ಕನ್ಹಯ್ಯಾ ವಿಚಾರಣೆ: ಅನುಮತಿ ಪಡೆಯಲು ದೆಹಲಿ ಪೊಲೀಸರಿಗೆ ಕೋರ್ಟ್ ಸೂಚನೆ
ನವದೆಹಲಿ, ಫೆಬ್ರವರಿ 6: ಜವಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ 2016ರಲ್ಲಿ ನಡೆದ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎನ್ಯು ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿದ್ದ ಕನ್ಹಯ್ಯಾ ಕುಮಾರ್ ಮತ್ತು ಇತರೆ ಆರೋಪಿಗಳ ವಿರುದ್ಧ ವಿಚಾರಣೆಗೆ ಅನುಮತಿ ಪಡೆದುಕೊಳ್ಳಲು ವಿಫಲರಾಗಿರುವುದಾಗಿ ದೆಹಲಿ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ವಿಚಾರಣೆಯ ಅನುಮತಿಯು ದೆಹಲಿ ಸರ್ಕಾರದ ಬಳಿ ಬಾಕಿ ಉಳಿದಿದೆ. ಕೆಲವು ದಿನಗಳಲ್ಲಿ ಅನುಮತಿ ನಿರೀಕ್ಷೆಯಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶೀಘ್ರದಲ್ಲಿಯೇ ನಿರ್ಧಾರವನ್ನು ಚುರುಕುಗೊಳಿಸುವಂತೆ ಸರ್ಕಾರಕ್ಕೆ ತಿಳಿಸುವಂತೆ ನ್ಯಾಯಾಲಯ ತನಿಖಾಧಿಕಾರಿಗೆ ಸೂಚಿಸಿತು. ಕಡತಗಳ ಮುಂದೆ ಅನಿರ್ದಿಷ್ಟಾವಧಿಯವರೆಗೆ ಅಧಿಕಾರಿಗಳು ಕುಳಿತುಕೊಳ್ಳುವಂತಿಲ್ಲ ಎಂದು ಅದು ಹೇಳಿದೆ.

ಕನ್ಹಯ್ಯಾ ಕುಮಾರ್ ಮತ್ತು ಇತರೆ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವ ಸಲುವಾಗಿ ಅನುಮತಿ ಪಡೆಯಲು ಫೆ.28ರವರೆಗೂ ದೆಹಲಿ ಪೊಲೀಸರಿಗೆ ಕಾಲಾವಕಾಶ ನೀಡಲಾಗಿದೆ.
ಕಾನೂನು ಇಲಾಖೆಯಿಂದ ಅನುಮತಿ ಪಡೆಯದೆ ದೋಷಾರೋಪ ಪಟ್ಟಿ ಏಕೆ ಹೊರಿಸಲಾಗಿದೆ ಎಂದು ಜನವರಿ 19ರಂದು ಕೋರ್ಟ್, ದೆಹಲಿ ಪೊಲೀಸರನ್ನು ಪ್ರಶ್ನಿಸಿತ್ತು.












Click it and Unblock the Notifications