ತಮ್ಮ ಪಕ್ಷದ ಶಾಸಕರನ್ನು ಸಿನಿಮೀಯ ರೀತಿ ರಕ್ಷಿಸಿದ ಎನ್ಸಿಪಿ ಯುವ ಘಟಕ
ನವದೆಹಲಿ, ನವೆಂಬರ್ 26: ಬಿಜೆಪಿ-ಎನ್ಸಿಪಿ ಬಂಡಾಯ ಶಾಸಕರ ಅಲ್ಪಾಯುಶಿ ಸರ್ಕಾರ ಇಂದು ಉರುಳಿದೆ. ಬಿಜೆಪಿಗೆ ಬೆಂಬಲ ನೀಡಿದ್ದ ಕೆಲವೇ ಸಂಖ್ಯೆಯ ಶಾಸಕರು ಮಾತೃಪಕ್ಷಕ್ಕೆ ವಾಪಸ್ಸಾಗಿದ್ದಾರೆ.
ತಮಗೆ ಬೆಂಬಲ ನೀಡಿದ್ದ ಎನ್ಸಿಪಿ ಶಾಸಕರನ್ನು ಬಿಜೆಪಿಯು ರೆಸಾರ್ಟ್ ಒಂದರಲ್ಲಿ ಇಟ್ಟಿತ್ತು. ಎನ್ನಲಾಗಿದ್ದು, ನಾಲ್ವರು ಶಾಸಕರನ್ನು ಬಿಡಿಸಿಕೊಂಡು ಬಂದ ಕಾರ್ಯಾಚರಣೆಯ ಬಗ್ಗೆ ಎನ್ಸಿಪಿ ಮಾಧ್ಯಮಗಳಿಗೆ ಹೇಳಿಕೊಂಡಿದೆ.
ಶನಿವಾರವೇ ಎನ್ಸಿಪಿಯ ಶಾಸಕರಾದ ದೌಲತ್ ದರೋಡಾ, ಅನಿಲ್ ಪಾಟೀಲ್, ನಿತಿನ್ ಪವಾರ್, ನರಹರಿ ಜಿರ್ವಾಲ್ ಅವರನ್ನು ಗುರುಗ್ರಾಮದ ಹೊಟೆಲ್ ಒಂದಕ್ಕೆ ಕರೆದೊಯ್ಯಲಾಗಿತ್ತು. ಅದರಲ್ಲಿ ಒಬ್ಬ ಶಾಸಕ ಶನಿವಾರ ತಡರಾತ್ರಿ 'ನಮ್ಮನ್ನು ದೆಹಲಿಯ ಹೊಟೆಲ್ ಒಂದರಲ್ಲಿ ಬಂಧಿಸಿ ಇಡಲಾಗಿದೆ' ಎಂದು ಶರದ್ ಪವಾರ್ ಗೆ ಸಂದೇಶ ಕಳುಹಿಸಿದ್ದ ಎಂದು ಎನ್ಸಿಪಿ ಮುಖಂಡರು ಹೇಳಿದ್ದಾರೆ.

ನಾಲ್ವರು ಶಾಸಕರನ್ನು ಗುರುಗ್ರಾಮದ ಐಶಾರಾಮಿ ಹೊಟೆಲ್ ಒಂದರಲ್ಲಿ ಇಡಲಾಗಿತ್ತು. ಇದನ್ನು ಎನ್ಸಿಪಿಯ ವಿದ್ಯಾರ್ಥಿ ಘಟಕ ಪತ್ತೆ ಹಚ್ಚಿತು. ಕೂಡಲೇ ನಾವು 100 ಜನರ ಗುಂಪು ಮಾಡಿಕೊಂಡು ಹೊಟೆಲ್ಗೆ ಹೋದೆವು ಆದರೆ ಅಲ್ಲಿ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರು ಇದ್ದಿದ್ದರಿಂದ ಹೊಟೆಲ್ ಒಳಕ್ಕೆ ಹೋಗಲು ಸಾಧ್ಯವಾಗಲಿಲ್ಲ ಎಂದು ಎನ್ಸಿಪಿ ಯುವ ಘಟಕದ ಅಧ್ಯಕ್ಷ ಧೀರಜ್ ಶರ್ಮಾ ಘಟನೆಯನ್ನು ವಿವರಿಸುತ್ತಾ ಹೋದರು.
