ಶಬರಿಮಲೆ: ವಿಸ್ತೃತ ಪೀಠಕ್ಕೆ ವರ್ಗಾವಣೆ, ಬೆಂಬಲಿಸಿದ ನ್ಯಾ.ಇಂದು
ನವದೆಹಲಿ, ನವೆಂಬರ್ 14: ಶಬರಿಮಲೆ ಪ್ರಕರಣವದ ಮೇಲ್ಮನವಿ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡುವ ಸುಪ್ರೀಂ ಕೋರ್ಟ್ ಆದೇಶವನ್ನು ಪಂಚ ಸದಸ್ಯ ಪೀಠದ ನ್ಯಾಯಮೂರ್ತಿಗಳಲ್ಲೊಬ್ಬರಾದ ಇಂದು ಮಲ್ಹೋತ್ರಾ ಬೆಂಬಲಿಸಿದ್ದಾರೆ.
ವಿಸ್ತೃತ ಪೀಠಕ್ಕೆ ಪ್ರಕರಣರವನ್ನು ವರ್ಗಾವಣೆ ಮಾಡಬೇಕೆಂದು 3:2 ಅನುಪಾತದಲ್ಲಿ ನ್ಯಾಯಾಧೀಶರು ಅಭಿಪ್ರಾಯ ಪಟ್ಟಿದ್ದರು. ಬಹುಮತದ ಆಧಾರದ ಮೇಲೆ ಮೂವರು ನ್ಯಾಯಮೂರ್ತಿಗಳ ಅಭಿಪ್ರಾಯದಂತೆ ಇದನ್ನು ಏಳು ಸದಸ್ಯ ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.
ಕೇರಳದ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಿದ್ದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಅರ್ಜಿ ಪ್ರಕರಣವನ್ನು ಸಪ್ತ ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.
2018 ರ ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ಶಬರಿಮಲೆಗೆ ಮಹಿಳೆಯರು ಪ್ರವೇಶಿಸಲು ಅನುಮತಿ ನೀಡಿತ್ತು. ಈ ತೀರ್ಪನ್ನು ಅಂದಿನ ಸಾಂವಿಧಾನಿಕ ಪೀಠದಲ್ಲಿದ್ದ ಐವರು ನ್ಯಾಯಮೂರ್ತಿಗಳಲ್ಲೊಬ್ಬರಾಗಿದ್ದ ಇಂದು ಮಲ್ಹೋತ್ರಾ ವಿರೋಧಿಸಿದ್ದರು. ಆದರೆ ಆಗಲೂ 4:1 ಅನುಪಾತದ ಆಧಾರದಲ್ಲಿ ತೀರ್ಪು ನೀಡಲಾಗಿತ್ತು.

"ಕೆಲವು ಧಾರ್ಮಿಕ ಸೂಕ್ಷ್ಮ ವಿಷಯಗಳು ಬಂದಾಗ ತರ್ಕ ಸೋಲಬೇಕು... ಧಾರ್ಮಿಕ ಆಚರಣೆಯನ್ನು ಸಮಾನತೆಯ ಹಕ್ಕಿನ ಆಧಾರದ ಮೇಲೆ ನಿರ್ಧರಿಸುವುದು ಸರಿಯಲ್ಲ. ಇದರಲ್ಲಿ ಕೋರ್ಟಿನ ಹಸ್ತಕ್ಷೇಪದ ಅಗತ್ಯವಿರಲಿಲ್ಲ" ಎಂದು ಇಂದು ಮಲ್ಹೋತ್ರಾ ಅಭಿಪ್ರಾಯ ಪಟ್ಟಿದ್ದರು.
ದೇವಸ್ಥಾನದ ಆಡಳಿತ ಮಂಡಳಿಯ ನಿಯಮಾವಳಿ ಪ್ರಕಾರ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಸ್ಥಾನದ ಆವರಣಕ್ಕೆ ಭೇಟಿ ನೀಡಲು ಅವಕಾಶವಿರಲಿಲ್ಲ. ಋತುಮತಿಯಾಗುವ ವಯಸ್ಸಿನ ಹೆಣ್ಣುಮಕ್ಕಳು ದೇವಾಲಯದ ಆವರಣಕ್ಕೆ ಪ್ರವೇಶಿಸಿದರೆ ಮಂದಿರದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬುದು ದೇವಾಲಯದ ಆಡಳಿತ ಮಂಡಳಿಯ ವಾದವಾಗಿತ್ತು. ಆದರೆ 2018 ರ ಸೆಪ್ಟೆಂಬರ್ ನಲ್ಲಿ ಈ ನಿಷೇಧವನ್ನು ತೆರವುಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಮಹಿಳೆಯರು ದೇವಾಲಯ ಪ್ರವೇಶಿಸಬಹುದು ಎಂದಿತ್ತು.












Click it and Unblock the Notifications