ಸೈನಿಕರಿಗೆ ಹಾಗೂ ದೇಶಕ್ಕೆ ಕಾಂಗ್ರೆಸ್ ಮೋಸ ಮಾಡಿದೆ : ನರೇಂದ್ರ ಮೋದಿ
ನವದೆಹಲಿ, ಫೆಬ್ರವರಿ 25 : ದೇಶ ಮೊದಲು ಎನ್ನುವರು ಬೇಕಾ? ಅಥವಾ ಕುಟುಂಬ ಮೊದಲು ಎನ್ನುವರು ಬೇಕಾ? ಎಂದು ಪ್ರಧಾನಿ ನರೇಂದ್ರ ಮೋದಿ ಕೇಳಿದರು.
ಹುತಾತ್ಮ ಸೈನಿಕರ ಸ್ಮಾರಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಹಿಂದೆ ಇದ್ದ ಸರ್ಕಾರವು ಸೈನಿಕರನ್ನು ತನ್ನ ಆದಾಯದ ಮೂಲಗಳನ್ನಾಗಿ ಮಾಡಿಕೊಂಡಿತ್ತು ಎಂದು ಕಾಂಗ್ರೆಸ್ ಮೇಲೆ ಆರೋಪ ಮಾಡಿದರು.
ಭಾಷಣದುದ್ದಕ್ಕೂ ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬವನ್ನು ಟೀಕಿಸಿದ ಮೋದಿ, ಯುಪಿಎ ಅವಧಿಯಲ್ಲಿ ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ಕೊಳ್ಳಲು ಭಾರತೀಯ ಸೇನೆ ಮನವಿ ಸಲ್ಲಿಸಿತ್ತು. ಆದರೆ ನಮ್ಮ ಸರ್ಕಾರ ಬರುವ ವರೆಗೂ ಅದು ಆಗಿರಲಿಲ್ಲ. ನಾವು ಈ ವರೆಗೆ 2.30 ಲಕ್ಷಕ್ಕೂ ಹೆಚ್ಚು ಬುಲೆಟ್ ಪ್ರೂಫ್ ಜಾಕೆಟ್ ಖರೀದಿಸಿದ್ದೇವೆ ಎಂದರು.
ಗಾಂಧಿ ಕುಟುಂಬವನ್ನು ಹರಿತ ಮಾತುಗಳಿಂದ ಟೀಕಿಸಿದ ಮೋದಿ, ಭೋಪೋರ್ಸ್, ಆಗಸ್ಟಾವೆಸ್ಟ್ಲ್ಯಾಂಡ್ ಹೀಗೆ ಹಲವು ಹಗರಣದ ತನಿಖೆಗಳು ಒಂದೇ ಕುಟುಂಬದ ಬಾಗಿಲಿಗೆ ಹೋಗಿ ನಿಲ್ಲುತ್ತಿರವುದು ಕಾಕತಾಳೀಯವಲ್ಲ ಎಂದ ಅವರು, ಅವರು ದೇಶಕ್ಕೆ, ಸೈನಿಕರಿಗೆ ಮೋಸ ಮಾಡಿದ್ದಾರೆ. ಈಗ ರಫೇಲ್ ಹಿಂದೆ ಬಿದ್ದಿದ್ದಾರೆ, ರಫೇಲ್ ಭಾರತಕ್ಕೆ ಬರಬಾರದು ಎಂಬುದು ಅವರ ಆಸೆ, ಆದರೆ ಅದು ಹಾಗಾಗದು ಎಂದರು.

ಹುತಾತ್ಮರನ್ನು ಮರೆತೇ ಬಿಟ್ಟಿತ್ತು ಕಾಂಗ್ರೆಸ್
ಸ್ವಾತಂತ್ರ್ಯ ಬಂದು ಇಷ್ಟುವರ್ಷವಾದರೂ ಹುತಾತ್ಮ ಯೋಧರಿಗೆ ಸರಿಯಾದ ಗೌರವ ಕೊಡಬೇಕು ಎಂದು ಈ ಹಿಂದಿನ ಸರ್ಕಾರಗಳಿಗೆ ಅನ್ನಿಸದಿರುವುದು ದೌರ್ಭಾಗ್ಯ ಆದರೆ ನಾವು 2014 ರಲ್ಲಿ ಹುತಾತ್ಮ ಯೋಧರ ಸ್ಮಾರಕಕ್ಕೆ ಶಂಕುಸ್ಥಾಪನೆ ಮಾಡಿದೆವು ಹಾಗೂ ಅವಧಿಗೆ ಮುನ್ನವೇ ಅದನ್ನು ಪೂರ್ಣಗೊಳಿಸಿದೆವು ಎಂದು ಮೋದಿ ಹೇಳಿದರು.

