ಕೇರಳದಲ್ಲಿ ಮಳೆ: ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಪತ್ರ!
ನವದೆಹಲಿ, ಆಗಸ್ಟ್ 11: ಇತ್ತೀಚೆಗಷ್ಟೇ ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಮಸೂದೆಯನ್ನು ಮುಂಗಾರು ಅಧಿವೇಶನದ ವೇಳೆ ಮಂಡಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ರಾಹುಲ್ ಗಾಂಧಿ ಇದೀಗ ಮತ್ತೊಂದು ಪತ್ರ ಬರೆದಿದ್ದಾರೆ!
ಈ ಪತ್ರ ಕೇರಳದ ಪ್ರವಾಹಕ್ಕೆ ಸಂಬಂಧಿಸಿದ್ದು. ನಿರಂತರ ಮಳೆಯಿಂದ ಕೇರಳದಲ್ಲಿ ಪ್ರವಾಹ ತಲೆದೋರಿದ್ದು ಸಾಕಷ್ಟು ಹಾನಿಯಾಗಿದೆ. ಇದುವರೆಗೂ 29 ಜನ ಮೃತರಾಗಿದ್ದಾರೆ. "ಕೇರಳದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಸಂತ್ರಸ್ಥರಿಗೆ ನೆರವು ನೀಡಲು ಕೇಂದ್ರ ಸರ್ಕಾರ ತಕ್ಷಣವೇ ಅಗತ್ಯ ಹಣಕಾಸಿನ ನೆರವು ನೀಡಬೇಕು" ಎಂದು ತಮ್ಮ ಪತ್ರದಲ್ಲಿ ರಾಹುಲ್ ಗಾಂಧಿ ಬರೆದಿದ್ದಾರೆ.
ಕೇರಳದಲ್ಲಿ ವರುಣನ ರುದ್ರನರ್ತನ: ಮೃತರ ಸಂಖ್ಯೆ 29 ಕ್ಕೇರಿಕೆ
"ಕಳೆದ ಐದು ದಶಕಗಳಲ್ಲಿ ಕೇರಳ ಇಂಥ ನೈಸರ್ಗಿಕ ವಿಕೋಪವನ್ನು ಎದುರಿಸುತ್ತಿದೆ. ಇದರಿಂದ ರಾಜ್ಯಕ್ಕೆ ಸಾಕಷ್ಟು ಪ್ರಾಣಹಾನಿ, ಆರ್ಥಿಕ ನಷ್ಟವಾಗಿದೆ" ಎಂದು ರಾಹುಲ್ ಗಾಂಧಿ ಪತ್ರದಲ್ಲಿ ಬರೆದಿದ್ದಾರೆ.
ಈಗಾಗಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತುಕತೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಎಲ್ಲ ರೀತಿಯ ನೆರವಿಗೆ ಕೇಂದ್ರ ಸರ್ಕಾರ ಬದ್ಧ ಎಂದು ಹೇಳಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.