ಪ್ರಮುಖ ಸ್ಥಾನದಿಂದ ಅನಂತ್ ಕುಮಾರ್ ಹೊರಕ್ಕೆ
ನವದೆಹಲಿ, ಸೆ.9: ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮೊದಲಿನಿಂದಲೂ ಬಿಜೆಪಿಯ ನಿಷ್ಠಾವಂತ ಸೇವಕನಾಗಿ ಕರ್ನಾಟಕದ ಪ್ರತಿನಿಧಿಯಾಗಿ ದೆಹಲಿ ದೊರೆಗಳ ಪ್ರಶಂಸೆಗೆ ಪಾತ್ರರಾಗಿದ್ದ ಸಂಸದ ಅನಂತ್ ಕುಮಾರ್ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ ಇಲ್ಲಿದೆ. ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಪುನರ್ ರಚನೆಗೊಂಡಿದ್ದು ಸಂಸದ ಅನಂತ್ ಕುಮಾರ್ ಅವರನ್ನು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಹೊರ ಹಾಕಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಗಳನ್ನು ಎದುರಿಸಲು ಬಿಜೆಪಿ ರಚಿಸಿರುವ ಹೊಸ ಕೇಂದ್ರ ಚುನಾವಣಾ ಸಮಿತಿಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್ ಬದಲಿಗೆ ಹಿರಿಯ ನಾಯಕ ಜೆಪಿ ನಡ್ಡಾ ಅವರಿಗೆ ಅಮಿತ್ ಶಾ ಮಣೆ ಹಾಕಿದ್ದಾರೆ.
15 ಸದಸ್ಯರ ಕೇಂದ್ರ ಚುನಾವಣಾ ಸಮಿತಿ ಮುಖ್ಯ ಪಾತ್ರ ವಹಿಸಲಿದ್ದು ಮುಂಬರುವ ಚುನಾವಣೆಗಳಿಗೆ ಸಂಬಂಧಿಸಿದ ಕಾರ್ಯತಂತ್ರ, ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಸೇರಿದಂತೆ ಎಲ್ಲವೂ ಸಮಿತಿಯ ಜವಾಬ್ದಾರಿಯಾಗಿರುತ್ತದೆ.[ಅಧಿಕಾರ ಇದ್ರೂ ನಿರುದ್ಯೋಗಿಯಂತಾದ ಅಡ್ವಾಣಿ]

ರಾಷ್ಟ್ರಮಟ್ಟದಲ್ಲಿ ಸಮಿತಿಯ ಸದಸ್ಯರು ತೆಗೆದುಕೊಳ್ಳುವ ನಿರ್ಧಾರ ಪಕ್ಷದ ಉನ್ನತಿ ಹಾಗೂ ಅಧಿಕಾರ ವಿಸ್ತರಣೆಗೆ ನಾಂದಿ ಹಾಡುತ್ತದೆ. ಅಮಿತ್ ಶಾ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಚುನಾವಣಾ ಸಮಿತಿಯ ಪುನರ್ ರಚನೆಗೆ ಮುಂದಾದರು.
ಹಿರಿಯ ನಾಯಕರಾದ ಎಲ್.ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಅವರನ್ನು ಬದಲಾಯಿಸಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಬಿಜೆಪಿ ಅಧ್ಯಕ್ಷ ಪದವಿ ಆಕಾಂಕ್ಷಿಯಾಗಿದ್ದ ಜೆಪಿ ನಡ್ಡಾ ಅವರನ್ನು ಸೇರಿಸಿಕೊಳ್ಳಲಾಯಿತು. ಇದನ್ನು ಸಮರ್ಥಿಸಿಕೊಳ್ಳಲು ಶಾ ಬಳಿ ವಯೋಮಿತಿ ಆಧಾರ, ಹಿರಿಯರಿಗೆ ವಿಶ್ರಾಂತಿ ಎಂಬ ಕಾರಣಗಳಿತ್ತು.
ಅದರೆ, ಅನಂತ್ ಕುಮಾರ್ ಅವರನ್ನು ಸಮಿತಿಯಿಂದ ಕೈಬಿಡಲು ಕಾರಣ ಏನು? ತಿಳಿದಿಲ್ಲ, ನಡ್ಡಾ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ ನಿಜ. ಅದರೆ, ಅನಂತ್ ಕುಮಾರ್ ಅವರು ಬಹುವರ್ಷಗಳ ಕಾಲ ಕೇಂದ್ರ ಚುನಾವಣಾ ಸಮಿತಿಯ ಕಾರ್ಯದರ್ಶಿಯಾಗಿ ಹಲವು ರಾಜ್ಯಗಳ ಚುನಾವಣಾ ಉಸ್ತುವಾರಿ ವಹಿಸಿಕೊಂಡು ಉತ್ತಮ ಸ್ಕೋರ್ ಗಳಿಸಿದ್ದರು. ಅನುಭವ, ವಯೋಮಿತಿ, ಪ್ರಾದೇಶಿಕ ಆದ್ಯತೆ, ಕಾರ್ಯಕ್ಷಮತೆ ಯಾವುದನ್ನು ಪರಿಗಣಿಸದೆ ಅನಂತ್ ಅವರನ್ನು ಕಡೆಗಣಿಸಲಾಗಿದೆ. [ಯಡಿಯೂರಪ್ಪಗೆ ಬಿಜೆಪಿ ಉಪಾಧ್ಯಕ್ಷ ಪಟ್ಟ]
ಸಮಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು ಹಾಗೂ ನಿತಿನ್ ಗಡ್ಕರಿ ಇದ್ದಾರೆ. ಹರ್ಯಾಣ ವಿಧಾನಸಭೆಗೆ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುವುದು ಈ ಸಮಿತಿಯ ಮೊದಲ ಟಾಸ್ಕ್ ಆಗಿದೆ. ಅಂದರಿಕು ಮಂಚುವಾಡು ಅನಂತಯ್ಯ ಈಗ ಡಿಲ್ಲಿ ದೊರೆಗಳಿಂದ ದೂರಾಗುತ್ತಿರುವುದು ಏಕಯ್ಯ? ಎಂದು ಪ್ರಶ್ನಿಸುವ ಸಮಯ ಬಂದಿದೆ.












Click it and Unblock the Notifications