ಡಿ.ಕೆ.ಶಿವಕುಮಾರ್ ಭೇಟಿ ದೆಹಲಿಗೆ ತೆರಳಿದ ನಾಯಕರು
ನವದೆಹಲಿ, ಅಕ್ಟೋಬರ್ 15: ಡಿ.ಕೆ.ಶಿವಕುಮಾರ್ ಅವರ ನ್ಯಾಯಾಂಗ ಬಂಧನ ಅವಧಿ ಇಂದು ಮುಕ್ತಾಯವಾದ ಹಿನ್ನೆಲೆ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತಿದ್ದು, ಅವರನ್ನು ಭೇಟಿಯಾಗಲು ರಾಜ್ಯದ ಹಲವು ನಾಯಕರು ದೆಹಲಿಗೆ ತೆರಳಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್, ಕಂಪ್ಲಿ ಗಣೇಶ್ ಸೇರಿದಂತೆ ಹಲವು ರಾಜಕೀಯ ನಾಯಕರು ದೆಹಲಿಗೆ ಆಗಮಿಸಿದ್ದು, ಇಲ್ಲಿ ಇಂದು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಆಗಲಿದ್ದಾರೆ.
ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆಯೂ ಇದ್ದು, ಇಂದು ಜಾಮೀನು ಮಂಜೂರಾಗುವ ಸಾಧ್ಯತೆ ಇರುವ ಕಾರಣ ನಿರೀಕ್ಷೆ ಇಟ್ಟುಕೊಂಡು ಈ ನಾಯಕರು ದೆಹಲಿಗೆ ಬಂದಿದ್ದಾರೆ.

ಡಿ.ಕೆ.ಸುರೇಶ್ ಹಲವು ದಿನದಿಂದ ದೆಹಲಿಯಲ್ಲಿಯೇ ಇದ್ದಾರೆ. ರಾಮನಗರ, ಕನಕಪುರ ಸೇರಿದಂತೆ ರಾಜ್ಯದ ಹಲವೆಡೆಯಿಂದ ಡಿ.ಕೆ.ಶಿವಕುಮಾರ್ ಅಭಿಮಾನಿಗಳು ದೆಹಲಿಗೆ ಆಗಮಿಸಿದ್ದಾರೆ.
ಜಾಮೀನು ಅರ್ಜಿಯ ವಿಚಾರಣೆಯು ನಿನ್ನೆ ನಡೆದು ಇಂದಿಗೆ ವಿಚಾರಣೆ ಮುಂದೂಡಲಾಯಿತು. ಇಂದು ಮಧ್ಯಾಹ್ನದ ನಂತರ ವಿಚಾರಣೆ ನಡೆಯಲಿದ್ದು ಜಾಮೀನು ದೊರೆಯುವ ಸಂಭವ ಅತ್ಯಲ್ಪ ಎನ್ನಲಾಗುತ್ತಿದೆ.
ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ಆಗಸ್ಟ್ 3 ರಂದು ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಅಂದಿನಿಂದಲೂ ಡಿ.ಕೆ.ಶಿವಕುಮಾರ್ ಬಂಧನದಲ್ಲಿಯೇ ಇದ್ದಾರೆ.
ಇತ್ತೀಚಿನ ಬೆಳವಣಿಗೆಯಂತೆ ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ಮತ್ತು ಪತ್ನಿಗೆ ಅಕ್ಟೋಬರ್ 15 ರಂದು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದರು. ಆದರೆ ಇಂದು ಇವರಿಬ್ಬರೂ ವಿಚಾರಣೆಗೆ ಹಾಜರಾದಂತಿಲ್ಲ.












Click it and Unblock the Notifications