ಸೋನಿಯಾ ಪಕ್ಕದಲ್ಲೇ ಕುಳಿತು ಮೋದಿ ಪ್ರಧಾನಿ ಆಗಲೆಂದ ಮುಲಾಯಂ!
ನವದೆಹಲಿ, ಫೆಬ್ರವರಿ 13 : ಬಿಜೆಪಿ ವಿರೋಧಿ ನಾಯಕರೆಲ್ಲ 'ಮಹಾಘಟಬಂಧನ್' ರಚಿಸಿ, ಬಿಜೆಪಿಯನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸಲು ಸಿದ್ಧತೆ ನಡೆಸಿರುವಾಗ, ಸೋನಿಯಾ ಗಾಂಧಿ ಪಕ್ಕದಲ್ಲೇ ಕುಳಿತುಕೊಂಡಿದ್ದ ಮುಲಾಯಂ ಸಿಂಗ್ ಯಾದವ್, ಇಡೀ ಮಹಾಘಟಬಂಧನ್ ಬೆಚ್ಚಿಬೀಳುವಂತೆ ಬಾಂಬ್ ಎಸೆದಿದ್ದಾರೆ.
ಅದೇನೆಂದರೆ, ಪ್ರಧಾನಿ ನರೇಂದ್ರ ಮೋದಿ ಅವರೇ ಮುಂದಿನ ಬಾರಿಯೂ ಭಾರತದ ಪ್ರಧಾನಿಯಾಗಬೇಕೆಂದು ತಮ್ಮ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್. ಈ ಮಾತನ್ನು ಕೇಳಿ ಸೋನಿಯಾ ಗಾಂಧಿ ಅವರಿಗೆ ಹೇಗಾಗಿರಬೇಡ?
"ನನ್ನ ಮನದ ಆಕಾಂಕ್ಷೆ ಏನೆಂದರೆ, ಪ್ರಧಾನಮಂತ್ರೀಜಿ ನೀವು ಮತ್ತೆ ಭಾರತದ ಪ್ರಧಾನಮಂತ್ರಿ ಆಗಬೇಕು. ನನ್ನ ಅನುಭವವೇನೆಂದರೆ, ನಾನು ಯಾವಾಗಲಾದರೂ ನಿಮ್ಮನ್ನು ಭೇಟಿಯಾದಾಗ, ನೀವು ನನ್ನ ಎಲ್ಲ ಕೆಲಸವನ್ನೂ ಮಾಡಿಕೊಟ್ಟಿದ್ದೀರಿ" ಎಂದು ನುಡಿದಿರುವ ಮುಲಾಯಂ ಸಿಂಗ್ ಯಾದವ್ ಅವರು ಮಹಾಘಟಬಂಧನ್ ನಾಯಕರೆಲ್ಲ ಬೆಚ್ಚಿಬೀಳುವಂತೆ ಮಾಡಿದ್ದಾರೆ. ಈ ಮಾತು ಬಿಜೆಪಿ ನಾಯಕರಿಗೂ ಸೋಗವೆನಿಸಿದರೆ ಅಚ್ಚರಿಯಿಲ್ಲ.

ಮೋದಿಯವರಿಗೆ ಮುಲಾಯಂ ಅಭಿನಂದನೆ
ಲೋಕಸಭೆ ಚುನಾವಣೆಗೂ ಮುನ್ನ ನಡೆದ ಅಂತಿಮ ಅಧಿವೇಶನದ ಅಂತಿಮ ದಿನವಾದ ಇಂದು (ಬುಧವಾರ), ಸಂಸತ್ತಿನಲ್ಲಿ ಸೋನಿಯಾ ಗಾಂಧಿ ಅವರ ಪಕ್ಕವೇ ಕುಳಿತು ಮುಲಾಯಂ ಅವರು, "ನಾನು ಮೋದಿಯವರಿಗೆ ಅಭಿನಂದನೆ ಸಲ್ಲಿಸಲು ಇಚ್ಛಿಸುತ್ತೇನೆ. ಅವರು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಅಭಿವೃದ್ಧಿ ಪಥದತ್ತ ಸಾಗಲು ಯತ್ನಿಸುತ್ತಾರೆ. ಎಲ್ಲ (ಬಿಜೆಪಿ) ಸಂಸದರು ಮತ್ತೆ ಗೆದ್ದು ಬರಲಿ ಮತ್ತು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿ" ಎಂದು ನುಡಿದಿದ್ದಾರೆ.

ಸದನದ ಹೊರಗೆ ಕಾಂಗ್ರೆಸ್ ಪ್ರತಿಭಟನೆ
ಇನ್ನು ನಡೆಯಬೇಕಿರುವುದು ಲೋಕಸಭೆ ಚುನಾವಣೆ ಮಾತ್ರ ಆಗಿರುವುದರಿಂದ, ಕಾಂಗ್ರೆಸ್ ನಾಯಕರೆಲ್ಲ ಒಟ್ಟಿಗೆ ಸೇರಿ ರಫೇಲ್ ಡೀಲ್ ಹಗರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಹೊರಗೆ ಇಂದು ಭಾರೀ ಪ್ರತಿಭಟನೆ ನಡೆಸಿದರು. ಚೌಕಿದಾರ್ ಚೋರ್ ಹೈ, ಚೌಕಿದಾರ್ ಆಡಿಟರ್ ಜನರಲ್ ಮುಂತಾದ ಘೋಷಣೆಗಳನ್ನು ಕೂಗಿದರು. ಅದರಲ್ಲಿ ರಾಹುಲ್ ಗಾಂಧಿ ಜೊತೆ ಸೋನಿಯಾ ಗಾಂಧಿ, ಮನಮೋಹನ ಸಿಂಗ್, ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಕೂಡ ಭಾಗಿಯಾಗಿದ್ದರು. ಹೀಗಿರುವಾಗ ಮುಲಾಯಂ ಸಿಂಗ್ ಯಾದವ್ ಬಿಜೆಪಿ ವಿರೋಧಿಗಳಿಗೆ ಭಾರೀ ಶಾಕ್ ನೀಡಿದ್ದಾರೆ. ಅವರ ಮಾತು ಕೇಳಿ ವಿರೋಧಿ ಪಕ್ಷದವರೇ ಬೆಕ್ಕಸ ಬೆರಗಾಗಿದ್ದಾರೆ.

