ನನ್ನ ಹೆಂಡತಿಯನ್ನು ಹೇಗೆ ಸಾಯಲು ಬಿಡಲಿ; ದೆಹಲಿಯಲ್ಲಿ ಆಸ್ಪತ್ರೆಗಾಗಿ ಪರದಾಟ
ನವದೆಹಲಿ, ಏಪ್ರಿಲ್ 22: ದೆಹಲಿಯಲ್ಲಿ ಕೊರೊನಾ ಪ್ರಕರಣಗಳೊಂದಿಗೆ ವೈದ್ಯಕೀಯ ಆಮ್ಲಜನಕ, ಕೊರೊನಾ ಲಸಿಕೆ ಹಾಗೂ ಆಸ್ಪತ್ರೆಯ ಹಾಸಿಗೆಗಳ ಕೊರತೆಯೂ ಹೆಚ್ಚಾಗಿದೆ. ಈ ಎಲ್ಲಾ ಕೊರತೆಗಳನ್ನು ಶೀಘ್ರವೇ ನೀಗಿಸುವುದಾಗಿ ಸರ್ಕಾರ ಭರವಸೆ ನೀಡಿರುವುದು ಕೊರೊನಾ ರೋಗಿಗಳು ಹಾಗೂ ಅವರ ಸಂಬಂಧಿಗಳಿಗೆ ಸ್ವಲ್ಪ ಸಮಾಧಾನ ತಂದಿದೆ.
ಆದರೆ ಕೆಲವು ಆಸ್ಪತ್ರೆಗಳ ಮುಂದಿನ ದೃಶ್ಯಗಳು ಮಾತ್ರ ಹೃದಯ ಕರಗಿಸುವಂತಿದೆ. ಗುರುವಾರ ದೆಹಲಿಯ ಲೋಕ ನಾಯಕ್ ಜೈಪ್ರಕಾಶ್ ಆಸ್ಪತ್ರೆಯ ಮುಂದೆಯೂ ಇಂಥದ್ದೇ ದೃಶ್ಯಗಳು ಕಂಡುಬಂದಿವೆ. ಆಸ್ಪತ್ರೆ ಮುಂದೆ ಸಾಲು ಸಾಲು ಆಂಬುಲೆನ್ಸ್ಗಳು ಹಾಗೂ ಖಾಸಗಿ ವಾಹನಗಳು ನಿಂತಿದ್ದು, ಹಲವು ರೋಗಿಗಳು ತಮ್ಮ ಸರದಿಗಾಗಿ ಕಾಯುತ್ತಿರುವ ದೃಶ್ಯ ಕಂಡುಬಂದಿತ್ತು.
ಆಸ್ಪತ್ರೆಯ ಎಲ್ಲಾ ಹಾಸಿಗೆಗಳು ಭರ್ತಿಯಾಗಿವೆ ಎನ್ನುತ್ತಿದ್ದಂತೆ ಏನೂ ಮಾಡಲು ತೋಚದೇ ಕೆಲವರು ಅಂಗಲಾಚುತ್ತಿದ್ದ ದೃಶ್ಯವೂ ಮನಕಲಕುವಂತಿತ್ತು. ಅದರಲ್ಲಿ ರೂಬೀ ಖಾನ್ ಎಂಬುವರ ಪತಿ ನನ್ನ ಹೆಂಡತಿಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಿ ಎಂದು ಬೇಡಿಕೊಳ್ಳುತ್ತಿದ್ದ ದೃಶ್ಯ ಅಲ್ಲಿದ್ದವರ ಕಣ್ಣನ್ನು ತೇವಗೊಳಿಸಿತ್ತು.

30 ವರ್ಷದ ರೂಬಿ ಅವರಿಗೆ ಅನಾರೋಗ್ಯವಾಗಿದ್ದು, ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಮೂರು ಆಸ್ಪತ್ರೆಗಳಲ್ಲಿಯೂ ಹಾಸಿಗೆ ಇಲ್ಲ ಎಂದು ನಿರಾಕರಿಸಿದ್ದು, ಕೊನೆಗೆ ಇಲ್ಲಿಗೆ ಬಂದಿದ್ದರು. ಬೈಕ್ ಮೇಲೆಯೇ ಅಸ್ಲಾಂ ಖಾನ್, ರೂಬಿ ಅವರನ್ನು ಕರೆದುಕೊಂಡು ಬಂದಿದ್ದು, "ನನ್ನ ಹೆಂಡತಿ ಸತ್ತುಹೋಗುತ್ತಾಳೆ. ದಯವಿಟ್ಟು ದಾಖಲು ಮಾಡಿಕೊಳ್ಳಿ" ಎಂದು ಬೇಡಿಕೊಂಡಿದ್ದಾರೆ.
ಯಾರ ಕಾಲಿಗೆ ಬೇಕಾದರೂ ಬೀಳುತ್ತೇನೆ. ಎಲ್ಲಾ ಆಸ್ಪತ್ರೆಗಳಲ್ಲಿಯೂ ಹಾಸಿಗೆ ಇಲ್ಲ ಎನ್ನುತ್ತಿದ್ದಾರೆ. ನನ್ನ ಹೆಂಡತಿಯನ್ನು ಹೇಗೆ ಸಾಯಲು ಬಿಡಲಿ ಎಂದು ಅಸ್ಲಾಂ ಖಾನ್ ಕಣ್ಣೀರಾಗಿದ್ದಾರೆ.
ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ದೆಹಲಿಯ ದೊಡ್ಡ ಆಸ್ಪತ್ರೆಗಳಲ್ಲಿ ಎಲ್ಎನ್ಜೆಪಿ ಒಂದಾಗಿದೆ. ಆದರೆ ಅಲ್ಲಿಯೇ ಈ ಪರಿಸ್ಥಿತಿ ಎದುರಾಗಿದೆ.












Click it and Unblock the Notifications