ಕೇರಳ ಪ್ರವಾಹಕ್ಕೆ ಕಾರಣ ಗೋಹತ್ಯೆ: ಬಸನಗೌಡ ಪಾಟೀಲ್ ಯತ್ನಾಳ್
ನವದೆಹಲಿ, ಆಗಸ್ಟ್ 27: "ಕೇರಳಿಗರ ನಿದ್ದೆ ಕೆಡಿಸಿದ್ದ ಪ್ರವಾಹಕ್ಕೆ ಗೋಹತ್ಯೆಯೇ ಕಾರಣ" ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿಜಯಪುರದಲ್ಲಿ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಅವರು, 'ಹಿಂದುಗಳ ಭಾವನೆಗೆ ನೋವುಂಟು ಮಾಡಿದ್ದಕ್ಕಾಗಿ ಅವರು ಈಗ ಇಂಥ ಸಂಕಷ್ಟ ಎದುರಿಸುತ್ತಿದ್ದಾರೆ' ಎಂದರು.
ನಾನು ಗೃಹಮಂತ್ರಿಯಾದರೆ ಬುದ್ಧಿಜೀವಿಗಳ ಮೇಲೆ ಗುಂಡು: ಯತ್ನಾಳ್
"ಗೋಹತ್ಯೆ ಮಾಡುವುದು ಹಿಂದು ಸಮುದಾಯದ ಭಾವನೆಗೆ ನೋವುಂಟು ಮಾಡಿದಂತೆ. ಮತ್ತೊಂದು ಮತೀಯರ ಭಾವನೆಗೆ ಎಂದಿಗೂ ನೋವುಂಟು ಮಾಡಬಾರದು. ಈಗ ಕೇರಳಕ್ಕೆ ಏನಾಗಿದೆ ಎಂದು ನೀವು ನೋಡಿದ್ದೀರಾ. ಅವರು ರಾಜಾರೋಷವಾಗಿಯೇ ಗೋಹತ್ಯೆ ಮಾಡುತ್ತಿದ್ದರು, ಆದರೆ ಒಂದು ವರ್ಷದ ಒಳಗೆ ಅವರು ಎಂಥ ಸಂಕಷ್ಟ ಎದುರಿಸಿದರು ನೋಡಿ" ಎಂದು ವಿಜಯಪುರ ಶಾಸಕ ಯತ್ನಾಳ್ ಹೇಳಿದ್ದಾರೆ.
"ಯಾರು ಹಿಂದು ಸಮುದಾಯದ ಭಾವನೆಗೆ ನೋವುಂಟು ಮಾಡುತ್ತಾರೋ ಅವರಿಗೆ ಹೀಗೇ ಆಗೋದು" ಎಂದು ಅವರು ಹೇಳಿದ್ದಾರೆ.
ಕಳೆದ ತಿಂಗಳಷ್ಟೇ, ಎಲ್ಲಾ ಬುದ್ಧಿಜೀವಿಗಳನ್ನೂ ಗುಂಡಿಕ್ಕಿ ಕೊಲ್ಲಿ ಎಮಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಯತ್ನಾಳ್, ಮುಸ್ಲಿಮರು ಬಿಜೆಪಿಗೆ ಮತ ಹಾಕೋಲ್ಲ. ಆದ್ದರಿಂದ ಅವರ ಪರವಾಗಿ ಯಾವುದೇ ಕೆಲಸ ಮಾಡುವುದನ್ನು ನಿಲ್ಲಿಸಿ ಎಂಬ ಹೇಳಿಕೆಯನ್ನೂ ನೀಡಿದ್ದರು.