ಮೋದಿ ಸಮರ್ಥ ನಾಯಕರಲ್ಲ : ಚಿದಂಬರಂ
ನವದೆಹಲಿ, ಅ.8 : ಪಂಚರಾಜ್ಯಗಳ ಚುನಾವಣಾ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ಆರಂಭಿಸಿದೆ. ಮೋದಿ, ಅಡ್ವಾಣಿ ಮತ್ತು ವಾಜಪೇಯಿ ಅವರಂತೆ ಸಮರ್ಥ ನಾಯಕರಲ್ಲ ಎಂದು ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ರಾಯಿಟರ್ಸ್ ನಡೆಸಿದ ಸಂದರ್ಶನದಲ್ಲಿ ನರೇಂದ್ರ ಮೋದಿ ನಡೆಸುತ್ತಿರುವ ಸಮಾವೇಶಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಪಿ.ಚಿದಂಬರಂ, ವಾಜಪೇಯಿಗೆ ಜನಮನ್ನಣೆ ಸಿಕ್ಕಿತ್ತು. ಅಡ್ವಾಣಿ, ವಾಜಪೇಯಿಯಂತೆ ಮೋದಿ ಸಮರ್ಥ ನಾಯಕರು ಎಂದು ಅನ್ನಿಸುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

2004ರ ಚುನಾವಣೆಯಲ್ಲಿ ದೇಶದ ಜನ ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡಲಿಲ್ಲ. ಸಮರ್ಥ ನಾಯಕ ವಾಜಪೇಯಿ ಅವರಿಗೆ ಅಧಿಕಾರ ಕೊಟ್ಟರು. ಆದರೆ, ನರೇಂದ್ರ ಮೋದಿ, ಸಮರ್ಥ ನಾಯಕರಲ್ಲ ಎಂದು ಚಿದಂಬರಂ ಹೇಳಿದ್ದಾರೆ.
ಬಿಜೆಪಿಯೂ ಭ್ರಷ್ಟಾಚಾರ ಮಾಡಿದೆ : ಕಾಂಗ್ರೆಸ್ ಭ್ರಷ್ಟಾಚಾರ ಮಾಡಿದೆ ಎಂದು ಬಿಜೆಪಿ ಪಕ್ಷದವರು ದೂರುತ್ತಾರೆ. ಆದರೆ, ಬಿಜೆಪಿ ಆಡಳಿತವಿದ್ದ ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್ ಗಢ, ಗುಜರಾತ್ ನಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಚಿದಂಬರಂ ಹೇಳಿದ್ದಾರೆ.
ಭ್ರಷ್ಟಾಚಾರದ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಮುಖಾ-ಮುಖಿ ಮಾತುಕತೆ ನಡೆಸಿಲ್ಲ. ರಾಜ್ಯಗಳಲ್ಲಿ ಮಾತ್ರ ಈ ಕುರಿತು ವಾದ-ವಿವಾದ ನಡೆಯುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿಯೂ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಚಿದಂಬರಂ ವಾಗ್ದಾಳಿ ನಡೆಸಿದರು.
ನಗರಗಳಲ್ಲಿ ಜನರು ನರೇಂದ್ರ ಮೋದಿಯನ್ನು ಬೆಂಬಸುತ್ತಿದ್ದಾರೆ. ಮಾಧ್ಯಮಗಳು ಮೋದಿಯನ್ನು ಹೆಚ್ಚಾಗಿ ಬಿಂಬಿಸುತ್ತಿರುವುದೇ ಅದಕ್ಕೆ ಕಾರಣ ಎಂದು ಹೇಳಿದರು. ಮೋದಿ ಮೋಡಿ ಸಂಪೂರ್ಣ ದೇಶದ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಚಿದಂಬರಂ ಹೇಳಿದರು.












Click it and Unblock the Notifications