ಜನವರಿಯಲ್ಲಿ ಬೆಂಗಳೂರಿನಲ್ಲಿ ಪ್ರವಾಸಿ ಭಾರತೀಯ ದಿವಸ್
ದೆಹಲಿ, ಆಗಸ್ಟ್ 26: ಮುಂದಿನ ಜನವರಿ 7ರಿಂದ 9ರ ವರೆಗೆ ಬೆಂಗಳೂರಿನಲ್ಲಿ ಪ್ರವಾಸಿ ಭಾರತೀಯ ದಿವಸ್ ನಡೆಯಲಿದೆ. ನವದೆಹಲಿಯಲ್ಲಿ ನಡೆದ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವೆ ಸುಷ್ಮಾ ಸ್ವರಾಜ್ ಅವರ ಪತ್ರಿಕಾಗೋಷ್ಠಿಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಪ್ರವಾಸಿ ಭಾರತೀಯ ದಿವಸ್ 2017ರ ಸಹಭಾಗಿತ್ವ ರಾಜ್ಯವಾಗಿ ಕರ್ನಾಟಕವನ್ನು ಸುಷ್ಮಾ ಸ್ವರಾಜ್ ಘೋಷಿಸಿದರು. ಕಾರ್ಯಕ್ರಮ ಆಯೋಜಿಸಲು ಕರ್ನಾಟಕ ಸರ್ಕಾರದಿಂದ ನಿರೀಕ್ಷೆಗೂ ಮೀರಿದ ಸಹಕಾರ ದೊರೆತಿದೆ ಎಂದು ಅವರು ಪ್ರಶಂಸಿಸಿದರು.[ಕೆಎಸ್ ಟಿಡಿಸಿಯಿಂದ ಕಡಲತೀರದ ಪ್ರವಾಸ]
ಇದೇ ಸಂದರ್ಭದಲ್ಲಿ ಪ್ರವಾಸಿ ಭಾರತೀಯ ದಿವಸ್ 2017ರ ಲಾಂಛನ ಮತ್ತು ವೆಬ್ ಸೈಟ್ ಬಿಡುಗಡೆ ಮಾಡಲಾಯಿತು.ಬೆಂಗಳೂರಿನಲ್ಲಿ ಪ್ರವಾಸಿ ಭಾರತೀಯ ದಿವಸ್ ಆವೃತ್ತಿಯ ಆತಿಥ್ಯ ವಹಿಸಲು ಕರ್ನಾಟಕಕ್ಕೆ ಅವಕಾಶ ಒದಗಿಸಿದ್ದಕ್ಕಾಗಿ ವಿದೇಶಾಂಗ ಸಚಿವಾಲಯಕ್ಕೆ ಕೃತಜ್ಞತೆ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪ್ರವಾಸಿ ಭಾರತೀಯ ದಿವಸ್ ಅನ್ನು ರಾಜ್ಯದಲ್ಲಿ ಮೊದಲ ಸಲ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತೇವೆ. ನಮ್ಮ ರಾಷ್ಟ್ರದ ಪ್ರಜಾಸತ್ತಾತ್ಮಕ ತತ್ವಗಳನ್ನು ಸ್ಮರಿಸುವ ಮತ್ತು ಸಂಭ್ರಮ ಪಡುವ ಸಂದರ್ಭ ಪ್ರವಾಸಿ ಭಾರತೀಯ ದಿವಸ್ ಎಂದು ಅವರು ಹೇಳಿದರು.[ಮೈಸೂರು ದಸರಾಕ್ಕೆ ಗೋಲ್ಡನ್ ಚಾರಿಯಟ್ನಲ್ಲಿ ಬನ್ನಿ]
ಅನಿವಾಸಿ ಭಾರತೀಯ ಬಂಡವಾಳ ಹೂಡಿಕೆದಾರರಲ್ಲಿ ಆಸಕ್ತಿ ಹುಟ್ಟಿಸಲು ಹಲವು ವಿಷಯಗಳ ಕುರಿತು ರಾಜ್ಯವು ಅಧಿವೇಶನಗಳನ್ನು ಹಮ್ಮಿಕೊಂಡಿದೆ. ಆಸಕ್ತಿಗೆ ಹಾಗೂ ಸಮಯಕ್ಕೆ ಅನುಗುಣವಾಗಿ ಕರ್ನಾಟಕದ ಸಂಸ್ಕತಿಯನ್ನು ಬಿಂಬಿಸಲು ವಿಶೇಷ ಪ್ಯಾಕೇಜ್ ಪ್ರವಾಸಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.[ವರ್ಷಪೂರ್ತಿ ಜೋಗ ವೈಭವ : ಏನಿದು ಯೋಜನೆ?]
ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿದರು. ಸಚಿವರಾದ ಆರ್.ವಿ ದೇಶಪಾಂಡೆ, ಪ್ರಿಯಾಂಕ್ ಖರ್ಗೆ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.