ದೆಹಲಿಯಲ್ಲಿ ಯಡಿಯೂರಪ್ಪ : ಕರ್ನಾಟಕ ಭವನದಲ್ಲಿ ಮಹತ್ವದ ಸಭೆ
ನವದೆಹಲಿ, ಆಗಸ್ಟ್ 06 : ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ದೆಹಲಿ ಪ್ರವಾಸದಲ್ಲಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮೊದಲ ಬಾರಿಗೆ ಅವರು ದೆಹಲಿ ಪ್ರವಾಸ ಕೈಗೊಂಡಿದ್ದು, ಪಕ್ಷದ ನಾಯಕರನ್ನು ಭೇಟಿಯಾಗಲಿದ್ದಾರೆ.
ಮಂಗಳವಾರ ಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಕರ್ನಾಟಕ ಭವನದ ನೂತನ ಕಟ್ಟಡ ನಿರ್ಮಾಣ ಪ್ರಗತಿ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಆಗಸ್ಟ್ 15ರ ಬಳಿಕ ಹಳೆ ಕಟ್ಟಡ ತೆರವು ಮಾಡುವ ಕಾರ್ಯ ಆರಂಭಿಸಬೇಕು ಎಂದು ಸೂಚಿಸಿದರು.
ಹೊಸ ಕಟ್ಟಡದ ನೀಲಿನಕ್ಷೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಯಡಿಯೂರಪ್ಪ, ಹಳೆಯ ನಕಾಶೆಯಲ್ಲಿ ಕಚೇರಿ ಕಟ್ಟಡಕ್ಕೆ ಎರಡು ಅಂತಸ್ತುಗಳನ್ನು ಕಾಯ್ದಿರಿಸಲಾಗಿದೆ. ಕರ್ನಾಟಕ ಸಂಸ್ಕೃತಿ ಬಿಂಬ ಕಾಣುತ್ತಿಲ್ಲ ಎಂದರು.

ನಕಾಶೆಯಲ್ಲಿ ಬದಲಾವಣೆ ಮಾಡಿ, ಕಚೇರಿ ಕಟ್ಟಡ ಒಂದು ಅಂತಸ್ತಿಗೆ ಮಾತ್ರ ಸೀಮಿತವಾಗಿರಿಸಿಕೊಂಡು, ಅತಿಥಿಗಳ ಕೊಠಡಿ ಹಾಗೂ ಸಂಸ್ಕೃತಿಯ ಪ್ರತಿಬಿಂಬಿಕ್ಕೆ ಆದ್ಯತೆ ನೀಡುವ ಹೊಸ ನೀಲನಕ್ಷೆಯನ್ನು ಸಿದ್ಧಪಡಿಸುವಂತೆ ಸೂಚಿಸಿದರು.
ಬುಧವಾರ ಸಂಜೆಯೊಳಗೆ ಹೊಸ ನಕ್ಷೆ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆಗಸ್ಟ್ 15 ರ ಬಳಿಕ ಹಳೆಯ ಕಟ್ಟಡ ತೆರವಿನ ಕೆಲಸಕ್ಕೆ ಚಾಲನೆ ನೀಡಬೇಕೆಂದು ನಿರ್ದೇಶನ ನೀಡಿದರು.
ಮಾರ್ಚ್ ತಿಂಗಳಿನಲ್ಲಿ ನೂತನ ಕರ್ನಾಟಕ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿತ್ತು. ಆಗ ಲೋಕೋಪಯೋಗಿ ಸಚಿವರಾಗಿದ್ದ ಎಚ್. ಡಿ. ರೇವಣ್ಣ ಬಿ. ಎಸ್. ಯಡಿಯೂರಪ್ಪ ಕೈ ಹಿಡಿದು ಪೂಜೆ ಮಾಡಿಸಿದ್ದರು.
ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಪಾಲ್ಗೊಂಡಿದ್ದರು. ಯಡಿಯೂರಪ್ಪಗೆ ಅಧಿಕೃತ ಆಹ್ವಾನ ಇಲ್ಲಿದಿದ್ದರೂ ಕರ್ನಾಟಕ ಭವನದಲ್ಲಿದ್ದ ಅವರ ಕೈಯಿಂದ ರೇವಣ್ಣ ಪೂಜೆ ಮಾಡಿಸಿದ್ದರು.
ನವದೆಹಲಿಯಲ್ಲಿರುವ ಈಗಿರುವ ಕರ್ನಾಟಕ ಭವನ ಹಳೆಯದಾಗಿದೆ. ಆದ್ದರಿಂದ, 82 ಕೋಟಿ ವೆಚ್ಚದಲ್ಲಿ ನೂತನ ಭವನವನ್ನು ನಿರ್ಮಾಣ ಮಾಡಲಾಗುತ್ತಿದೆ.












Click it and Unblock the Notifications