ನಿರ್ಭಯಾ ಪ್ರಕರಣ: ಸುಪ್ರೀಂನಲ್ಲಿಂದು ದೋಷಿಗಳ ಅರ್ಜಿ ವಿಚಾರಣೆ
ನವದೆಹಲಿ, ಡಿಸೆಂಬರ್ 12: ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರಿಗಳು ಸಲ್ಲಿಸಿರುವ ಮನವಿಯನ್ನು ಇಂದು ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ. ದೆಹಲಿ ಹೈಕೋರ್ಟ್ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ಪುನಃ ಪರಿಶೀಲಿಸುವಂತೆ ದೋಷಿ ಮುಕೇಶ್ ಮನವಿ ಸಲ್ಲಿಸಿದ್ದ.
ಡಿಸೆಂಬರ್ 16, 2012 ರಲ್ಲಿ ದೆಹಲಿಯಲ್ಲಿ ನಡೆದಿದ್ದ ಅತ್ಯಂತ ಭೀಕರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಅದರಲ್ಲಿ ಒಬ್ಬ ಆರೋಪಿ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೊಬ್ಬ ಬಾಲಾಪರಾಧಿ ಎಂಬ ಕಾರಣಕ್ಕೆ ಮೂರು ವರ್ಷಗಳ ಜೈಲುಶಿಕ್ಷೆಯ ನಂತರ ಅವನನ್ನು ಬಿಡುಗಡೆ ಮಾಡಲಾಗಿತ್ತು. ಇನ್ನುಳಿದ ಅಕ್ಷಯ್, ಪವನ್, ವಿನಯ್ ಶರ್ಮಾ ಮತ್ತು ಮುಕೇಶ್ ಎಂಬ ನಾಲ್ವರಿಗೆ ಇದೇ ವರ್ಷ ಮೇ 5 ರಂದು ದೆಹಲಿ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿತ್ತು.

ಈ ತೀರ್ಪನ್ನು ಪುನಃ ಪರಿಶೀಲಿಸಿ, ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಮುಕೇಶ್ ಮನವಿ ಮಾಡಿದ್ದು, ಈ ಕುರಿತು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.
2012 ಡಿಸೆಂಬರ್ 16 ರಂದು ದೆಹಲಿಯಲ್ಲಿ ಅರೆವೈದ್ಯಕೀಯ ವಿದ್ಯಾರ್ಥಿಯನ್ನು ಆಕೆಯ ಸ್ನೇಹಿತನೆದುರಲ್ಲೇ, ಚಲಿಸುತ್ತಿದ್ದ ಬಸ್ಸಿನಲ್ಲಿ ಆರು ಜನ ಕಾಮುಕರು ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ನಂತರ ಆಕೆ ಡಿ.29 ರಂದು ಅಸುನೀಗಿದ್ದರು.












Click it and Unblock the Notifications