ಭಾನುವಾರ ಬೆಳಿಗ್ಗೆ ನಾಲ್ವರು ಶಾಸಕರನ್ನು ಬಿಜೆಪಿ ಕಾರ್ಯಕರ್ತರು ಬೆಳಗಿನ ತಿಂಡಿಗೆಂದು ಕರೆತರಲಾಯಿತು ಆದರೆ ಆಗ ಶಾಸಕರೊಡನೆ ನಮ್ಮ ಸಂಪರ್ಕ ಸಾಧ್ಯವಾಗಲಿಲ್ಲ. ಆದರೆ ಆ ನಂತರ ನಮ್ಮಲ್ಲೇ ಕೆಲವರು ಹೊಟೆಲ್ನಲ್ಲಿ ರೂಂ ಬುಕ್ ಮಾಡಿ ಹೊಟೆಲ್ ಒಳಗೆ ಹೋದೆವು.
'ಹೊಟೆಲ್ನಲ್ಲಿ ಸಾಮಾನ್ಯರಂತೆ ತಿರುಗಾಡಿದ ನಾವು ಬಿಜೆಪಿ ಕಾರ್ಯಕರ್ತರ ಕಣ್ಣು ತಪ್ಪಿಸಿ ಶಾಸಕರನ್ನು ಭೇಟಿ ಮಾಡುವ ಪ್ರಯತ್ನಗಳೆಲ್ಲಾ ವಿಫಲವಾದವು. ಕೊನೆಗೆ ರಾತ್ರಿ 10:30 ಕ್ಕೆ ನಾವು ಒಬ್ಬ ಎನ್ಸಿಪಿ ಶಾಸಕರನ್ನು ಗುಟ್ಟಾಗಿ ಸಂಪರ್ಕ ಮಾಡಿ ಅವರನ್ನು ಹೊಟೆಲ್ ನಿಂದ ಹೊರಗೆ ಕರೆತಂದೆವು' ಎಂದು ಧೀರಜ್ ಹೇಳಿದರು.
'11 ಗಂಟೆ ಸುಮಾರಿಗೆ ಬಿಜೆಪಿ ಕಾರ್ಯಕರ್ತರು ಊಟಕ್ಕೆ ಕೂತರು ಈ ಸಮಯ ಬಳಸಿಕೊಂಡ ನಾವು ಇನ್ನೂ ಇಬ್ಬರು ಶಾಸಕರನ್ನು ಹೊಟೆಲ್ನಿಂದ ಹೊರಕ್ಕೆ ಗುಟ್ಟಾಗಿ ಕರೆತಂದು, ಒಟ್ಟು ಮೂವರು ಶಾಸಕರನ್ನು ದೆಹಲಿಯ ವಿಮಾನ ನಿಲ್ದಾಣಕ್ಕೆ ಕರೆತಂದು ಅಲ್ಲಿಂದ ರಾತ್ರಿ 2:30 ಕ್ಕೆ ಮುಂಬೈಗೆ ಪ್ರಯಾಣ ಬೆಳೆಸಿದೆವು' ಎಂದು ಧೀರಜ್ ಕಾರ್ಯಾರಣೆಯನ್ನು ವಿವರಿಸಿದರು.
ಒಬ್ಬ ಶಾಸಕರ ಆರೋಗ್ಯ ಸರಿ ಇಲ್ಲದ ಕಾರಣ ಅವರನ್ನು ರಾತ್ರಿ ಕರೆದುಕೊಂಡು ಬರಲಾಗಲಿಲ್ಲ. ಅವರನ್ನು ಸೋಮವಾರ ಬೆಳಗ್ಗೆ 4:30 ಕ್ಕೆ ಅವರನ್ನು ದೆಹಲಿಯಿಂದ ಮುಂಬೈಗೆ ಕರೆತರಲಾಯಿತು, ಹೊಟೆಲ್ನಲ್ಲಿದ್ದ ಶಾಸಕರಿಗೆ 'ಶರದ್ ಪವಾರ್ ಅವರೇ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ' ಎಂದು ನಂಬಿಸಲಾಗಿತ್ತು ಎಂದು ಧೀರಜ್ ಶರ್ಮಾ ಹೇಳಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಎನ್ಸಿಪಿಯ ವಿದ್ಯಾರ್ಥಿ ಘಟಕದ ಅಧ್ಯಕ್ಷೆ ಸೋನಿಯಾ ದೂಹನ್ ಪಾತ್ರ ಮಹತ್ವದ್ದಾಗಿದ್ದು, ಕಾರ್ಯಾಚರಣೆ ಯಶಸ್ವಿ ಆಗಲು ಅವರ ಕಾರ್ಯತಂತ್ರ ಮತ್ತು ಚಾಣಾಕ್ಷತೆ ಕಾರಣ ಎಂದು ಎನ್ಸಿಪಿ ಕೊಂಡಾಡಿದೆ. ಸೋನಿಯಾ ದೂಹನ್ ಗೆ ಈಗ ಪಕ್ಷದಲ್ಲಿ ತಾರಾ ಮೆರುಗು ದೊರೆತಿದೆ.












Click it and Unblock the Notifications