ಜೆಎನ್ಯು: ಬಿಡುಗಡೆಯಾದ ಹೊಸ ವಿಡಿಯೋ, ಹೇಳುತ್ತೆ ಬೇರೊಂದು ಕಥೆಯಾ
ಬಿಜೆಪಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ವಿದ್ಯಾರ್ಥಿ ಬಣಗಳ ನಡುವಿನ ದ್ವೇಷದಿಂದಾಗಿ, ದೇಶದ ಪ್ರತಿಷ್ಠಿತ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ ಬೇಡವಾದ ಕಾರಣಕ್ಕೇ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದೆ.
ಕಳೆದ ಭಾನುವಾರ (ಜ 5) ದೇಶವೇ ತಲೆತಗ್ಗಿಸುವಂತಹ ಘಟನೆಯ ಹಿಂದೆ ಯಾರಿದ್ದಾರೆ? ಪುಸ್ತಕ ಹಿಡಿದುಕೊಳ್ಳಬೇಕಾದ ವಿದ್ಯಾರ್ಥಿಗಳ ಕೈಗೆ, ದೊಣ್ಣೆ, ತಲವಾರು ಕೊಟ್ಟದ್ದು ಯಾರು? ಎಬಿವಿಪಿ ಸಂಘಟನೆ, ಎಡಪಕ್ಷಗಳ ಬೆಂಬಲದ ವಿದ್ಯಾರ್ಥಿಗಳ ಕಡೆ ಬೊಟ್ಟು ಮಾಡುತ್ತಿದ್ದರೆ, ಇವರು ಎಬಿವಿಪಿ ಇದಕ್ಕೆಲ್ಲಾ ಕಾರಣ ಎಂದು ದೂರುತ್ತಿವೆ.
JNU: ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ಮೇಲೆ ಎಫ್ಐಆರ್, ಹಿಂಸಾಚಾರದ ಹೊಣೆಹೊತ್ತ ಹಿಂದೂ ಸಂಘಟನೆ
ಹಿಂಸಾಚಾರ ನಡೆಯುತ್ತಿರ ಬೇಕಾದರೆ ಪೊಲೀಸರು ಯಾಕೆ ಸುಮ್ಮನಿದ್ದರು ಎನ್ನುವ ವಿಚಾರ ಸಾಕಷ್ಟು ಆಕ್ರೋಶ, ಚರ್ಚೆಗೆ ಕಾರಣವಾಗಿದೆ. ಈ ನಡುವೆ, ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಘಟಕದ ಅಧ್ಯಕ್ಷೆ ಐಷ್ ಘೋಷ್ ಮತ್ತು ಇತರೆ 19 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ದೆಹಲಿ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆ ಪ್ರಕಾರ ಹಿಂಸಾಚಾರದಲ್ಲಿ ಎರಡೂ ಸಂಘಟನೆಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಇವೆಲ್ಲದರ ನಡುವೆ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ.
ಭಾನುವಾರದ ಹಿಂಸಾಚಾರ
ಭಾನುವಾರದ ಹಿಂಸಾಚಾರದಲ್ಲಿ ನಮ್ಮದೇನೂ ಪಾತ್ರವಿಲ್ಲ, ಇದಕ್ಕೆಲ್ಲಾ 'ಕಮ್ಯೂನಿಸ್ಟ್ ಥಗ್ಸ್' ಗಳು ಕಾರಣ ಎಂದು ಎಬಿವಿಪಿ, ವಿಡಿಯೋ ಬಿಡುಗಡೆ ಮಾಡಿದೆ. ಭಾನುವಾರದ ಘಟನೆಗೆ ಸಂಬಂಧಿಸಿದಂತೆ, ಬಿಜೆಪಿ ಮತ್ತು ಅದರ ವಿದ್ಯಾರ್ಥಿ ಸಂಘಟನೆ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಈ ಸಂದರ್ಭದಲ್ಲಿ ಎಬಿವಿಪಿ ಬಿಡುಗಡೆ ಮಾಡಿರುವ ವಿಡಿಯೋ ಘಟನೆಯ ಇನ್ನೊಂದು ಆಯಾಮವನ್ನು ತೋರಿಸುತ್ತಿದೆ.
