ಲೋಕಸಭೆ: 300 ಕ್ಷೇತ್ರಗಳಲ್ಲಿ 'ಆಮ್ ಆದ್ಮಿ' ಸ್ಪರ್ಧೆ
ನವದೆಹಲಿ, ಜ.1- ಲೋಕಸಭಾ ಚುನಾವಣೆ ವರ್ಷಕ್ಕೆ ಕಾಲಿಟ್ಟಾಗಿದೆ. ನಾನಾ ರಾಜಕೀಯ ಪಕ್ಷಗಳೂ ಭರ್ಜರಿ ತಯಾರಿ ನಡೆಸಿವೆ. ಪ್ರಧಾನಿ ಅಭ್ಯರ್ಥಿ ನರೆಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಪಕ್ಷವಂತೂ ವರ್ಷದ ಹಿಂದೆಯೇ ದಿಲ್ಲಿ ಗದ್ದುಗೆ ಮೇಲೆ ಕಣ್ಣಿಟ್ಟು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಈ ಮಧ್ಯೆ, ಅರೆಬರೆಯಾಗಿ ದೆಹಲಿ ಗದ್ದುಗೆಯೇರಿರುವ ಅರವಿಂದ್ ಕೇಜ್ರಿವಾಲಾ ನೇತೃತ್ವದ ಆಮ್ ಆದ್ಮಿ ಪಕ್ಷವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬರೋಬ್ಬರಿ 300 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ.

ಲೋಕಸಭಾ ಚುನಾವಣೆಗೆ ಇನ್ನೂ ಸುಮಾರು ಮೂರು ತಿಂಗಳುಗಳಿರುವಾಗಲೇ ಮುಂದಿನ 15-20 ದಿನಗಳೊಳಗೆ ಎಎಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ. (AAP: ಲೋಕಸಭೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ)
ಲೋಕಸಭಾ ಚುನಾವಣೆಯಲ್ಲಿ ಎಎಪಿಯ ಕಾರ್ಯ ಯೋಜನೆಗೆ ಅಂತಿಮ ಸ್ವರೂಪವನ್ನು ನೀಡುವ ಹೊಣೆಯನ್ನು ಪಕ್ಷದ ಹಿರಿಯ ನಾಯಕ ಸಂಜಯ್ ಸಿಂಗ್ಗೆ ಹಾಗೂ ಪಕ್ಷದ ಹಿರಿಯ ಕಾರ್ಯನಿರೂಪಕ ಯೋಗೇಂದ್ರ ಯಾದವ್ ಅವರಿಗೆ ವಹಿಸಲಾಗಿದೆ.
Mission Delhi ಯಶಸ್ಸಿನ ಬಳಿಕ:
ಈ ಮೊದಲು ನಾವು 100 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ಸಾಕು ಎಂದಿಕೊಂಡಿದ್ದೆವು. ಆದರೆ ದಿಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ದೇಶದ ವಿವಿಧೆಡೆ ಆಮ್ ಆದ್ಮಿ ಪಕ್ಷಕ್ಕೆ ದೊರೆಯುತ್ತಿರುವ ಜನ ಬೆಂಬಲವನ್ನು ಕಂಡ ಬಳಿಕ, ನಾವು ನಮ್ಮ ಆಲೋಚನೆ ಬದಲಿಸಿದ್ದು, ಮೂರು ಪಟ್ಟು ಹೆಚ್ಚಾಗಿ ಅಂದರೆ 300 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದೇವೆ' ಎಂದು ಸಂಜಯ್ ಸಿಂಗ್ ತಿಳಿಸಿದ್ದಾರೆ.
ಇಂದು ಮೊದಲ ಅಧಿವೇಶನ: ವರ್ಷದ ಮೊದಲ ದಿನ ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ 20 ವರ್ಷ ವಯಸ್ಸಿನ ದಿಲ್ಲಿ ವಿಧಾನಸಭೆ ಚೊಚ್ಚಲ ಅಧಿವೇಶನ ಕಾಣುತ್ತಿದೆ.