'ಸೈನಿಕರಿಗೆ ಹಲವು ಸವಲತ್ತು ಕೊಟ್ಟಿದ್ದೇನೆ'
ನಾವು ಅಧಿಕಾರಕ್ಕೆ ಬಂದಮೇಲೆ ಸೈನಿಕರಿಗೆ ಸಂಬಳ ಹೆಚ್ಚು ಮಾಡಿದ್ದೇವೆ, ಹೊಸ ನೀತಿಗಳನ್ನು ತಂದು ಪೆನ್ಶನ್ ಹಣ ಹೆಚ್ಚು ಬರುವಂತೆ ಮಾಡಿದ್ದೇವೆ. ಪ್ರಕೃತಿ ವಿಕೋಪದಲ್ಲಿ ಸೈನಿಕ ನಿಧನ ಹೊಂದಿದರೆ ಅವರ ಕುಟುಂಬಕ್ಕೆ ಪೆನ್ಶನ್ ಬರುವಂತೆ ಮಾಡಿದ್ದೇವೆ. ಮತ್ತು ಸೈನಿಕರ ಬಹು ವರ್ಷಗಳ ಬೇಡಿಕೆಯಾದ ಒನ್ rank ಒನ್ ಪೆನ್ಶನ್ ಅನ್ನು ಜಾರಿಗೊಳಿಸಿ ಈಗಾಗಲೇ ಹಣವನ್ನೂ ಸಹ ಸಂದಾಯ ಮಾಡುತ್ತಿದ್ದೇವೆ ಎಂದರು.

ಲತಾ ಮಂಗೇಶ್ಕರ್ ಹಾಡಿನ ನೆನಪು
ಲತಾ ಮಂಗೇಶ್ಕರ್ ಅವರು ಹಾಡಿದ್ದ 'ಏ ಮೇರೆ ವತನ್ ಕೆ ಸಾಥಿ' ಹಾಡು ನೆನಪು ಮಾಡಿಕೊಂಡ ಮೋದಿ, ಲತಾ ಮಂಗೇಶ್ಕರ್ ಅವರು ದಶಕಗಳ ಹಿಂದೆ ಹಾಡಿನ ಭಾವಕ್ಕೆ ಇಂದು ಮುಕ್ತಿ ಸಿಕ್ಕಿದೆ. ಹಾಡಿನ ಆಶಯ ಇಂದು ಈಡೇರಿದೆ. ಈ ಹಿಂದಿನ ಸರ್ಕಾರಕ್ಕೆ ಸೈನಿಕರನ್ನು ನೆನಪಿಸಿಕೊಳ್ಳುವ ಅವಶ್ಯಕತೆಯ ಬಗ್ಗೆ ಅರಿವೇ ಆಗಿರಲಿಲ್ಲ ಎಂದು ಮೋದಿ ಟೀಕೆ ಮಾಡಿದರು.

ಭಾರತೀಯ ಸೇನೆ ಹಿಂದಿಗಿಂತಲೂ ಶಕ್ತಿಯುತ
ಭಾರತೀಯ ಸೈನ್ಯವು ಹಿಂದೆಂದಿಗಿಂತಲೂ ಶಕ್ತಿಯುತವಾಗಿದೆ. ಹಲವು ದೇಶಗಳು ನಮ್ಮೊಂದಿಗೆ ಜಂಟಿ ರಕ್ಷಣಾ ಕಾರ್ಯದ ತಾಲೀಮು ನಡೆಸಿವೆ, ನಡೆಸುತ್ತಲೂ ಇವೆ. ನಮ್ಮ ಹೊಸ ನೀತಿಗಳು, ಪ್ರಯತ್ನಗಳಿಗೆ ಹೆಗಲಿಗೆ ಹೆಗಲು ಕೊಟ್ಟು ಸಹಾಯ ಮಾಡುತ್ತಿವೆ. ನಮ್ಮೊಂದಿಗೆ ಗುರುತಿಸಿಕೊಳ್ಳಲು ಹಲವು ದೇಶಗಳು ತುದಿಗಾಲ ಮೇಲೆ ನಿಂತಿವೆ ಎಂದು ಮೋದಿ ಸೈನ್ಯವನ್ನು ಹೊಗಳಿದರು.












Click it and Unblock the Notifications