ಎಬಿವಿಪಿ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್
ಎಬಿವಿಪಿ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಬಿಡುಗಡೆ ಮಾಡಿರುವ ಟ್ವೀಟ್ ನಲ್ಲಿ "ಎಡ ಗೂಂಡಾಗಳು ಹೇಗೆ ನಮ್ಮ ಕಾರ್ಯಕರ್ತ ಶಿವಂ ಅವರನ್ನು ಅಟ್ಟಾಡಿಸಿಕೊಂಡು ಬರುತ್ತಿದ್ದಾರೆ" ಎನ್ನುವ ಒಕ್ಕಣೆಯನ್ನು ಹಾಕಿ, ವಿಡಿಯೋ ಬಿಡುಗಡೆ ಮಾಡಿದೆ.
|
ನಮ್ಮ ಕಾರ್ಯಕರ್ತ ಶಿವಂ ಅವರನ್ನು ಅಟ್ಟಾಡಿಸಿಕೊಂಡು ಬಂದು, ದಾಳಿ
"ನಮ್ಮ ಕಾರ್ಯಕರ್ತ ಶಿವಂ ಅವರನ್ನು ಅಟ್ಟಾಡಿಸಿಕೊಂಡು ಬಂದು, ದಾಳಿ ಮಾಡಲಾಗಿದೆ. ಇದು, ಕಮ್ಯೂನಿಸ್ಟ್ ಬೆಂಬಲಿತ ಗೂಂಡಾ ವಿದ್ಯಾರ್ಥಿಗಳ ದುಷ್ಕೃತ್ಯ. ಜೆಎನ್ಯು ವಿದ್ಯಾರ್ಥಿಗಳು, ಇಷ್ಟು ಮಾತ್ರ ಆ ಸಂಘಟನೆಯಿಂದ ನಿರೀಕ್ಷಿಸಬಹುದು" ಎಂದು ತನ್ನ ಟ್ವೀಟ್ ನಲ್ಲಿ ಹೇಳಿದೆ.
ಶಿವಂಗೆ ಆದ ಸಣ್ಣಪುಟ್ಟ ಗಾಯದ ಫೋಟೋ
ಸುಮಾರು ಹತ್ತರಿಂದ ಹದಿನೈದು ಜನರು, ವಿದ್ಯಾರ್ಥಿಯೊಬ್ಬನನ್ನು ಅಟ್ಟಾಡಿಸಿಕೊಂಡು ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಇನ್ನೊಂದು ಟ್ವೀಟ್ ನಲ್ಲಿ, ತಮ್ಮ ಕಾರ್ಯಕರ್ತ ಶಿವಂಗೆ ಆದ ಸಣ್ಣಪುಟ್ಟ ಗಾಯದ ಫೋಟೋವನ್ನೂ ಎಬಿವಿಪಿ ಹಾಕಿಕೊಂಡಿದೆ.
ಜೆಎನ್ಯು ಆವರಣದೊಳಗೆ ಹಿಂದೂ ರಕ್ಷಾ ದಳ ಕಾರ್ಯಕರ್ತರು
ಈ ವಿಶ್ವವಿದ್ಯಾಲಯ ಹಿಂಸಾಚಾರದಿಂದ ಮುಕ್ತವಾಗಿ, ಉತ್ತಮ ಶಿಕ್ಷನ ಇಲ್ಲಿ ಸಿಗಬೇಕಾದರೆ, ಎಡಪಕ್ಷ ಬೆಂಬಲಿತ ಈ ವಿದ್ಯಾರ್ಥಿ ಸಂಘಟೆನೆಯನ್ನು ನಿಷೇಧಿಸಬೇಕೆಂದು ಎಬಿವಿಪಿ ಆಗ್ರಹಿಸಿದೆ. ದೇಶ ವಿರೋಧಿ ಮತ್ತು ಹಿಂದೂ ವಿರೋಧಿ ಚಟುವಟಿಕೆಗಳು ನಡೆಯುತ್ತಿರುವ ಜೆಎನ್ಯು ಆವರಣದೊಳಗೆ ಹಿಂದೂ ರಕ್ಷಾ ದಳ ಕಾರ್ಯಕರ್ತರು ಭಾನುವಾರ ರಾತ್ರಿ ನುಗ್ಗಿದ್ದಾಗಿ ಸಂಘಟನೆಯ ನಾಯಕ ಭೂಪೇಂದ್ರ ತೋಮರ್ ಅಲಿಯಾಸ್ ಪಿಂಕಿ ಚೌಧರಿ ಹೇಳಿಕೊಂಡಿದ್ದಾರೆ.