ಈ ಮಧ್ಯೆ, ಚುನಾವಣೆಪೂರ್ವ ತಾನು ನೀಡಿದ್ದ ಭರವಸೆಯಂತೆ ಆಮ್ ಆದ್ಮಿ ಪಕ್ಷದ ನೇತಾರ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರಕಾರವು ಇದೀಗ ವಿದ್ಯುತ್ ದರವನ್ನೂ ಶೇ. 50ರಷ್ಟು ಕಡಿತಗೊಳಿಸಿದ್ದು, ಇಂದಿನಿಂದಲೇ ಅನ್ವಯವಾಗಲಿದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ 2 ದಿನ ವಿಶ್ರಾಂತಿ ಪಡೆಯಬೇಕು ಎಂಬ ವೈದ್ಯರ ಸಲಹೆಯನ್ನೂ ಕಡೆಗಣಿಸಿ ಮಂಗಳವಾರ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಕೇಜ್ರಿವಾಲ್, ಈ ಮಹತ್ವದ ನಿರ್ಧಾರ ಪ್ರಕಟಿಸಿದರು. ಆದರೆ ಇದು ಅನ್ವಯಿಸುವುದು 400 ಯೂನಿಟ್ ಒಳಗೆ ವಿದ್ಯುತ್ ಬಳಸುವವರಿಗೆ ಮಾತ್ರ.
ಅದಕ್ಕಿಂತ ಬಳಕೆ ಹೆಚ್ಚಾದರೆ ಉಚಿತವಾಗಿ ಲಭ್ಯವಿದ್ದ 400 ಯೂನಿಟ್ಗೂ ಸೇರಿದಂತೆ ಪೂರ್ತಿ ಬಳಕೆಗೆ ಬಿಲ್ ಪಾವತಿಸಬೇಕಾಗುತ್ತದೆ. ಆದರೆ ಈ ಸಿಹಿ ಘೋಷಣೆಯ ಮಧ್ಯೆ ದಿಲ್ಲಿಗೆ ವಿದ್ಯುತ್ ಪೂರೈಸುವ 3 ಖಾಸಗಿ ವಿದ್ಯುತ್ ಪೂರೈಕೆ ಕಂಪನಿಗಳ ಲೆಕ್ಕಪರಿಶೋಧನೆಗೆ ಕೇಜ್ರಿವಾಲ್ ಚಿಂತನೆ ನಡೆಸಿದ್ದಾರೆ.
ಸೋಮವಾರವಷ್ಟೇ ಪ್ರತಿದಿನ ದಿಲ್ಲಿಯ ಆಯ್ದ ಭಾಗದ ಜನರಿಗೆ 667 ಲೀಟರ್ ಉಚಿತ ನೀರನ್ನು ಪೂರೈಸುವುದಾಗಿ ಕೇಜ್ರಿವಾಲ್ ಘೋಷಿಸಿದ್ದರು. ಇದರೊಂದಿಗೆ ಆಮ್ ಆದ್ಮಿ ಸರ್ಕಾರವು ತಾನು ನೀಡಿದ್ದ 18 ಭರವಸೆಗಳಲ್ಲಿ 2 ಭರವಸೆಗಳನ್ನು ಈಡೇರಿಸಿದಂತಾಗಿದೆ.
ಜ. 2ರಂದು ತಾವು ವಿಶ್ವಾಸಮತ ಯಾಚಿಸಲಿದ್ದು, ಕಾಂಗ್ರೆಸ್- ಬಿಜೆಪಿಗಳು ನಮ್ಮ ಸರಕಾರವನ್ನು ಬೀಳಿಸಲೂಬಹುದು. ಅಷ್ಟರಲ್ಲೇ ಸಾಕಷ್ಟು ಮಹತ್ವದ ನಿರ್ಣಯ ಕೈಗೊಳ್ಳಬೇಕಿದೆ ಎಂದೂ ಕೇಜ್ರಿವಾಲ್ ಹೇಳಿದರು. ಆದರೆ ಸರಕಾರ ಬೀಳಿಸಲ್ಲ ಎಂದು ದಿಲ್ಲಿ ಕಾಂಗ್ರೆಸ್ ಪ್ರಭಾರಿ ಶಕೀಲ್ ಅಹ್ಮದ್ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications