ಏನೂ 'ಮಾಡಲಿಲ್ಲ'ವೆಂದರೆ ಎಂಜೆ ಅಕ್ಬರ್ ಏನೂ ಮಾಡಲಿಲ್ಲವೆ?
ನವದೆಹಲಿ, ಅಕ್ಟೋಬರ್ 16 : "ಅವರು ನನ್ನನ್ನು ಏನೂ 'ಮಾಡಲಿಲ್ಲ'!" ಇದೇ ಹೇಳಿಕೆಯನ್ನು ತಮ್ಮ ಗುರಾಣಿಯನ್ನಾಗಿ ಇಟ್ಟುಕೊಂಡು, ಏಷ್ಯನ್ ಏಜ್ ಪತ್ರಿಕೆಯ ಮಾಜಿ ಸಂಪಾದಕ, ಹಾಲಿ ಕೇಂದ್ರ ಸಚಿವ ಮೊಬಶಾರ್ ಜಾವೇದ್ ಅಕ್ಬರ್ (ಎಂಜೆ ಅಕ್ಬರ್) ಅವರು ಕಾನೂನು ಯುದ್ಧಕ್ಕಿಳಿದಿದ್ದಾರೆ.
ವಿದೇಶಾಂಗ ಖಾತೆ ರಾಜ್ಯ ಸಚಿವರಾಗಿರುವ ಪ್ರಭಾವಶಾಲಿ ವ್ಯಕ್ತಿ ಎಂಜೆ ಅಕ್ಬರ್ ಅವರು ಯುದ್ಧಕ್ಕಿಳಿದಿರುವುದು, ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿರುವ ಪತ್ರಕರ್ತೆ ಪ್ರಿಯಾ ರಮಣಿ ಅವರ ವಿರುದ್ಧ. ಅಕ್ಬರ್ ಪರ ಹೋರಾಟಕ್ಕೆ 97 ಘಟಾನುಘಟಿ ವಕೀಲರು ಇಳಿದಿದ್ದರೆ, ಪ್ರಿಯಾ ಪರ ಇರುವುದು ಒಬ್ಬರೇ! ಗೆಲ್ಲುವುದು ಯಾರು?
ಪ್ರಿಯಾ ರಮಣಿ ಅವರು ಅಕ್ಟೋಬರ್ 8ರಂದು ಮಾಡಿದ ಒಂದು ಟ್ವೀಟ್, ಪ್ರಿಯಾ ಅವರಿಗೆ ಕತ್ತಿಯಾಗುವುದೋ, ಅಕ್ಬರ್ ಅವರಿಗೆ ಗುರಾಣಿಯಾಗುವುದೋ ಕಾದು ನೋಡಬೇಕಾಗಿದೆ. ಆ ಟ್ವೀಟ್ ನಲ್ಲಿ ಪ್ರಿಯಾ ಅವರು, ಅಕ್ಬರ್ ಅವರು ನನ್ನನ್ನೇನೂ ಮಾಡಲಿಲ್ಲ, ಆದರೆ ಇತರ ಹಲವಾರು ಮಹಿಳೆಯರು ಅಕ್ಬರ್ ಬಳಿ ಅನುಭವಿಸಿದ್ದಾರೆ ಎಂದು ಬರೆದಿದ್ದಾರೆ.
'ಮಾಡಲಿಲ್ಲ' ಎನ್ನುವ ಸಂಗತಿಯೇ ಈಗ ಚರ್ಚೆಗೆ ಗ್ರಾಸವಾಗಿದೆ. ಪ್ರಿಯಾ ರಮಣಿ ಅವರ ವಿರುದ್ಧ ಹೂಡಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಅಕ್ಬರ್ ಅವರು, ಇದನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಏನೂ ಮಾಡಲಿಲ್ಲ ಅಂತ ಅವರೇ ಬರೆದುಕೊಂಡ ಮೇಲೆ ನನ್ನ ಮೇಲೆ ಲೈಂಗಿಕ ಅತ್ಯಾಚಾರದ ಆರೋಪ ಹೊರಿಸಲು ಹೇಗೆ ಸಾಧ್ಯ? ಎಂಬುದು ಅಕ್ಬರ್ ಅವರ ವಾದ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354ಎ ಏನು ಹೇಳತ್ತೆ, ಲೈಂಗಿಕ ದೌರ್ಜನ್ಯವನ್ನು ಹೇಗೆ ವಿವರಿಸತ್ತೆ ಎಂಬುದನ್ನು ನೋಡೋಣ.

