ಕಾಂಗ್ರೆಸ್ಸಿನ ಹಿರಿಯ ನಾಯಕನಿಗೆ ಮಣೆ ಹಾಕಿದ ಮೋದಿ
ನವದೆಹಲಿ, ಮೇ 29: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, 9ನೇ ಬಾರಿ ಲೋಕಸಭೆಗೆ ಆಯ್ಕೆಯಾಗಿರುವ (ಮಧ್ಯಪ್ರದೇಶದ ಚಿಂದ್ವಾರಾ ಕ್ಷೇತ್ರದಿಂದ) ಕಮಲ್ ನಾಥ್ ಅವರನ್ನು ಲೋಕಸಭೆಯ ಹಂಗಾಮಿ ಸ್ಪೀಕರ್ ಅಗಿ ನೇಮಿಸಲಾಗಿದೆ.
ಮಾಜಿ ಕೇಂದ್ರ ಸಚಿವ, 71 ವರ್ಷದ ಕಮಲ್ ನಾಥ್ ಅವರು ಹಂಗಾಮಿ ಸ್ಪೀಕರ್ ಅಗಿ ನೇಮಕಗೊಂಡಿದ್ದು, ನೂತನವಾಗಿ ಆಯ್ಕೆಯಾಗಿರುವ ಸಂಸದರಿಗೆ ಪ್ರಮಾಣವಚನ ಬೋಧಿಸುವುದು ಹಾಗೂ ಮುಂದಿನ ಸ್ಪೀಕರ್ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಡುವುದು ಅವರ ಜವಾಬ್ದಾರಿಯಾಗಲಿದೆ.

ಕಾಂಗ್ರೆಸ್ಸಿನ ಹಿರಿಯ ನಾಯಕ ಕಮಲ್ ನಾಥ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ (Pro-tem Speaker) ನೇಮಿಸುವಂತೆ ಶಿಫಾರಸು ಮಾಡಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ಗಮನಾರ್ಹವೆಂದರೆ ಇದೇ ಕಮಲ್ ನಾಥ್ ಅವರನ್ನು ಪ್ರತಿಪಕ್ಷಗಳು ವಿರೋಧ ಪಕ್ಷದ ನಾಯಕನನ್ನಾಗಿಯೂ ನೇಮಿಸುವ ಸಾಧ್ಯತೆಯಿದೆ. 543 ಸದಸ್ಯರ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಕೇವಲ 44 ಸ್ಥಾನ ಗಳಿಸಿದೆ. ವಿರೋಧ ಪಕ್ಷದ ನಾಯಕ ಸ್ಥಾನ ಪಡೆಯಲು ಕಾಂಗ್ರೆಸ್ಸಿಗೆ 11 ಸ್ಥಾನಗಳ ಕೊರತೆಯಿದೆ.
ಇಂದೋರ್ ಲೋಕಸಭಾ ಕ್ಷೇತ್ರದಿಂದ 8ನೇ ಬಾರಿಗೆ ಆಯ್ಕೆಯಾಗಿರುವ ಮಾಜಿ ಕೇಂದ್ರ ಸಚಿವೆ, ಬಿಜೆಪಿಯ ಸುಮಿತ್ರಾ ಮಹಾಜನ್ ಅವರು ಮುಂದಿನ ಸ್ಪೀಕರ್ ಆಗಿ ನೇಮಕವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಕಳೆದ ಲೋಕಸಭೆಯಲ್ಲಿ ಸ್ಪೀಕರ್ ಆಗಿದ್ದ ಕಾಂಗ್ರೆಸ್ಸಿನ ಹಿರಿಯ ನಾಯಕಿ ಮೀರಾ ಕುಮಾರ್ ಅವರು ಈ ಬಾರಿ ಸಸರಾಂ ಕ್ಷೇತ್ರದಿಂದ ಪರಾಭವಗೊಂಡಿದ್ದಾರೆ.
ಮುಂದಿನ ವಾರದಿಂದ ವಿಶೇಷ ಅಧಿವೇಶನ ಆರಂಭವಾಗುವ ಸಾಧ್ಯತೆಯಿದೆ. 16ನೇ ಲೋಸಕಭೆಯ ಪ್ರಥಮ ಅಧಿವೇಶನ ಇದಾಗಲಿದ್ದು, ನೂತನವಾಗಿ ಆಯ್ಕೆಯಾಗಿರುವ ಎಲ್ಲ ಸಂಸದರಿಗೂ ಪ್ರಮಾಣವಚನ ಬೋಧಿಸುವ ಕಾರ್ಯ ನಡೆಯಲಿದೆ. ಅದಾದ ನಂತರ ಅಧಿವೇಶನ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟು ಜುಲೈ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ ಆರಂಭವಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ ಸೇರಲಿರುವ ಕೇಂದ್ರ ಮಂತ್ರಿಮಂಡಲವು ಸಂಸತ್ ಅಧಿವೇಶನದ ವೇಳಾಪಟ್ಟಿ ನಿಗದಿಪಡಿಸಲಿದೆ ಎಂದು ತಿಳಿದುಬಂದಿದೆ.
ಮೊದಲ ಅಧಿವೇಶನ ಜೂನ್ 4ರಂದು ಆರಂಭ:
ತಾಜಾ ವರದಿಗಳ ಪ್ರಕಾರ 16ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 4ರಂದು ಆರಂಭವಾಗಿ, ಜೂನ್ 12ಕ್ಕೆ ಮುಕ್ತಾಯಗೊಳ್ಳಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.












Click it and Unblock the Notifications