ಸುಷ್ಮಾ ಸ್ವರಾಜ್ ಟ್ರೋಲ್ ಆಗಿದ್ದು ಖೇದಕರ: ನಿತಿನ್ ಗಡ್ಕರಿ
ನವದೆಹಲಿ, ಜುಲೈ 03: 'ಸುಷ್ಮಾ ಸ್ವರಾಜ್ ಅವರನ್ನು ಸಾಮಾಜಿಕ ಮಾಧ್ಯಮಗಳ್ಲಲಿ ಟ್ರೋಲ್ ಮಾಡಿದ್ದು ಅತ್ಯಂತ ದುರದೃಷ್ಟದ ಮತ್ತು ಖೇದಕರ ಸಂಗತಿ' ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಪಾಸ್ ಪೋರ್ಟ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, 'ಈ ಪ್ರಕರಣ ನಡೆಯುವ ಸಮಯದಲ್ಲಿ ಅವರು ದೇಶಲ್ಲಿರಲಿಲ್ಲ. ಈ ನಿರ್ಧಾರಕ್ಕೆ ಹೊಣೆಯಲ್ಲ. ಹಾಗಂತ ಈ ನಿರ್ಧಾರ ತಪ್ಪೂ ಅಲ್ಲ' ಎಂದು ಗಡ್ಕರಿ ಹೇಳಿದ್ದಾರೆ.
ವಿವಾದಕ್ಕೆ ಸಂಬಂಧಿಸಿದಂತೆ ಸುಷ್ಮಾ ಸ್ವರಾಜ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಟ್ರೋಲ್ ಆಗುತ್ತಿದ್ದರೂ, ಹೀಗೆ ಟ್ರೋಲ್ ಮಾಡುವುದ ಸರಿಯೇ ಎಂದು ಅವರು ಟ್ವಿಟ್ಟರ್ ಪೋಲ್ ಮಾಡಿದ್ದರೂ ಬಿಜೆಪಿಯ ಯಾವ ನಾಯಕರೂ ಅವರ ಬೆಂಬಲಕ್ಕೆ ನಿಂತಿರಲಿಲ್ಲ ಎಂಬ ಮಾತು ಕೇಳಿಬಂದಿತ್ತು. ಆದರೆ ಇದೀಗ ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ನಿತಿನ್ ಗಡ್ಕರಿ ಆ ಮಾತಿಗೆ ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾರೆ.

ಲಕ್ನೋದ ಅಂತರ್ಧರ್ಮೀಯ ದಂಪತಿಗೆ ಪಾಸ್ ಪೋರ್ಟ್ ನೀಡುವ ಕುರಿತಂತೆ ಎದ್ದಿದ್ದ ವಿವಾದದಲ್ಲಿ ಪಾಸ್ ಪೋರ್ಟ್ ಕಚೇರಿಯ ಅಧಿಕಾರಿಯೊಬ್ಬರು ದಂಪತಿಗೆ (ಹಿಂದು ಮಹಿಳೆ ಮತ್ತು ಮುಸ್ಲಿಂ ಪುರುಷ) ಅವಮಾನ ಮಾಡಿದ್ದರು ಎನ್ನಲಾಗಿತ್ತು. ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿದ ನಂತರ ಅವರಿಗೆ ಪಾಸ್ ಪೋರ್ಟ್ ನೀಡಲಾಗಿತ್ತು. ಇದರಿಂದಾಗಿ, 'ಸುಷ್ಮಾ ಸ್ವರಾಜ್ ಮುಸ್ಲಿಮರನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ' ಎಂದು ಕೆಲವರು ದೂರಿದ್ದರು.
ಈ ಟ್ರೋಲ್ ವಿಪರೀತಕ್ಕೆ ತಿರುಗಿ ಸುಷ್ಮಾ ಸ್ವರಾಜ್ ಅವರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡುವ ಮಟ್ಟಕ್ಕೂ ತಲುಪಿತ್ತು. ಇದರಿಂದ ಬೇಸರಗೊಂಡ ಸ್ವರಾಜ್, ಈ ರೀತಿ ಟ್ರೋಲ್ ಮಾಡುವುದು ಸರಿಯೇ ಎಂದು ಟ್ವಿಟ್ಟರ್ ನಲ್ಲಿ ಪೋಲ್ ಮಾಡಿದ್ದರು. ಅದಕ್ಕೆ ಶೇ.54 ರಷ್ಟು ಜನ 'ಇಲ್ಲ' ಎಂದು ಉತ್ತರಿಸಿ, ಅವರಿಗೆ ಬೆಂಬಲ ಸೂಚಿಸಿದ್ದರು.
ನಂತರ ಟ್ವೀಟ್ ಮಾಡಿದ್ದ ಸುಷ್ಮಾ ಸ್ವರಾಜ್, 'ಪ್ರಜಾಪ್ರಭುತ್ವದಲ್ಲಿ ಟೀಕೆಗಳಿಗೆ ಎಂದಿಗೂ ಸ್ವಾಗತ. ಆದರೆ ಟೀಕೆಗಳು ಸಭ್ಯತೆಯ ಗೆರೆ ದಾಟದಿರಲಿ' ಎಂದಿದ್ದರು.












Click it and Unblock the Notifications