ದೆಹಲಿಯಲ್ಲಿ ಕ್ರೈಮ್ ಥ್ರಿಲ್ಲರ್ ನ 'ಚೌಕೀದಾರ ಕಳ್ಳ' ಹೊಸ ಎಪಿಸೋಡ್: ರಾಹುಲ್ ಗಾಂಧಿ
ಸಿಬಿಐ ಡಿಐಜಿ ಎಂ.ಕೆ.ಸಿನ್ಹಾ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿರುವ ತಮ್ಮ ಅಫಿಡವಿಟ್ ನಲ್ಲಿ ಸರಕಾರದ ಹಿರಿಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದು, ಇದು ದೆಹಲಿಯಲ್ಲಿ ನಡೆಯುತ್ತಿರುವ "ಚೌಕೀದಾರ್ ಕಳ್ಳ" ಎಂಬ ಕ್ರೈಮ್ ಥ್ರಿಲರ್ ನ ಹೊಸ ಸಂಚಿಕೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ಸಿಬಿಐ ಸಂಸ್ಥೆಯೊಳಗಿನ ಹಳವಂಡಗಳೆಲ್ಲ ಒಂದೊಂದಾಗಿ ಬಯಲಾಗುತ್ತಿರುವಂತಿದೆ. ಪ್ರಭಾವಿ ಅಧಿಕಾರಿಯೇ ತನಿಖೆಯಲ್ಲಿ ಮೂಗು ತೂರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ನಿಜಕ್ಕೂ ಆ ಸಂಸ್ಥೆಯೊಳಗಿನ ಸಮಸ್ಯೆಗಳೋ ಅಥವಾ ಮಳೆಗಾಲದಲ್ಲಿ ಮನೆಯ ಗೋಡೆಯ ಚಕ್ಕಳದಂತೆ ಉದುರುತ್ತಿರುವ ಟೊಳ್ಳು ಭಾಗಗಳೋ ಇನ್ನೂ ಖಚಿತ ಆಗಬೇಕಿದೆ.
ಕೋರ್ಟ್ಗೆ ನೀಡಿದ ದಾಖಲೆಯನ್ನೇ ಸೋರಿಕೆ ಮಾಡಿದರೇ ಸಿಬಿಐ ನಿರ್ದೇಶಕ?
ಆದರೆ, ರಾಹುಲ್ ಗಾಂಧಿ, "ಅಧಿಕಾರಿಗಳು ಹೈರಾಣಾಗಿದ್ದಾರೆ. ವಿಶ್ವಾಸ ಮುರಿದು ಬಿದ್ದಿದೆ. ಪ್ರಜಾಪ್ರಭುತ್ವ ಕಣ್ಣೀರು ಹಾಕುತ್ತಿದೆ" ಎಂದಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಸಚಿವ ಹರಿಭಾಯಿ ಪಾರ್ಥಿಭಾಯಿ ಚೌಧರಿ ಹಾಗೂ ಸಿವಿಸಿ ಕೆ.ವಿ.ಚೌಧರಿ ಸೇರಿದಂತೆ ಹಲವರ ಹೆಸರನ್ನು ಸಿನ್ಹಾ ಎಳೆದು ತಂದಿದ್ದಾರೆ.
ತನಿಖೆಯಲ್ಲಿ ಪ್ರಭಾವಿಗಳು ಮೂಗು ತೂರಿಸಿದ ಆರೋಪ
ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ವಿರುದ್ಧ ಕೇಳಿಬಂದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಇವರೆಲ್ಲ ಮೂಗು ತೂರಿಸಲು ಯತ್ನಿಸಿದರು ಎಂದು ಸಿನ್ಹಾ ಆರೋಪ ಮಾಡಿದ್ದಾರೆ. ಅಸ್ತಾನಾ ಅವರನ್ನು ಜವಾಬ್ದಾರಿಗಳಿಂದ ಬಿಡುಗಡೆ ಮಾಡಿ, ರಜಾ ಮೇಲೆ ಕಳುಹಿಸಲಾಗಿದೆ. ಜತೆಗೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾರನ್ನೂ ರಜಾ ಮೇಲೆ ಕಳುಹಿಸಲಾಗಿದೆ.
ಅಫಿಡವಿಟ್ ಗೆ ನೀಡಿದ ಪ್ರತಿಕ್ರಿಯೆ ಏನು?
ಸಿಬಿಐ ಅಧಿಕಾರಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದೋವಲ್ ಹಾಗೂ ಚೌಧರಿ ಯಾವುದೇ ಪ್ರತಿಕ್ರಿಯೆಯನ್ನು ತಕ್ಷಣಕ್ಕೆ ನೀಡಿಲ್ಲ. ಕೇಂದ್ರ ಸಚಿವರು, ಈ ಆರೋಪವು ಆಧಾರರಹಿತವಾದದ್ದು ಹಾಗೂ ದುರುದ್ದೇಶದಿಂದ ಕೂಡಿದ್ದು ಎಂದು ಹೇಳಿದ್ದಾರೆ.
'ಚೌಕೀದಾರ ಕಳ್ಳ' ಎಂಬ ಹೆಸರಿನ ಕ್ರೈಮ್ ಥ್ರಿಲ್ಲರ್
" 'ಚೌಕೀದಾರ ಕಳ್ಳ' ಎಂಬ ಹೆಸರಿನ ಕ್ರೈಮ್ ಥ್ರಿಲ್ಲರ್ ನಾಟಕ ದೆಹಲಿಯಲ್ಲಿ ನಡೆಯುತ್ತಿದೆ. ಹೊಸ ಸಂಚಿಕೆಯಲ್ಲಿ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರ, ಕಾನೂನು ಕಾರ್ಯದರ್ಶಿ ಹಾಗೂ ಸಂಪುಟ ಕಾರ್ಯದರ್ಶಿ ವಿರುದ್ಧ ಸಿಬಿಐ ಡಿಐಜಿ ಗಂಭೀರ ಆರೋಪ ಮಾಡಿದ್ದಾರೆ" ಎಂದು ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. "ಮತ್ತೊಂದು ಕಡೆ ಗುಜರಾತ್ ನ ಅವರ ಪಾರ್ಟ್ ನರ್ ಕೋಟಿಗಟ್ಟಲೆ ಹಣ ಸಂಗ್ರಹದಲ್ಲಿ ನಿರತರಾಗಿದ್ದಾರೆ" ಎಂದು ಸೇರಿಸಿದ್ದಾರೆ.
ಯಾವ ಸ್ಥಿತಿಗೆ ತಲುಪಿತು ಕಾಂಗ್ರೆಸ್ ಸಂಸ್ಕೃತಿ?
ಚಾಯ್ ವಾಲಾಗಳು, ಪಕೋಡಾ ಮಾರುವವರು, ಚೌಕೀದಾರರು, ಸರ್ಜಿಕಲ್ ಸ್ಟ್ರೈಕ್, ಸೇನಾ ಮುಖ್ಯಸ್ಥರ ವಿರುದ್ಧ ಕಾಂಗ್ರೆಸ್ ನವರು ಬೈಗುಳದ ಮಳೆ ಸುರಿಸುತ್ತಾರೆ. ಯಾವ ಸ್ಥಿತಿಗೆ ತಲುಪಿತು ಅವರ ಸಂಸ್ಕೃತಿ? ಎಂದು ಮಧ್ಯಪ್ರದೇಶದ ಛಿಂದಾವರ್ ನಲ್ಲಿ ನಡೆದ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆ ಮಾಡಿದ್ದರು.