ಲಖೀಂಪುರ ಹಿಂಸಾಚಾರ: ಸಚಿವ ಅಜಯ್ ಮಿಶ್ರಾ ವಜಾಗೆ ಕಾಂಗ್ರೆಸ್ ನಿಯೋಗದ ಒತ್ತಾಯ
ನವದೆಹಲಿ, ಅಕ್ಟೋಬರ್ 13: ಉತ್ತರ ಪ್ರದೇಶದ ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತತ್ ಕ್ಷಣವೇ ಕೇಂದ್ರದ ರಾಜ್ಯ ಸಚಿವ ಅಜಯ್ ಮಿಶ್ರಾರನ್ನು ವಜಾಗೊಳಿಸುವಂತೆ ಕಾಂಗ್ರೆಸ್ ನಿಯೋಗವು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಒತ್ತಾಯಿಸಿದೆ.
ಬುಧವಾರ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ನಿಯೋಗವು ರಾಷ್ಟ್ರಪತಿಯವರನ್ನು ಭೇಟಿ ಮಾಡಿತು. ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಎಕೆ ಆಂಟೋನಿ, ಗುಲಾಮ್ ನಬಿ ಆಜಾದ್ ರನ್ನೊಳಗೊಂಡ ನಿಯೋಗವು ಲಖಿಂಪುರ್ ಖೇರಿ ಘಟನೆಯ ಕುರಿತು ರಾಷ್ಟ್ರಪತಿಯವರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿತು.
ಎಫ್ಐಆರ್ನಲ್ಲಿ ಅಜಯ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾ ಹೆಸರು ಉಲ್ಲೇಖಿಸಲಾಗಿದ್ದು, ಅಕ್ಟೋಬರ್ 3ರಂದು ಲಖಿಂಪುರ್ ಖೇರಿಯಲ್ಲಿ ರೈತರ ಮೇಲಿನ ಹಿಸಂಚಾರ ಪ್ರಕರಣದ ಆರೋಪದ ಮೇಲೆ ಸಚಿವರನ್ನು ವಜಾಗೊಳಿಸಬೇಕು. ರೈತರ ಹತ್ಯೆಯ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿತು.

ಸರ್ಕಾರದೊಂದಿಗೆ ಚರ್ಚಿಸುವ ಬಗ್ಗೆ ರಾಷ್ಟ್ರಪತಿ ಭರವಸೆ:
"ಉತ್ತರ ಪ್ರದೇಶ ಲಖೀಂಪುರ್ ಖೇರಿಯಲ್ಲಿ ನಡೆದ ರೈತರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದೊಂದಿಗೆ ಬುಧವಾರವೇ ಚರ್ಚೆ ನಡೆಸುತ್ತೇನೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭರವಸೆ ನೀಡಿದ್ದಾರೆ," ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು.
ನ್ಯಾಯಯುತ ತನಿಖೆ ಸಾಧ್ಯವಿಲ್ಲ ಎಂದ ರಾಹುಲ್ ಗಾಂಧಿ:
"ಆರೋಪಿಯ ತಂದೆ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವರು ಆಗಿರುವ ಕಾರಣಕ್ಕೆ ನ್ಯಾಯಯುತ ತನಿಖೆ ಸಾಧ್ಯವಿಲ್ಲ. ಆದ್ದರಿಂದ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ನಾವು ರಾಷ್ಟ್ರಪತಿಗೆ ಹೇಳಿದ್ದೇವೆ. ಅಂತೆಯೇ ಸುಪ್ರೀಂ ಕೋರ್ಟ್ನ ಇಬ್ಬರು ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದೇವೆ," ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಲಖೀಂಪುರ್ ಖೇರಿ ಘಟನೆಗೆ ನಿರ್ಮಲಾ ಸೀತಾರಾಮನ್ ಖಂಡನೆ:
ಅಮೆರಿಕೆಗೆ ಸರ್ಕಾರದ ಕೆಲಸದ ನಿಮಿತ್ತ ಭೇಟಿ ನೀಡಿರುವ ನಿರ್ಮಲಾ ಸೀತಾರಾಮನ್ ಬೋಸ್ಟನ್ ನಲ್ಲಿದ್ದು, ಹಾರ್ವರ್ಡ್ ಕೆನಡಿ ಸ್ಕೂಲ್ ನಲ್ಲಿ ನಡೆದ ಸಂವಾದಲ್ಲಿ ಲಖಿಂಪುರದ ಹಿಂಸಾಚಾರದ ಬಗ್ಗೆ ನಿರ್ಮಲಾ ಸೀತಾರಾಮನ್ ಅವರನ್ನು ಪ್ರಶ್ನಿಸಲಾಗಿತ್ತು. "ಈ ವೇಳೆ ಪ್ರತಿಕ್ರಿಯೆ ನೀಡಿರುವ ಅವರು, ಲಖಿಂಪುರ ಖೇರಿ ಹಿಂಸಾಚಾರ ಘಟನೆ ಖಂಡನೀಯವಾದದ್ದು ನಮ್ಮಲ್ಲಿ ಪ್ರತಿಯೊಬ್ಬರೂ ಅದನ್ನೇ ಹೇಳುತ್ತಿದ್ದಾರೆ. ಹಾಗೆಯೇ ಬೇರೆ ಕಡೆಗಳಲ್ಲಿ ಇಂತಹ ಘಟನೆಗಳು ನಡೆದಾಗಲೂ ಅದು ಆತಂಕದ ವಿಷಯವೇ ಆಗಿರುತ್ತದೆ" ಎಂದು ಹೇಳಿದ್ದಾರೆ.
