ಮುಂಗಾರು ಅಧಿವೇಶ ಆರಂಭಕ್ಕೂ ಮುನ್ನ ಸರ್ವಪಕ್ಷ ಸಭೆ ಇಲ್ಲ
ನವದೆಹಲಿ, ಸಪ್ಟೆಂಬರ್.13: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಸೋಮವಾರದಿಂದ ಮುಂಗಾರು ಸಂಸತ್ ಅಧಿವೇಶನ ಆರಂಭವಾಗಲಿದೆ. 20 ವರ್ಷಗಳಲ್ಲೇ ಮೊದಲ ಬಾರಿಗೆ ಸರ್ವಪಕ್ಷ ಸಭೆ ನಡೆಸದೇ ಅಧಿವೇಶನ ಶುರು ಮಾಡುವುದಕ್ಕೆ ತೀರ್ಮಾನಿಸಲಾಗಿದೆ.
ಸಂಸದೀಯ ಅಧಿವೇಶನಗಳು ಪ್ರಾರಂಭವಾಗುವ ಮೊದಲು ಅಜೆಂಡಾ ಮತ್ತು ಗುರಿಗಳ ಬಗ್ಗೆ ಚರ್ಚಿಸುವುದಕ್ಕೆ ನಡೆಸುವ ಸಭೆಯನ್ನು ನಡೆಸುವುದಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಸಂಸತ್ ಪ್ರಶ್ನಾವಳಿ ರದ್ದುಗೊಳಿಸಿದ ಹಿನ್ನೆಲೆ ಸರ್ಕಾರಕ್ಕೆ 'ಟ್ವೀಟ್' ಏಟು!
ಈ ಮೊದಲೇ ನಿಗದಿಗೊಳಿಸಿದಂತೆ ರಾಜ್ಯಸಭೆಯ ವ್ಯವಹಾರ ಸಲಹಾ ಸಮಿತಿಯ ಸಭೆ ಭಾನುವಾರ ಸಂಸತ್ತಿನಲ್ಲಿ ನಡೆಯಲಿದೆ. ಮುಂಗಾರು ಸಂಸತ್ ಅಧಿವೇಶನದಲ್ಲಿ ಪ್ರಶ್ನಾವಳಿ ಅವಧಿ ಮತ್ತು ಶೂನ್ಯ ಅವಧಿಯಲ್ಲಿನ ಚರ್ಚೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಆಕ್ಟೋಬರ್.01ರವರೆಗೂ ನಡೆಯುವ ಕಲಾಪದ ವಿಷಯಗಳು ಮತ್ತು ಅಜೆಂಡಾ ಬಗ್ಗೆ ಸಭಾಪತಿಗಳ ನೇತೃತ್ವದಲ್ಲಿ ಚರ್ಚೆ ನಡೆಸಲಾಗುತ್ತದೆ.
ಸೋಮವಾರದಿಂದ ಸಂಸತ್ ಕಲಾಪ ಶುರು:
ನವದೆಹಲಿಯಲ್ಲಿ ಸಪ್ಟೆಂಬರ್.14ರಿಂದ ಸಂಸತ್ ಉಭಯ ಕಲಾಪಗಳು ಆರಂಭವಾಗಲಿವೆ. ಮೊದಲ ದಿನ ಲೋಕಸಭೆ ಕಲಾಪ ಬೆಳಗ್ಗೆ 1 ರಿಂದ 3 ಗಂಟೆವರೆಗೂ ನಡೆಯಲಿದ್ದು, ರಾಜ್ಯಸಭಾ ಕಲಾಪ ಮಧ್ಯಾಹ್ನ 3 ರಿಂದ 7 ಗಂಟೆವರೆಗೂ ನಡೆಯಲಿದೆ. ಸಪ್ಟೆಂಬರ್.14ರ ನಂತರದಲ್ಲಿ ರಾಜ್ಯಸಭಾ ಕಲಾಪವು ಬೆಳಗ್ಗೆ 1 ರಿಂದ 3 ಗಂಟೆವರಗೂ ಹಾಗೂ ಲೋಕಸಭಾ ಕಲಾಪವು ಮಧ್ಯಾಹ್ನ 3 ರಿಂದ 7 ಗಂಟೆವರೆಗೂ ನಡೆಸಲು ಸಮಯ ನಿಗದಿಗೊಳಿಸಲಾಗಿದೆ.
ಪ್ರತಿಪಕ್ಷಗಳಿಗೆ ಚರ್ಚೆಯ ವಿಷಯ:
ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಬಿರುಸಿನ ಬಾಣಗಳನ್ನು ಬೀಸುವುದಕ್ಕೆ ಪ್ರತಿಪಕ್ಷಗಳೂ ಸಿದ್ಧತೆ ನಡೆಸುತ್ತಿದೆ. ಭಾರತದ ಜಿಡಿಪಿ, ನಿರುದ್ಯೋಗ ಸಮಸ್ಯೆ, ಕೊವಿಡ್-19 ಬಿಕ್ಕಟ್ಟು ಮತ್ತು ಭಾರತ-ಚೀನಾ ನಡುವಿನ ಗಡಿ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸುವುದಕ್ಕೆ ವಿರೋಧಪಕ್ಷಗಳು ಅಣಿಯಾಗಿವೆ.