಕಾಂತ್
ನವದೆಹಲಿ, ಫೆಬ್ರವರಿ.05: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಪರವಾಗಿ ನಟ ರಜನಿಕಾಂತ್ ಬ್ಯಾಟಿಂಗ್ ಮಾಡಿದ್ದಾರೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸಿಎಎ ಮುಸ್ಲಿಂ ವಿರೋಧಿಯಲ್ಲ ಎನ್ನುವ ಮೂಲಕ ಸುದ್ದಿ ಆಗಿದ್ದಾರೆ.
ಚೆನ್ನೈನ ಪೋಸ್ ಗಾರ್ಡನ್ ನಿವಾಸದ ಬಳಿ ಮಾಧ್ಯಮಗಳಿಗೆ ರಜನಿಕಾಂತ್ ಸಿಎಎ ಬಗ್ಗೆ ಪ್ರತಿಕ್ರಿಯೆ ನೀಡಿದರು. ದೇಶದಲ್ಲಿ ಇರುವ ಭಾರತೀಯ ಮುಸ್ಲಿಂರನ್ನು ಹೊರಗಟ್ಟಲು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿಲ್ಲ ಎಂದು ಹೇಳಿದರು. ದೇಶದ ಭಾರತೀಯರಿಗೆ ಯಾವುದೇ ಸಮಸ್ಯೆ ಆಗಲ್ಲ ಎಂದು ರಜನಿಕಾಂತ್ ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತದ ಮುಸ್ಲಿಂರಿಗೆ ತೊಂದರೆ ಆಗಿದ್ದೇ ನಿಜವಾದರೆ, ನಾನೇ ಹೋರಾಟದ ಮುಂದಾಳತ್ವ ವಹಿಸುತ್ತೇನೆ ಎಂದು ರಜನಿಕಾಂತ್ ಹೇಳಿದರು. ಭಾರತ-ಪಾಕಿಸ್ತಾನ ಪ್ರತ್ಯೇಕಗೊಂಡ ಸಮಯದಲ್ಲಿ ಪಾಕ್ ನ ಕೆಲವು ಮುಸ್ಲಿಂರು ಭಾರತವನ್ನೇ ತಮ್ಮ ತಾಯಿನೆಲ ಎಂದುಕೊಂಡು ಇಲ್ಲೇ ನೆಲೆಸಿದರು. ಅಂಥ ಮುಸ್ಲಿಂರನ್ನು ಹೊರಗಟ್ಟುವ ಪ್ರಯತ್ನ ನಡೆದಿಲ್ಲ ಎಂದು ಸ್ಪಷ್ವವಾಗಿ ತಿಳಿಸಿದರು.

ಸಿಎಎ ವಿರುದ್ಧ ಕೆಲವರಿಂದ ಗೊಂದಲ ಸೃಷ್ಟಿಸುವ ಕಾರ್ಯ
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಬಗ್ಗೆ ಜನರಲ್ಲಿ ಕೆಲವು ಗೊಂದಲ ಸೃಷ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸ್ಟಾರ್ ನಟ ರಜನಿಕಾಂತ್ ಆರೋಪಿಸಿದರು. ದೇಶದಲ್ಲಿ ಮುಸ್ಲಿಂರನ್ನು ದಾರಿ ತಪ್ಪಿಸುವ ಕೆಲಸ ಆಗುತ್ತಿದ್ದು, ಸಿಎಎ ವಿಚಾರವನ್ನು ರಾಜಕಾರಣ ಮತ್ತು ಸ್ವಾರ್ಥ ಸಾಧನೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

"ಸಿಎಎ ಬಗ್ಗೆ ಮೊದಲು ತಿಳಿದುಕೊಂಡು ಹೋರಾಟ ನಡೆಸಿ"
ಭಾರತೀಯ ಮುಸ್ಲಿಂರನ್ನು ಹೊರಗಟ್ಟುವ ಉದ್ದೇಶದಿಂದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿದ್ದರೆ ಅದಕ್ಕೆ ನಾನೂ ವಿರೋಧಿಸುತ್ತೇನೆ. ಆಗ ನಿಮ್ಮೊಂದಿಗೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ನಾನೇ ಮುಂದಾಳತ್ವ ವಹಿಸುತ್ತೇನೆ. ಆದರೆ, ಅದಕ್ಕೂ ಮೊದಲು ಸಿಎಎ ವಿರುದ್ಧ ಪ್ರತಿಭಟನೆ ನಡೆಸುವ ದೇಶದ ಯುವಕರು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿರಬೇಕು ಎಂದು ಸಲಹೆ ನೀಡಿದರು.

"NRC ಮತ್ತು NPR ನಡುವಿನ ವ್ಯತ್ಯಾಸವೇನು ಎಂದು ತಿಳಿಯಿರಿ"
ಭಾರತದಲ್ಲಿ ರಾಷ್ಟ್ರೀಯ ನಾಗರಿಕ ನೋಂದಣಿ(NRC) ಇಂದಿಗೂ ಜಾಿರಿಯಾಗಿಲ್ಲ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ(NPR) ಬಗ್ಗೆ ಜನರಿಗೆ ಗೊತ್ತೇ ಇಲ್ಲವಲ್ಲ ಎಂದು ರಜನಿಕಾಂತ್ ಹೇಳಿದರು. ಕೇಂದ್ರ ಸರ್ಕಾರವು ದೇಶದಲ್ಲಿ ಇರುವ ವಿದೇಶಿಗರ ಬಗ್ಗೆ ಅಂಕಿ-ಅಂಶಗಳನ್ನು ಸಂಗ್ರಹಿಸಲು ಎನ್ ಪಿಆರ್ ನ್ನು ಜಾರಿಗೊಳಿಸಿದೆ. ಇನ್ನು, ದೇಶದಲ್ಲಿ ಎನ್ ಆರ್ ಸಿ ಜಾರಿಗೊಂಡಿಲ್ಲ. ಸುಖಾಸುಮ್ಮನೆ ಈ ವಿಚಾರದಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ರಜನಿಕಾಂತ್ ಹೇಳಿದರು.

ರಜನಿಕಾಂತ್ ವಿರುದ್ಧ ಕೆಂಡ ಕಾರಿದ ಕಾರ್ತಿ ಚಿದಂಬರಂ
ಇನ್ನು, ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಬಗ್ಗೆ ಮೃದಧೋರಣೆ ತೋರಿದ ನಟ ರಜನಿಕಾಂತ್ ವಿರುದ್ಧ ಕೇಂದ್ರ ಹಣಕಾಸು ಖಾತೆಯ ಮಾಜಿ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಕೆಂಡ ಕಾರಿದ್ದಾರೆ. ಹೊಸ ಪಕ್ಷ ಸ್ಥಾಪಿಸುವ ಬದಲು ಬಿಜೆಪಿಗೆ ಸೇರಿಕೊಳ್ಳಿ ಎಂದು ರಜನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications