ಮೋದಿ ಸಂಪುಟದಲ್ಲಿ ಕಾನೂನು ಪಂಡಿತರದ್ದೇ ಕಾರುಬಾರು
ನವದೆಹಲಿ, ಜೂನ್ 10: ಪ್ರಧಾನಿ ಮೋದಿ ಸಂಪುಟದಲ್ಲಿ ಕಾನೂನು ಪಂಡಿತರದ್ದೇ ಕಾರುಬಾರು. ಅಂದರೆ ಮೋದಿ ಸಂಪುಟದ ಸಚಿವರಲ್ಲಿ ಮುಕ್ಕಾಲು ಪಾಲು ಕಾನೂನು ಪದವೀಧರರೇ ಆಗಿದ್ದಾರೆ. ಇಬ್ಬರು ವೈದ್ಯರು ಹಾಗೂ ಇತರೆ ವಿಷಯಗಳಲ್ಲೂ ಪದವಿ ಪಡೆದ 9 ಜನ ಇದ್ದಾರೆ.
ಸಂಪುಟದ 44 ಸಚಿವರ ಪೈಕಿ ಪ್ರಧಾನಿ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್ ಸ್ನಾತಕೋತ್ತರ ಪದವೀಧರರು. ಸಚಿವರಾದ ಸಂಜೀವ್ ಕುಮಾರ್ ಬಲ್ಯಾನ್, ಮನಸುಖ್ ಭಾಯಿ ಏಸಾವ ಅವರುಗಳೂ ಸೋಷಿಯಲ್ ವರ್ಕ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಆರೋಗ್ಯ ಸಚಿವ ಹರ್ಷವರ್ಧನ್ ಹಾಗೂ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಇಬ್ಬರೂ ವೈದ್ಯರು. ನಜ್ಮಾ ಹೆಫ್ತುಲ್ಲಾ ಸ್ನಾತಕೋತ್ತರ ಪದವೀಧರೆ ಮತ್ತು ಡಾಕ್ಟರೇಟ್ ಇನ್ ಫಿಲಾಸಫಿ, ಕಲ್ ರಾಜ್ ಮಿಶ್ರ ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರ. ನಿರ್ಮಲ ಸೀತಾರಾಮನ್, ಧರ್ಮೆಂದ್ರ ಪ್ರಸಾದ್, ಉಪೇಂದ್ರ ಖುಶ್ವಾಹ್ ಎಂಎ ಪದವಿ ಪಡೆದವರು.

ನರೇಂದ್ರ ಸಿಂಗ್ ತೋಮರ್, ರಾಧಾ ಮೋಹನ್ ಸಿಂಗ್, ತಾವರಚಂದ್ ಗೆಹ್ಲೋಟ್, ಶ್ರೀಪಾದ್ ಯಸ್ಸೋ ನಾಯಕ್, ಪ್ರಕಾಶ್ ಜಾವ್ಡೇಕರ್, ಮನೋಜ್ ಸಿನ್ಹಾ, ನಿಹಾಲ್ ಚಂದ್, ರಾವ್ ಸಾಹೇಬ್ ದಾದಾರಾವ್ ದಾನ್ವೆ, ಸುದರ್ಶನ್ ಭಗತ್ ಪದವೀಧರರು.
ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ, ಎಂ ವೆಂಕಯ್ಯನಾಯ್ಡು, ಡಿವಿ ಸದಾನಂದಗೌಡ ಹಾಗೂ ರಾಮ್ ವಿಲಾಸ್ ಪಾಸ್ವಾನ್ ಸೇರಿದಂತೆ 15 ಮಂದಿ ಕಾನೂನು ಪದವೀಧರರು. ಹಾಗೆಯೇ ರಸಗೊಬ್ಬರ ಸಚಿವ ಅನಂತಕುಮಾರ್ ಮತ್ತು ರವಿಶಂಕರ ಪ್ರಸಾದ್ ಕೂಡ ಕಾನೂನು ಪದವಿ ಪಡೆದಿದ್ದಾರೆ.
ರಾಜ್ಯ ಸಚಿವರಾದ ಸಂತೋಷ್ ಕೆ ಗಂಗ್ವಾರ್, ಸರ್ಬಾನಂದ ಸೋನೋವಾಲ್, ಪಿಯೂಷ್ ಗೋಯಲ್ ಮತ್ತು ರಾವ್ ಇಂದ್ರಜಿತ್ ಸಿಂಗ್ ಕೂಡ ಕಾನೂನು ಪದವೀಧರರೇ. ಪಿ ಕಿರಣ್ ರಜಿಜು, ಕೃಷ್ಣನ್ ಪಾಲ್ ಸಹ ಕಾನೂನು ವ್ಯಾಸಂಗ ಮಾಡಿದವರೇ ಆಗಿದ್ದಾರೆ.
ಹರ್ ಸಿಮ್ರಾತ್ ಕೌರ್ ಬಾದಲ್ ಮತ್ತು ಜುವಾಲ್ ಓರಮ್ ಡಿಪ್ಲೊಮೊ ಪದವೀಧರರು. ಮೋದಿ ಸಂಪುಟದ ಆರು ಮಂದಿ ಸಚಿವರ ವಿದ್ಯಾರ್ಹತೆ 6ನೇ ತರಗತಿಯಿಂದ 12ನೇ ತರಗತಿವರೆಗೆ. ಅವರೆಂದರೆ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಜುಬಿನ್ ಇರಾನಿ, ಜಲಸಂಪನ್ಮೂಲ ಸಚಿವೆ ಉಮಾ ಭಾರತಿ, ಮನೇಕಾ ಗಾಂಧಿ, ಅಶೋಕ್ ಗಜಪತಿ ರಾಜು, ಅನಂತ್ ಗೀತೆ, ವಿಷ್ಣುದೇವ್ ಸಾಯಿ ಹಾಗೂ ನಾಗರಿಕ ವಿಮಾನಯಾನ ಸಾರಿಗೆ ರಾಜ್ಯ ಸಚಿವ ಜಿಎಂ ಸಿದ್ದೇಶ್ವರ್ 10ನೇ ತರಗತಿ.












Click it and Unblock the Notifications