ವಿರೋಧಿಗಳನ್ನು ರೊಚ್ಚಿಗೆಬ್ಬಿಸಿದ ಮೋದಿಯ 'ಭೂಕಂಪ'ದ ಮಾತು!
ನವದೆಹಲಿ, ಫೆಬ್ರವರಿ 07 : "ಅಂತೂ ಭೂಕಂಪ ಆಗೇ ಬಿಟ್ಟಿತು. ಇದಕ್ಕೆ ಏನಾದರೂ ಕಾರಣವಿರಲೇಬೇಕಲ್ಲ? ಭೂತಾಯಿ ಮುನಿಸಿಕೊಂಡಿರಬೇಕು" ಎಂಬ ನರೇಂದ್ರ ಮೋದಿ ಅವರ ಮಾತಿಗೆ ಲೋಕಸಭೆಯಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗಿದೆ.
ಕೊನೆಗೆ ಭೂಕಂಪವಾಗಿದ್ದಾದರೂ ಯಾತಕ್ಕೆ? ಕೆಲವರು SCAMನಲ್ಲಿಯೂ ಸೇವಾ ಮತ್ತು ವಿನಮ್ರತಾ ಭಾವವನ್ನು ತೋರಿಸುತ್ತಿದ್ದರೆ ಭೂಮಿ ತಾಯಿಗೆ ದುಃಖವಾಗದೆ ಇರುತ್ತದಾ ಎಂದು ಮೋದಿಯವರು ರಾಹುಲ್ ಗಾಂಧಿ ಮತ್ತು ವಿರೋಧಿ ಪಕ್ಷದವರನ್ನು ಕೆಣಕಿದ್ದಾರೆ.
ಭೂಕಂಪವಾಗಿರುವುದು ನನಗೆ ತಿಳಿದಿದೆ. ಈ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರಕಾರ ರಾಜ್ಯ ಸರಕಾರದ ಜೊತೆಗಿದೆ ಎಂದು ನರೇಂದ್ರ ಮೋದಿ ಅವರು ಸ್ಪಷ್ಟೀಕರಣ ಕೊಟ್ಟರೂ ಗದ್ದಲ ಕಡಿಮೆಯಾಗಿಲ್ಲ. [ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಭೂಕಂಪ]

ವಿರೋಧಪಕ್ಷದ ಆಕ್ರೋಶದ ಬಗ್ಗೆ ತಲೆಕೆಡಿಸಿಕೊಳ್ಳದ ಮೋದಿ, ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಜೀವದಾನ ಮಾಡದ ನನ್ನಂತಹ ಲಕ್ಷಾಂತರ ಜನರಿದ್ದಾರೆ. ಅವರೆಲ್ಲ ದೇಶಕ್ಕಾಗಿ ಜೀವಿಸುತ್ತಿದ್ದಾರೆ, ಸೇವೆ ಮಾಡುತ್ತಿದ್ದಾರೆ ಎಂದು ಮಲ್ಲಿಕಾರ್ಜನ ಖರ್ಗೆ ಅವರನ್ನು ಮಾತಿನಿಂದ ತಿವಿದರು. [ನಿಮ್ಮ ಮನೆಯಿಂದ ನಾಯಿ ಕೂಡ ತ್ಯಾಗ ಮಾಡಿಲ್ಲ : ಖರ್ಗೆ]
ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ, ದೇಶಕ್ಕಾಗಿ ಮಹಾತ್ಮಾ ಗಾಂಧಿಯಂತಹ ಕಾಂಗ್ರೆಸ್ ನಾಯಕರು ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ, ಬಿಜೆಪಿಯಿಂದ ಯಾರು ಪ್ರಾಣ ತ್ಯಾಗ ಮಾಡಿದ್ದಾರೆ? ಒಂದು ನಾಯಿ ಕೂಡ ಪ್ರಾಣ ತ್ಯಾಗ ಮಾಡಿಲ್ಲ ಎಂದು ವಂಗ್ಯವಾಡಿದ್ದರು.
ನಾವು ಎಲ್ಲವನ್ನೂ ಚುನಾವಣೆಯ ದೃಷ್ಟಿಯಿಂದ ನೋಡುವುದಿಲ್ಲ. ದೇಶ ಸೇವೆಯೇ ನಮಗೆ ಎಲ್ಲಕ್ಕಿಂತ ಮುಖ್ಯ. ನಮಗೆ ಚುನಾವಣೆಯ ಚಿಂತೆಯಿಲ್ಲ, ದೇಶದ ಚಿಂತೆ ಇದೆ. ದೇಶದಲ್ಲಿ ಒಂದು ವರ್ಗ ಬಡಜನರನ್ನು ಲೂಟಿ ಮಾಡುತ್ತಲೇ ಇತ್ತು. ಇದರಿಂದಾಗಿಯೇ ದೇಶ ಔನ್ಯತ್ಯಕ್ಕೇರಲಿಲ್ಲ ಎಂದು ಮೋದಿ ಕಟಕಿಯಾಡಿದರು.
ದೇಶದಿಂದ ಎಷ್ಟು ಹೋಯಿತು ಎಂಬ ಮಾತು ಮೊದಲು ಬರುತ್ತಿತ್ತು. ಈಗ, ಮೋದಿಜಿ ಎಷ್ಟು ತಂದರು ಎಂಬ ಮಾತು ಕೇಳಿಬರುತ್ತಿದೆ. ಇದೇ ಸರಿಯಾದ ಮಾರ್ಗ. ದೇಶಕ್ಕೆ ಒಳ್ಳೆಯ ಆರ್ಥಿಕ ಸ್ಥಿತಿಯ ಅಗತ್ಯವಿತ್ತು. ಇದಕ್ಕಾಗಿಯೇ ನೋಟು ನಿಷೇಧ ಮಾಡಲಾಯಿತು ಎಂದು ಅವರು ಅಪನಗದೀಕರಣವನ್ನು ಸಮರ್ಥಿಸಿಕೊಂಡರು.












Click it and Unblock the Notifications