ಬೆಳಿಗ್ಗೆ 9.30ಕ್ಕೆ ಕಚೇರಿಯಲ್ಲಿರಬೇಕು: ಸಚಿವರಿಗೆ ಮೋದಿ ಕಟ್ಟಪ್ಪಣೆ
Recommended Video
ನವದೆಹಲಿ, ಜೂನ್ 13: ನಿಗದಿತ ಸಮಯದೊಳಗೆ ಕಚೇರಿಗೆ ತಲುಪಬೇಕು. ಮನೆಯಲ್ಲಿ ಕುಳಿತು ಕೆಲಸ ಮಾಡುವುದನ್ನು ಬಿಡಬೇಕು- ಇದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟದ ಸಚಿವರಿಗೆ ವಿಧಿಸಿರುವ ನಿಯಮ.
ಕಳೆದ ತಿಂಗಳು ಎರಡನೆಯ ಅವಧಿಗೆ ಅಧಿಕಾರಕ್ಕೆ ಬಂದ ಬಳಿಕ ಬುಧವಾರ ಮೊದಲ ಬಾರಿಗೆ ಮಂತ್ರಿ ಪರಿಷತ್ನ ಸಭೆ ನಡೆಸಿದ ನರೇಂದ್ರ ಮೋದಿ, ಸಚಿವರಿಗೆ ಕೆಲವು ಸೂಚನೆಗಳನ್ನು ನೀಡಿದರು.
ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಾವು ಅಧಿಕಾರಿಗಳು ಬರುವ ವೇಳೆಗೆ ಕಚೇರಿಗೆ ತಲುಪಿ ಆ ದಿನದ ಕೆಲಸಗಳನ್ನು ನಿಗದಿಗೊಳಿಸಲು ನೆರವಾಗುತ್ತಿದ್ದುದ್ದನ್ನು ಉದಾಹರಣೆಯಾಗಿ ನೀಡಿದರು. ಆಗಾಗ್ಗೆ ಪಕ್ಷದ ಸಂಸದರು ಹಾಗೂ ಸಾರ್ವಜನಿಕರನ್ನು ಭೇಟಿ ಮಾಡುತ್ತಿರಬೇಕು. ಹಾಗೂ ತಮ್ಮ ರಾಜ್ಯಕ್ಕೆ ಸಂಬಂಧಿಸಿದ ಸಂಸದರನ್ನು ಭೇಟಿ ಮಾಡಿ ಮಾತುಕತೆ ನಡೆಸುವುದನ್ನು ಆರಂಭಿಸಬೇಕು ಎಂದು ಹೇಳಿದರು.
ತಮ್ಮ ಸಚಿವಾಲಯಕ್ಕೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಇತ್ತೀಚಿನ ಬೆಳವಣಿಗೆಗಳ ಕುರಿತು ನಿರಂತರವಾಗಿ ಕೆಲವು ನಿಮಿಷಗಳ ಕಾಲವಾದರೂ ಚರ್ಚಿಸಲು ಎಲ್ಲ ಸಚಿವರು ಸಮಯ ವಿನಿಯೋಗಿಸಬೇಕು ಎಂದೂ ಸೂಚಿಸಿದರು.

9.30ಕ್ಕೆ ಕಚೇರಿಯಲ್ಲಿರಬೇಕು
ಎಲ್ಲ ಸಚಿವರೂ ಬೆಳಿಗ್ಗೆ 9.30ರ ವೇಳೆಗೆ ಕಚೇರಿ ತಲುಪಲು ಪ್ರಯತ್ನಿಸಬೇಕು. ಮನೆಯಲ್ಲಿ ಕುಳಿತು ಕೆಲಸ ಮಾಡುವ ಪರಿಪಾಠವನ್ನು ಬಿಟ್ಟು ಬೇರೆಯವರಿಗೆ ಮಾದರಿಯಾಗಬೇಕು ಎಂದು ಅವರು ಸೂಚಿಸಿದರು. ಅಲ್ಲದೆ ಸಂಸತ್ ಅಧಿವೇಶನದ ಸಂದರ್ಭದಲ್ಲಿ 40 ದಿನಗಳ ಕಾಲ ಎಲ್ಲಿಯೂ ಹೊರದೇಶದ ಭೇಟಿಯ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳಬಾರದು ಎಂದು ಸಹೋದ್ಯೋಗಿಗಳಿಗೆ ಅವರು ಸಲಹೆ ನೀಡಿದರು.

