ದೆಹಲಿ ನಿರ್ಭಯಾ ಕೇಸ್ ದೋಷಿಗಳು ಯಾಕೆ ಹೀಗೆ ಮಾಡ್ತಾರೋ?
ನವದೆಹಲಿ, ಜನವರಿ.30: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ದೋಷಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಇನ್ನೆರೆಡು ದಿನಗಳಷ್ಟೇ ಬಾಕಿ ಉಳಿದಿದೆ. ಈಗ ನಾಲ್ವರು ದೋಷಿಗಳ ಪೈಕಿ ಮತ್ತೊಬ್ಬ ಅಪರಾಧಿಯು ಗಲ್ಲುಶಿಕ್ಷೆಗೆ ತಡೆ ನೀಡುವಂತೆ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಮೊರೆ ಹೋಗಿದ್ದಾನೆ.
ಫೆಬ್ರವರಿ.01ರಂದು ಗಲ್ಲುಶಿಕ್ಷೆ ವಿಧಿಸುವುದಕ್ಕೆ ತಡೆ ನೀಡಬೇಕೆಂದು ಗುರುವಾರ ಅಪರಾಧಿ ಅಕ್ಷಯ್ ಸಿಂಗ್ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾನೆ. ಇನ್ನೊಂದೆಡೆ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅಕ್ಷಯ್ ಸಿಂಗ್ ನ ಕ್ಯುರೇಟಿವ್ ಅರ್ಜಿ ಕೂಡಾ ಗುರುವಾರವೇ ವಿಚಾರಣೆಗೆ ಬರಲಿದೆ.
ನಿರ್ಭಯಾ ಅತ್ಯಾಚಾರ ದೋಷಿಗಳಿಗೆ ಫೆ.01ರಂದು ಗಲ್ಲುಶಿಕ್ಷೆ ಅನುಮಾನ?
ಇದರ ಮಧ್ಯೆ ಮತ್ತೊಬ್ಬ ಅಪರಾಧಿ ವಿನಯ್ ಶರ್ಮಾ ಗಲ್ಲುಶಿಕ್ಷೆಯಿಂದ ಕ್ಷಮಾದಾನ ನೀಡುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಬುಧವಾರ ಮನವಿ ಮಾಡಿಕೊಂಡಿದ್ದಾನೆ. ಈ ಹಿಂದೆ ಮುಕೇಶ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದರು. ರಾಷ್ಟ್ರಪತಿಗಳ ನಿರ್ಧಾರವನ್ನು ಪ್ರಶ್ನಿಸಿ ಮುಕೇಶ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರವೇ ಸುಪ್ರೀಂಕೋರ್ಟ್ ಕೂಡಾ ತಿರಸ್ಕರಿಸಿತ್ತು.
ಅಪರಾಧಿ ವಿನಯ್ ಶರ್ಮಾ ಮುಂದಿನ ಆಯ್ಕೆ:
ದೆಹಲಿ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ ವಿನಯ್ ಶರ್ಮಾ ಈಗಾಗಲೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ. ದೆಹಲಿ ಸರ್ಕಾರ ಮತ್ತು ಗೃಹ ಸಚಿವಾಲಯವು ಕಳುಹಿಸುವ ಶಿಫಾರಸ್ಸಿನ ನಂತರ ರಾಷ್ಟ್ರಪತಿ ತಮ್ಮ ತೀರ್ಮಾನ ತಿಳಿಸಲಿದ್ದಾರೆ. ಒಂದು ವೇಳೆ ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿರಸ್ಕರಿಸಿದರೆ ಅದನ್ನು ಪ್ರಶ್ನಿಸಿ ವಿನಯ್ ಶರ್ಮಾ ಮತ್ತೊಮ್ಮೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸುವ ಅವಕಾಶವಿದೆ. ಈ ಮೊದಲು ವಿನಯ್ ಶರ್ಮಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.