ಉತ್ತರಪ್ರದೇಶದಲ್ಲಿ ಮೇನಕಾ ಹಾಗೂ ವರುಣ್ ಕ್ಷೇತ್ರಗಳು ಅದಲು ಬದಲು
ನವದೆಹಲಿ, ಮಾರ್ಚ್ 26: ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಿಂದ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಅವರನ್ನು ಮಂಗಳವಾರ ಕೈ ಬಿಡಲಾಗಿದೆ. ಕೇಂದ್ರ ಸಚಿವೆ ಮೇನಕಾ ಗಾಂಧಿ ಹಾಗೂ ಅವರ ಮಗ ವರುಣ್ ಗಾಂಧಿ ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳು ಅದಲು ಬದಲು ಮಾಡಲಾಗಿದ್ದು, ಉತ್ತರಪ್ರದೇಶದಿಂದ ಇನ್ನೂ ಇಪ್ಪತ್ತೊಂಬತ್ತು ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುನ್ ಸಿಂಗ್ ಈ ಪಟ್ಟಿ ಘೋಷಣೆ ಮಾಡಿದ್ದು, ಕೇಂದ್ರ ಸಚಿವ ಮನೋಜ್ ಸಿನ್ಹಾ ಘಾಜಿಪುರದಿಂದ ಕಣಕ್ಕೆ ಇಳಿಯಲಿದ್ದಾರೆ. ಕಳೆದ ಬಾರಿ ಇದೇ ಕ್ಷೇತ್ರದಲ್ಲಿ ಅವರು ಗೆದ್ದಿದ್ದರು. ಉತ್ತರಪ್ರದೇಶ ಸರಕಾರದ ಸಚಿವರಾದ ರೀತಾ ಬಹುಗುಣ ಜೋಶಿ, ಸತ್ಯದೇವ ಪಚೌರಿ ಕ್ರಮವಾಗಿ ಅಲಹಾಬಾದ್ ಹಾಗೂ ಕಾನ್ಪುರ್ ಕ್ಷೇತ್ರಗಳಿಂದ ಸ್ಪರ್ಧೆ ಮಾಡಲಿದ್ದಾರೆ.
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮುರಳಿ ಮನೋಹರ್ ಜೋಶಿ ಕಾನ್ಪುರ್ ನಿಂದ ಜಯಿಸಿದ್ದರು. ಈ ಬಾರಿ ಪಕ್ಷದ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಬಿ.ಸಿ.ಖಂಡೂರಿ ಹಾಗೂ ಕಲ್ ರಾಜ್ ಮಿಶ್ರಾ ಅವರಿಗೆ ಕೂಡ ಟಿಕೆಟ್ ನೀಡಿಲ್ಲ. ನಟಿ-ರಾಜಕಾರಣಿ ಜಯಪ್ರದಾ ರಾಮ್ ಪುರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮಂಗಳವಾರದಂದು ಬಿಜೆಪಿ ಸೇರಿದ ಅವರಿಗೆ ಕೆಲವೇ ಗಂಟೆಯಲ್ಲಿ ಪಕ್ಷದ ಟಿಕೆಟ್ ಸಿಕ್ಕಿದೆ.

ಉತ್ತರಪ್ರದೇಶದ ಬಿಜೆಪಿ ಅಧ್ಯಕ್ಷ ಮಹೇಂದ್ರ ನಾಥ್ ಪಾಂಡೆ ಮತ್ತೆ ಚಂದೌಲಿಯಿಂದ ಸ್ಪರ್ಧಿಸುತ್ತಿದ್ದಾರೆ. ಮೇನಕಾ ಗಾಂಧಿ ಸುಲ್ತಾನ್ ಪುರ್ ನಿಂದಲೂ ವರುಣ್ ಗಾಂಧಿ ಪಿಲಿಭಿಟ್ ನಿಂದಲೂ ಸ್ಪರ್ಧೆ ಮಾಡಲಿದ್ದಾರೆ. ಬಿಜೆಪಿಯಿಂದ ಪಶ್ಚಿಮ ಬಂಗಾಲದ ಹತ್ತು ಅಭ್ಯರ್ಥಿಗಳ ಹೆಸರು ಸಹ ಘೋಷಣೆ ಮಾಡಲಾಗಿದೆ.












Click it and Unblock the Notifications