ಸಂಸದರಿಗೆ ಸಮಯ ಕೊಡಿ
ಹೊಸದಾಗಿ ಸಂಪುಟಕ್ಕೆ ಸೇರಿರುವವರಿಗೆ ಅಧಿಕಾರ ವಹಿಸುವ, ಮಾರ್ಗದರ್ಶನ ನೀಡುವ ಕೆಲಸ ಮಾಡುವಂತೆ ಹಿರಿಯ ಸಚಿವರಿಗೆ ಸೂಚಿಸಿದರು. ಸಚಿವರು ಮತ್ತು ಸಂಸದರ ನಡುವೆ ಅಷ್ಟೇನೂ ವ್ಯತ್ಯಾಸವಿರುವುದಿಲ್ಲ. ಚುನಾಯಿತ ಸಂಸದರನ್ನು ಭೇಟಿ ಮಾಡಲು ಸಚಿವರು ಸಮಯ ಮೀಸಲಿಡಬೇಕು ಎಂದು ನಿರ್ದೇಶಿಸಿದರು.

ಐದು ವರ್ಷದ ಅಜೆಂಡಾ
ಪ್ರತಿಯೊಬ್ಬ ಸಚಿವರೂ ಐದು ವರ್ಷದ ಕಾರ್ಯಸೂಚಿಯೊಂದನ್ನು ಸಿದ್ಧಪಡಿಸಿಕೊಂಡು ಬರಬೇಕು. ಜತೆಗೆ ಪರಿಣಾಮಕಾರಿ ನಿರ್ಧಾರಗಳನ್ನು ರೂಪಿಸಬೇಕು. ಅವುಗಳನ್ನು ಸರ್ಕಾರದ ಮೊದಲ 100 ದಿನಗಳ ಒಳಗೆ ಜಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ರಾಜ್ಯ ಖಾತೆ ಸಚಿವರಿಗೆ ಹೆಚ್ಚು ಹೊಣೆ
ರಾಜ್ಯ ಖಾತೆ ಸಚಿವರಿಗೆ ಮತ್ತಷ್ಟು ಕೆಲಸಗಳನ್ನು ನೀಡುವುದು ಅಗತ್ಯ ಎಂದ ಮೋದಿ, ಸಂಪುಟ ಸಚಿವರು ಪ್ರಮುಖ ಕಡತಗಳನ್ನು ರಾಜ್ಯ ಸಚಿವರೊಂದಿಗೆ ಹಂಚಿಕೊಳ್ಳಬೇಕು. ಇದರಿಂದ ಉತ್ಪಾದಕತೆ ವೃದ್ಧಿಯಾಗುತ್ತದೆ. ಕಡತಗಳನ್ನು ಬೇಗನೆ ವಿಲೇವಾರಿ ಮಾಡುವುದರತ್ತ ಗಮನ ಹರಿಸಬೇಕು. ಸಂಪುಟ ಸಚಿವರು ಮತ್ತು ಅವರ ಕಿರಿಯ ಸಚಿವರು ಪ್ರಸ್ತಾವನೆಗಳನ್ನು ಬೇಗನೆ ವಿಲೇವಾರಿ ಮಾಡಲು ಒಟ್ಟಿಗೆ ಕುಳಿತು ಕೆಲಸ ಮಾಡಬೇಕು ಎಂದು ಆದೇಶಿಸಿದರು.

ಮುಂದಿನ ವಾರದಿಂದ ಕಲಾಪ
ಮುಂದಿನ ವಾರದಿಂದ ಸಂಸದೀಯ ಕಲಾಪಗಳು ಆರಂಭವಾಗಲಿದ್ದು, ಲೋಕಸಭೆಯಲ್ಲಿ ಎದುರಾಗುವ ಸಂಸದೀಯ ಪ್ರಶ್ನೆಗಳನ್ನು ನಿಭಾಯಿಸುವುದರಲ್ಲಿ ಹೆಚ್ಚಿನ ಸಚಿವಾಲಯಗಳಲ್ಲಿ ರಾಜ್ಯ ಖಾತೆ ಸಚಿವರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಸಂಪುಟ ಸಚಿವರು ಸಾಮಾನ್ಯವಾಗಿ ಮೌಖಿಕ ಪ್ರತಿಕ್ರಿಯೆಗಳನ್ನು ನೀಡುವ ಪ್ರಶ್ನೆಗಳನ್ನು ನಿಭಾಯಿಸುತ್ತಾರೆ.












Click it and Unblock the Notifications