ಮುಲಾಯಂಗೆ ಕೈಮುಗಿದ ನರೇಂದ್ರ ಮೋದಿ
ಮುಲಾಯಂ ಸಿಂಗ್ ಯಾದವ್ ಅವರು ಪ್ರಧಾನಿ ಮೋದಿಯವರನ್ನು ಹಾಡಿ ಹೊಗಳುತ್ತಿದ್ದರೆ, ವಿರೋಧಿ ಪಾಳಯದಲ್ಲಿ ಗದ್ದಲ ಕೇಳಿಬರುತ್ತಿತ್ತು ಮತ್ತು ಬಿಜೆಪಿ ಸಂಸದರೆಲ್ಲ ಮೇಜು ತಟ್ಟಿ ಶ್ಲಾಘನೆ ವ್ಯಕ್ತಪಡಿಸಿದರು. ಪ್ರಧಾನಿ ಮೋದಿಯವರು ಮಂದಸ್ಮಿತರಾಗಿ ಕೈಮುಗಿದು ಮುಲಾಯಂ ಸಿಂಗ್ ಯಾದವ್ ಅವರಿಗೆ ಧನ್ಯವಾದ ಅರ್ಪಿಸಿದರು.

ಸೋನಿಯಾ ಮುಖದಲ್ಲಿ ಹುಸಿನಗು
ಭಾರತೀಯ ಜನತಾ ಪಕ್ಷವನ್ನು ಕೆಳಗಿಳಿಸಿ ಮತ್ತೆ ಕಾಂಗ್ರೆಸ್ ಆಡಳಿತ ಸ್ಥಾಪಿಸಬೇಕೆಂದು ಹೋರಾಟ ನಡೆಸುತ್ತಿರುವ ಸೋನಿಯಾ ಗಾಂಧಿ ಮುಖದಲ್ಲಿ, ಮುಲಾಯಂ ಅವರ ಈ ಮಾತು ಕೇಳಿ ಹುಸಿನಗೆ ಮೂಡಿತ್ತು. ಮುಲಾಯಂ ಸಿಂಗ್ ಯಾದವ್ ಅವರ ಮಗ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕೂಡ ಮಹಾಘಟಬಂಧನ್ ನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಲೆಂದು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಅಪ್ಪನ ಮಾತು ಕೇಳಿ ಮಗನಿಗೆ ಹೇಗಾಗಿರಬೇಡ?

ಮುಲಾಯಂ ಮಾತಿಗೆ ರಾಹುಲ್ ಅಸಮ್ಮತಿ
ಈ ನಡುವೆ, ದೆಹಲಿಯಲ್ಲಿ ಮತ್ತೆ ಪತ್ರಿಕಾಗೋಷ್ಠಿ ನಡೆಸುತ್ತಿರುವ ರಾಹುಲ್ ಗಾಂಧಿ ಅವರು, ಮುಲಾಯಂ ಸಿಂಗ್ ಯಾದವ್ ಅವರ ಮಾತಿಗೆ ಅಸಮಾಧಾನ ಮತ್ತು ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿಯಾಗಲಿ ಎಂದು ಮುಲಾಯಂ ಅಂದಿದ್ದಕ್ಕೆ, "ನಾನು ಅವರ ಮಾತಿಗೆ ಸಹಮತ ವ್ಯಕ್ತಪಡಿಸುವುದಿಲ್ಲ. ಮುಲಾಯಂ ಸಿಂಗ್ ಯಾದವ್ ಜಿ ಅವರು ರಾಜಕೀಯದಲ್ಲಿ ಇನ್ನೂ ದೊಡ್ಡ ಪಾತ್ರ ವಹಿಸಬೇಕಾಗಿದೆ. ನಾನು ಅವರ ಅಭಿಪ್ರಾಯಕ್ಕೆ ಗೌರವ ಸೂಚಿಸುತ್ತೇನೆ" ಎಂದು ಡಿಪ್ಲೋಮ್ಯಾಟಿಕ್ ಆಗಿ ಪ್ರತಿಕ್ರಿಯಿಸಿದ್ದಾರೆ. ಸಮಾಜವಾದಿ ಪಕ್ಷ ಕಾಂಗ್ರೆಸ್ ಪಕ್ಷವನ್ನು ಉತ್ತರ ಪ್ರದೇಶದಲ್ಲಿ ಸಂಪೂರ್ಣ ಕಡೆಗಣಿಸಿದ್ದರೂ, ಮುಲಾಯಂ ಅವರ ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರೆ ಏನಾಗುತ್ತದೆಂದು ಅವರು ಚೆನ್ನಾಗಿ ಬಲ್ಲರು.












Click it and Unblock the Notifications