ಥರ್ಡ್ ಫ್ರಂಟ್ ಕನಸು: ಕೋಮುಭಾವ ವಿರುದ್ಧ ಹೋರಾಟ
ನವದೆಹಲಿ, ಅ. 31: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾವುದೇ ರಾಜಕೀಯ ಪಕ್ಷಕ್ಕೂ ಬಹುಮತ ದೊರೆಯಲಾರದು ಎಂದು ಚುನಾವಣಾ ಸಮೀಕ್ಷೆಗಳು ಹೇಳುತ್ತಿರುವುದು ತೃತೀಯ ರಂಗದ ಪಕ್ಷಗಳಿಗೆ ಇಂಪಾಗಿ ಕೇಳತೊಡಗಿದೆ. ಈ ಹಿನ್ನೆಲೆ ರಾಗದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯೇತರ ರಾಜಕೀಯ ನೇತಾರರು ಗಾಢ ನಿದ್ದೆಯಿಂದ ಎದ್ದುಕುಳಿತಿದ್ದಾರೆ.
ನಿನ್ನೆ ದೆಹಲಿಯಲ್ಲಿ ಬೃಹತ್ ಸಮಾವೇಶ ನಡೆಸಿದ ಈ ನಾಯಕರು 'ತೃತೀಯ ರಂಗ ರಚನೆ ಜತೆಗೆ ಕೋಮುವಾದಿ ಶಕ್ತಿಗಳನ್ನು ದೂರ ಇರಿಸುವ ಪ್ರಯತ್ನ ನಡೆಯಬೇಕಾಗಿದೆ' ಎಂದು ಪ್ರತಿಪಾದಿಸಿದ್ದಾರೆ. ಸಮಾಜವಾದಿ ಪಕ್ಷ, ಬಿಜು ಜನತಾ ದಳ, ಅಣ್ಣಾಡಿಎಂಕೆ ಸೇರಿದಂತೆ 14 ಪಕ್ಷಗಳ ನಾಯಕರು ಬುಧವಾರದ ಸಮಾವೇಶದಲ್ಲಿ ಭಾಗವಹಿಸಿದ್ದರು.
ಬಿಜೆಪಿ ಜತೆ ಸಖ್ಯ ಕಡಿದುಕೊಂಡಿರುವ ಜೆಡಿಯು ಮುಖಂಡ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬುಧವಾರದ ಸಮಾವೇಶದಲ್ಲಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಿಜೆಪಿ ಜತೆಗಿನ ಸಖ್ಯಕ್ಕಿಂತ ಪಕ್ಷದ ತತ್ವಗಳೇ ಮುಖ್ಯ. ಅದಕ್ಕಾಗಿ ಯಾವುದೇ ರೀತಿಯ ಬೆಲೆಯನ್ನಾದರೂ ತೆರಲು ಸಿದ್ಧ ಎಂದು ತಮ್ಮ ಭಾಷಣದಲ್ಲಿ ಹೇಳಿದರು.

ಅಲ್ಪಸಂಖ್ಯಾತರ ರಕ್ಷಣೆಗೆ ಕೈ ಎತ್ತಿ- ದೇವೇಗೌಡ
ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು 'ನಾವೆಲ್ಲರೂ ಒಟ್ಟು ಸೇರಿ ಅಲ್ಪಸಂಖ್ಯಾತರನ್ನು ರಕ್ಷಿಸಬೇಕಾಗಿದೆ. ಜಾತ್ಯತೀತತೆ ರಕ್ಷಣೆಗಾಗಿ ಎಲ್ಲರೂ ಕೈಜೋಡಿಸಬೇಕಾಗಿದೆ. ಕೋಮು ಸಾಮರಸ್ಯ ಕಾಪಾಡುವ ಹಾಗೂ ಜಾತ್ಯತೀತ ಪಕ್ಷಗಳ ನಡುವಿನ ಒಗ್ಗಟ್ಟು ಕಾಪಾಡುವುದರ ಬಗ್ಗೆ ತಮ್ಮ ಪಕ್ಷದ ಬೆಂಬಲ ಇದೆ ಎಂದು ದೇವೇಗೌಡರು ಘೋಷಿಸಿದರು.

