'ತೈಲ ಬೆಲೆ ಬಗ್ಗೆ ಚಿಂತೆಯಿಲ್ಲ, ಏಕೆಂದರೆ ನಾನು ಸಚಿವ, ಪೆಟ್ರೋಲ್ ಉಚಿತ'
ನವದೆಹಲಿ, ಸೆಪ್ಟೆಂಬರ್ 17: ತೈಲ ಬೆಲೆ ಏರಿಕೆಯಿಂದ ತಮಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂಬ ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ರಾಮದಾಸ್ ಅಠವಲೆ ಅವರ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ.
'ನಾನು ಸಚಿವನಾಗಿರುವುದರಿಂದ ಪೆಟ್ರೋಲ್ ಬೆಲೆ ಏರಿಕೆಯಿಂದ ನನಗೆ ಯಾವುದೇ ಸಮಸ್ಯೆ ಇಲ್ಲ. ಏಕೆಂದರೆ ನನಗೆ ತೈಲ ಉಚಿತವಾಗಿ ಸಿಗುತ್ತದೆ. ನಾನು ಸಚಿವನಾಗಿರದೇ ಇದ್ದರೆ ತೈಲ ಬೆಲೆ ಹೆಚ್ಚಳದ ಸಂಕಷ್ಟ ನನಗೂ ಎದುರಾಗುತ್ತಿತ್ತು' ಎಂದು ಅಠವಲೆ ಹೇಳಿದ್ದಾರೆ.
ತೈಲ ಬೆಲೆ ಏರಿಕೆಯಿಂದ ಜನರು ತೀವ್ರ ತೊಂದರೆಗೆ ಸಿಲುಕಿದ್ದಾರೆ ಎನ್ನುವುದು ಅರ್ಥವಾಗುವಂಥದ್ದು. ಅದನ್ನು ಕಡಿಮೆ ಮಾಡುವುದು ಸರ್ಕಾರದ ಕರ್ತವ್ಯ ಎಂದೂ ತಿಳಿಸಿದ್ದಾರೆ.

ತಮ್ಮ ಈ ಹೇಳಿಕೆಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಅಠವಳೆ ಕ್ಷಮೆ ಯಾಚಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗುತ್ತಿವೆ. ಇದರಿಮದ ನಿಮಗೆ ಯಾವುದಾದರೂ ಸಮಸ್ಯೆಯಾಗುತ್ತಿದೆಯೇ ಎಂದು ಪತ್ರಕರ್ತರು ಕೇಳಿದರು. ಅದಕ್ಕೆ ನನಗೆ ಯಾವುದೇ ಸಮಸ್ಯೆ ಇಲ್ಲ ಎಂದೆ.
ನಾನು ಒಬ್ಬ ಸಚಿವ. ನಮಗೆ ಸರ್ಕಾರಿ ವಾಹನ ನೀಡಲಾಗುತ್ತದೆ. ಆದರೆ, ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬೆಲೆಯನ್ನು ಕಡಿಮೆ ಮಾಡಲೇಬೇಕು. ನಾನು ಯಾರಿಗೂ ಅವಮಾನ ಮಾಡಲು ಈ ರೀತಿ ಹೇಳಿಲ್ಲ.
ನನ್ನ ಮಾತು ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದರೆ, ನಾನು ಕ್ಷಮೆ ಕೋರುತ್ತೇನೆ. ನನಗೆ ಈ ರೀತಿ ಹೇಳುವ ಯಾವ ಉದ್ದೇಶವೂ ಇರಲಿಲ್ಲ. ಸಾಮಾನ್ಯ ಮನುಷ್ಯನಾಗಿದ್ದ ನಾನು ಸಚಿವನಾಗಿದ್ದೇನೆ, ಜನರು ಎದುರಿಸುವ ಸಮಸ್ಯೆಗಳ ಅರಿವಿದೆ. ನಾನು ಸರ್ಕಾರದ ಭಾಗವಾಗಿದ್ದೇನೆ ಮತ್ತು ಪೆಟ್ರೋಲ್-ಡೀಸೆಲ್ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಅಠವಳೆ ಹೇಳಿದ್ದಾರೆ.












Click it and Unblock the Notifications