ಐಪಿಸಿ ಪ್ರಕಾರ ಲೈಂಗಿಕ ದೌರ್ಜನ್ಯದ ವಿವರಣೆ
ಯಾವುದೇ ವ್ಯಕ್ತಿ ಕೆಳಗೆ ನಮೂದಿಸಿದ ಕ್ರಿಯೆಯನ್ನು ಮಾಡಿದರೆ ಅದು ಲೈಂಗಿಕ ದೌರ್ಜನ್ಯವಾಗುತ್ತದೆ.
1) ದೈಹಿಕ ಸಂಪರ್ಕ ಮತ್ತು ಮತ್ತೊಬ್ಬ ವ್ಯಕ್ತಿಗೆ ಅಪ್ರಿಯವಾದ ಲೈಂಗಿಕ ಸಂಜ್ಞೆಗಳು. ಅಥವಾ
2) ಲೈಂಗಿಕ ಕ್ರಿಯೆಗೆ ಬೇಡಿಕೆ ಅಥವಾ ಕೋರಿಕೆ. ಅಥವಾ
3) ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಕಾಮನೆ ಉತ್ತೇಜಿಸುವಂಥ ಚಿತ್ರ ತೋರಿಸುವುದು. ಅಥವಾ
4) ಲೈಂಗಿಕವಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸುವುದು.
ಇದರಲ್ಲಿ ಅಕ್ಬರ್ ಅವರು ಪ್ರಿಯಾ ರಮಣಿ ಅವರನ್ನು ಸಂದರ್ಶನಕ್ಕೆಂದು ಐಷಾರಾಮಿ ಹೋಟೆಲಿಗೆ ಕರೆದಾಗ ಯಾವುದನ್ನು ಮಾಡಿದ್ದರು ಎಂಬುದು ಚರ್ಚಾಸ್ಪದ ಸಂಗತಿ.

ಸಂದರ್ಶನದಲ್ಲಿ ಅಂದು ನಡೆದದ್ದೇನು?
ಸುಮಾರು 20 ವರ್ಷಗಳ ಹಿಂದೆ ಪ್ರಿಯಾ ರಮಣಿ ಅವರು ಏಷ್ಯನ್ ಏಜ್ ಪತ್ರಿಕೆ ಸೇರಲೆಂದು ಸಂದರ್ಶನಕ್ಕೆ ಹೋಗಿದ್ದಾಗ, ಸಂದರ್ಶನವನ್ನು ಹೋಟೆಲಿನ ಲಾಂಜ್ ನ ಬದಲು ತಮ್ಮ ರೂಮ್ ನಲ್ಲಿ ಅಕ್ಬರ್ ಏರ್ಪಡಿಸಿದ್ದರು. ಆಗ, ಪ್ರಿಯಾ ಅವರಿಗೆ ಯಾವ ಹಾಡು ಇಷ್ಟ, ಇತ್ಯಾದಿ ಕೇಳಿದ ಬಳಿಕ, ಪ್ರಿಯಾ ಅವರಿಗೆ ಮದ್ಯವನ್ನು ಸೇವಿಸಲು ಅಕ್ಬರ್ ಆಗ್ರಹಿಸಿದ್ದರು. ಇದನ್ನು ನಿರಾಕರಿಸಿದ ನಂತರ. ರೋಮ್ಯಾಂಟಿಕ್ ಆಗಿ ಹಾಡುತ್ತ, ತಾವು ಕುಳಿತಿದ್ದ ಮಂಚದ ಮೇಲೆ ತಮ್ಮ ಪಕ್ಕ ಬಂದು ಕುಳಿತುಕೊಳ್ಳಬೇಕೆಂದು ಅಕ್ಬರ್ ಆಗ್ರಹಿಸಿದ್ದರು ಎಂದು ಪ್ರಿಯಾ ರಮಣಿ ಅವರು ಆರೋಪಿಸಿದ್ದಾರೆ. ಇದೆಂಥ ಸಂದರ್ಶನ, ನನಗಾಗ ಆ ವ್ಯಕ್ತಿಯನ್ನು ನೋಡಿ ಅಸಹ್ಯ ಬಂದಿತ್ತು, ಸಂದರ್ಶನಕ್ಕೆ ಬಂದವರನ್ನು ಮಂಚಕ್ಕೆ ಕರೆಯುತ್ತಾರೆಯೆ? ಎಂದು ಅವರು ವೆಬ್ ಸೈಟೊಂದರಲ್ಲಿ ಬರೆದುಕೊಂಡಿದ್ದಾರೆ. ಇದು ಮೇಲಿನ ಯಾವ ಕೆಟಗರಿಯಲ್ಲಿ ಬರುತ್ತದೆ?