ಅಜಯ್ ಮಿಶ್ರಾ ಬಂಧಿಸಲು ರೈತರ ಆಗ್ರಹ:
ಕೇಂದ್ರ ಸಂಪುಟದಿಂದ ಅಜಯ್ ಮಿಶ್ರಾರನ್ನು ತಕ್ಷಣವೇ ವಜಾಗೊಳಿಸಬೇಕು, ಕೊಲೆ ಪಿತೂರಿ ಹಾಗೂ ಅಸಮಾನತೆ ಅಡಿಯಲ್ಲಿ ಅವರನ್ನು ಬಂಧಿಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ಬಲ್ಬೀರ್ ಸಿಂಗ್ ರಾಜೇವಾ, ಯೋಗೇಂದ್ರ ಯಾದವ್ ಮತ್ತು ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಆಗ್ರಹಿಸಿದ್ದರು. ಅಕ್ಟೋಬರ್ 12ರಂದು ಟಿಕೊನಿಯಾ ಗ್ರಾಮದಲ್ಲಿ ರೈತ ಮುಖಂಡರಾದ ಬಲ್ಬೀರ್ ಸಿಂಗ್, ಯೋಗೇಂದ್ರ ಯಾದವ್ ಹಾಗೂ ರಾಕೇಶ್ ಟಿಕಾಯತ್ ಆಂಥಿಮ್ ಅರ್ದಾಸ್ ನಡೆಸಲು ಕರೆ ನೀಡಿದ್ದರು.
ಅಕ್ಟೋಬರ್ 12ರಂದು ಲಖೀಂಪುರ್ ಖೇರಿ ಪ್ರದೇಶಕ್ಕೆ ಆಗಮಿಸುವಂತೆ ತಮ್ಮ ಬೆಂಬಲಿಗರಿಗೆ ಆಹ್ವಾನ ನೀಡಿದ್ದರು. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ನೀವಿರುವ ಸ್ಥಳಗಳಲ್ಲೇ ಮಂದಿರ, ಮಸೀದಿ ಹಾಗೂ ಚರ್ಚ್ ಗಳಲ್ಲಿ ಮೃತರಿಗಾಗಿ ಪ್ರಾರ್ಥಿಸೋಣ. ಅದೂ ಸಾಧ್ಯವಾಗದಿದ್ದರೆ ಮೃತರ ಸ್ಮರಣೆಯಲ್ಲಿ ಕನಿಷ್ಠ 5 ಮೇಣದಬತ್ತಿಗಳನ್ನು ಹಚ್ಚೋಣ ಎಂದು ಯೋಗೇಂದ್ರ ಯಾದವ್ ಕರೆ ನೀಡಿದ್ದರು.
ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ ಬಂಧನ:
ಕಳೆದ ಅಕ್ಟೋಬರ್ 3ರಂದು ಲಖೀಂಪುರ್ ಜಿಲ್ಲೆಯ ಖೇರಿಯಲ್ಲಿ ಘೋಷಣೆ ಕೂಗಿದ ರೈತರ ಮೇಲೆ ತನ್ನ ಎಸ್ಯುವಿಯನ್ನು ಚಾಲನೆ ಮಾಡಿದ ಆರೋಪದಡಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾರನ್ನು ಬಂಧಿಸಲಾಗಿದೆ. ಅಂದು ನಡೆದ ಘಟನೆಯಲ್ಲಿ ನಾಲ್ಕು ರೈತರು ಒಬ್ಬ ಪತ್ರಕರ್ತ ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು.












Click it and Unblock the Notifications