ಕೋಮುವಾದ ವಿರುದ್ಧ ಹೋರಾಟ:
ತೃತೀಯ ರಂಗ ರಚನೆ ಸೇರಬೇಕೇ ಬೇಡವೆ ಎಂಬ ಬಗ್ಗೆ ನಾವು ನಿರ್ಧರಿಸಿಲ್ಲ. ಆದರೆ ನಮ್ಮ ಹೋರಾಟ ಕೋಮುವಾದ, ಭಯೋತ್ಪಾದನೆ ಮತ್ತು ಫ್ಯಾಸಿಸಂ ಶಕ್ತಿಗಳ ವಿರುದ್ಧ ನಮ್ಮ ಪಕ್ಷದ ಹೋರಾಟ ನಡೆಯುತ್ತದೆ ಎಂದು ಜೆಡಿಯು ನಾಯಕ ಹೇಳಿದರು. ಇದಕ್ಕಾಗಿ ಎಲ್ಲರೂ ಗರಿಷ್ಠ ಮಟ್ಟದ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದೂ ಅವರು ಸೂಕ್ಷ್ಮವಾಗಿ ಹೇಳಿದರು.

ಎನ್ ಸಿಪಿ ವಾದವೇನು:
ಯುಪಿಎ ಸರ್ಕಾರದಲ್ಲಿದ್ದುಕೊಂಡು ದೆಹಲಿ ಸಮಾವೇಶದಲ್ಲಿ ಭಾಗವಹಿಸಿದ್ದನ್ನು ಎನ್ ಸಿಪಿ ನಾಯಕ ಡಿಪಿ ತ್ರಿಪಾಠಿ ಸಮರ್ಥಿಸಿಕೊಂಡಿದ್ದಾರೆ. ಸದ್ಯ ಸಮ್ಮಿಶ್ರ ಸರ್ಕಾರಗಳ ಯುಗ. ಹೀಗಾಗಿ ಅಗತ್ಯಕ್ಕೆ ತಕ್ಕಂತೆ ನಮ್ಮ ಆಯ್ಕೆಗಳನ್ನು ಹುಡುಕಬೇಕಾಗಿದೆ ಎಂದು ಕೇಂದ್ರ ಭಾರಿ ಕೈಗಾರಿಕೆಗಳ ಖಾತೆ ಸಚಿವ ಪ್ರಫುಲ್ ಪಟೇಲ್ ತಿಳಿಸಿದ್ದಾರೆ.

ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಹಿಂದುತ್ವ ನೀತಿಯನ್ನು ಕಟುವಾಗಿ ಟೀಕಿಸಿದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಹಿಂದೂ ಸಂಘಟನೆಗಳು ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಕದಡುತ್ತವೆ ಎಂದು ಆರೋಪಿಸಿದರು.

3ನೇ ರಂಗ ಎಂಬುದು ಭ್ರಮೆ
ತೃತೀಯ ರಂಗದ ಸಮಾವೇಶದಲ್ಲಿ ಭಾಗವಹಿಸಿದ ಜೆಡಿಯು ನಾಯಕ ನಿತೀಶ್ ಕುಮಾರ್ ಅವರ ನಿರ್ಧಾರವನ್ನು ಬಿಜೆಪಿ ಟೀಕಿಸಿದೆ. ನವದೆಹಲಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ರವಿಶಂಕರ ಪ್ರಸಾದ್ ತೃತೀಯ ರಂಗ ರಚನೆ ಪ್ರಯತ್ನ ಒಂದು ಭ್ರಮೆ. ಸಮಾವೇಶದಲ್ಲಿ ಭಾಗವಹಿಸುವ ಮೂಲಕ ನಿತೀಶ್ ಕಾಂಗ್ರೆಸ್ಸಿಗೆ ಸನಿಹವಾಗುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿಯನ್ನು ಚುಚ್ಚಿದ ಮುಲಾಯಂ ಸಿಂಗ್
'ಹದಿನಾಲ್ಕೂ ಪಕ್ಷಗಳು ಹೀಗೆ ಒಟ್ಟಾದರೆ ಕೋಮುವಾದಿ ಪಕ್ಷಗಳು/ ಶಕ್ತಿಗಳು ಸೋಲುವುದು ಶತಃಸಿದ್ಧ' ಎಂದು ಮುಲಾಯಂ ಸಿಂಗ್ ಯಾದವ್ ಅವರು ಬಿಜೆಪಿಯನ್ನು ಚುಚ್ಚಿದರು.












Click it and Unblock the Notifications