ದೈಹಿಕ ಸಂಪರ್ಕವೇ ಆಗಬೇಕಿಲ್ಲ : ಸುಪ್ರೀಂ
ಇನ್ನು ಚುರುಮುರಿ ಒಂದು ಆಸಕ್ತಿದಾಯಕವಾದ ಹಳೆಯ ಕೇಸ್ ಮೇಲೆ ಬೆಳಕು ಚೆಲ್ಲಿದೆ. ಅದು 1999ರಲ್ಲಿ ಸರ್ವೋಚ್ಚ ನ್ಯಾಯಾಲಯ, ವಿಶಾಖಾ ಮತ್ತು ಇತರರು ವರ್ಸಸ್ ರಾಜಸ್ತಾನ ರಾಜ್ಯ ಪ್ರಕರಣದಲ್ಲಿ ನೀಡಿದಂಥ ಐತಿಹಾಸಿಕ ತೀರ್ಪು. ಅದು, ಲೈಂಗಿಕ ದೌರ್ಜನ್ಯವನ್ನು ವ್ಯಾಖ್ಯಾನಿಸುವ ವಿಶಾಖಾ ಮಾರ್ಗದರ್ಶಿ ಎಂದೇ ಖ್ಯಾತಿ ಗಳಿಸಿದೆ. ಅದರಲ್ಲಿ, ಲೈಂಗಿಕ ದೌರ್ಜನ್ಯ ಅಂದರೆ ದೈಹಿಕ ಸಂಪರ್ಕವೇ ಆಗಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಅಕ್ಬರ್ ಕೇಸ್ ನಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಪರಿಗಣಿಸಲಾಗುವುದಾ? ಆದರೆ, ಪ್ರಿಯಾ ರಮಣಿ ಅವರ ಬಳಿ ತಮ್ಮ ಆರೋಪವನ್ನು ಸಾಬೀತುಪಡಿಸಲು ಸಾಕ್ಷ್ಯವೇನಿದೆ?

ಆರೋಪ ಸಾಬೀತಾದರೆ ಅಕ್ಬರ್ ಗೆ ವರ್ಷ ಜೈಲು
ಲೈಂಗಿಕ ದೌರ್ಜನ್ಯದ ವಿವರಣೆಯ ನಾಲ್ಕನೇ ಸಂಗತಿ ಅಕ್ಬರ್ ಕೇಸಿನಲ್ಲಿ ಅನ್ವಯವಾಗುವುದಾದರೆ ಮತ್ತು ಆರೋಪ ಸಾಬೀತಾದರೆ ಅಕ್ಬರ್ ಅವರು ಒಂದು ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನು ಅನುಭವಿಸಬೇಕಾಗುತ್ತದೆ. ಇಲ್ಲದಿದ್ದರೆ ಪ್ರಿಯಾ ರಮಣಿ ಅವರು ಕೋರ್ಟ್ ಆದೇಶದಂತೆ ಶಿಕ್ಷೆಗೆ ಅರ್ಹರಾಗುತ್ತಾರೆ? ನ್ಯಾಯ ದೇವತೆ ಯಾರಿಗೆ ಒಲಿಯುವಳು? 30ಕ್ಕಿಂತ ಹೆಚ್ಚು ಮಹಿಳೆಯರೂ ಸೇರಿದಂತೆ 97 ವಕೀಲರ ದಂಡಿನ ಸಮೇತ ದಾಳಿಗೆ ಸಜ್ಜಾಗಿರುವ ಎಂಜೆ ಅಕ್ಬರ್ ಅವರೋ? ಅಥವಾ ಸತ್ಯ ನನ್ನ ಪರವಿದೆ, ನಾನು ಸತ್ಯ ಹೇಳಲು ಹೆದರುವುದಿಲ್ಲ ಎಂದು ಏಕಾಂಗಿಯಾಗಿ ಬಲಿಷ್ಠ ವ್ಯವಸ್ಥೆಯ ವಿರುದ್ಧ ಹೋರಾಟಕ್ಕಿಳಿದಿರುವ ಪ್ರಿಯಾ ರಮಣಿಗೆ ನ್ಯಾಯ ದೊರಕುತ್ತದೋ? ನಿಮ್ಮ ಅಭಿಪ್ರಾಯ ತಿಳಿಸಿ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications