370 ರದ್ದು: ಕಾಶ್ಮೀರದ ದಿವಂಗತ ಮಹಾರಾಜ ಹರಿಸಿಂಗ್ ಪುತ್ರನ ಅಭಿಪ್ರಾಯ
ನವದೆಹಲಿ, ಆಗಸ್ಟ್ 08: ಜಮ್ಮು ಕಾಶ್ಮೀರದ ರಾಜರಾಗಿದ್ದ, ಜಮ್ಮು ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸಲು 1947 ರಲ್ಲಿ ಒಪ್ಪಂದ ಸಹಿ ಮಾಡಿದ್ದ ಮಹಾರಾಜ ಹರಿಸಿಂಗ್ ಅವರ ಪುತ್ರ ಕರಣ್ ಸಿಂಗ್ ಅವರು, ಕೇಂದ್ರ ಸರ್ಕಾರವು ಆರ್ಟಿಕಲ್ 370 ರದ್ದುಗೊಳಿಸಿ ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನ-ಮಾನವನ್ನು ರದ್ದು ಮಾಡಿದ್ದರ ಬಗ್ಗೆ ಮಿಶ್ರ ಭಾವ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಬಹಿರಂಗ ಪತ್ರ ಬರೆದಿರುವ ಕರಣ್ ಸಿಂಗ್, ಲೋಕಸಭೆಯಲ್ಲಿ ಆತುರಾತರವಾಗಿ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ, ನಿರ್ಧಾರವನ್ನು ಜಮ್ಮು ಮತ್ತು ಲಡಾಕ್ ಸೇರಿದಂತೆ ದೇಶದಾದ್ಯಂತ ಸ್ವಾಗತ ಮಾಡಲಾಗಿದೆ ಎಂದಿರುವ ಅವರು, ವಿಧೇಯಕದಲ್ಲಿ ಕೆಲವು ಧನಾತ್ಮಕ ಅಂಶಗಳೂ ಇವೆ ಎಂದು ವಿಮರ್ಶೆ ಮಾಡಿದ್ದಾರೆ.
'ವೈಯಕ್ತಿಕವಾಗಿ ನಾನು ಎಲ್ಲ ಬೆಳವಣಿಗೆಗಳನ್ನೂ ವಿರೋಧಿಸುವುದಿಲ್ಲ, ಇದರಲ್ಲಿ ಕೆಲವು ಧನಾತ್ಮಕ ಅಂಶಗಳೂ ಇವೆ. ಲಡಾಕ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದನ್ನು ಒಪ್ಪಲೇ ಬೇಕು. ನಾನು 1965 ರಲ್ಲಿ ಜಮ್ಮು ಕಾಶ್ಮೀರ ರಾಜ್ಯ ಮುಖ್ಯಸ್ಥ (ಸದಾರ್-ಎ-ರಿಯಾಸತ್) ನಾಗಿದ್ದಾಗಲೇ ಇದನ್ನು ಸಾರ್ವಜನಿಕವಾಗಿಯೇ ಸೂಚಿಸಿದ್ದೆ' ಎಂದಿದ್ದಾರೆ.

ಲೇಹ್ ಮತ್ತು ಕಾರ್ಗಿಲ್ ಹಿಲ್ ಕೌನ್ಸಿಲ್ಗಳು ಮುಂದುವರೆಯುವ ಮೂಲಕ ಅಲ್ಲಿ ವಿಧಾನಮಂಡಲ ಇಲ್ಲದಿರುವ ಕೊರತೆಯನ್ನು ಹೋಗಲಾಡಿಸಿ, ಜನಾಭಿಪ್ರಾಯ ಪ್ರತಿನಿಧಿಸುವ ವ್ಯವಸ್ಥೆ ಮಾಡಲು ಸಾಧ್ಯವಾಗಲಿವೆ ಎಂದು ಆಶಿಸುತ್ತೇನೆ ಎಂದು ಕರಣ್ ಸಿಂಗ್ ಪತ್ರದಲ್ಲಿ ಬರೆದಿದ್ದಾರೆ.
ಬಹುಕಾಲದ ಬೇಡಿಕೆಯಾಗಿದ್ದ ಪಶ್ಚಿಮ ಪಾಕಿಸ್ತಾನದ ವಲಸಿಗರಿಗೆ ಮತದಾನದ ಹಕ್ಕು ನೀಡಿಕೆ ಹಾಗೂ ಪರಿಶಿಷ್ಟ ಬುಡಕಟ್ಟು ಜನರಿಗೆ ಮೀಸಲಾತಿ ನೀಡಿಕೆ ನಿರ್ಧಾರವನ್ನು ಸ್ವಾಗತಿಸಲೇಬೇಕು ಆದರೆ ಆರ್ಟಿಕಲ್ 35ಎ ನಲ್ಲಿನ ಲಿಂಗಭೇದವನ್ನು ಪರಿಶೀಲಿಸಬೇಕಾದ ಅವಶ್ಯಕತೆ ಇದೆ ಎಂದು ಕರಣ್ ಸಿಂಗ್ ಹೇಳಿದ್ದಾರೆ.
ಜಮ್ಮು ಕಾಶ್ಮೀರದ ಪ್ರಮುಖ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಬಗ್ಗೆ ಉಲ್ಲೇಖಿಸಿರುವ ಅವರು, 'ಎರಡು ರಾಜಕೀಯ ಪಕ್ಷಗಳನ್ನು ದೇಶವಿರೋಧಿ ಎಂದು ಕರೆಯುವುದು ಅನ್ಯಾಯ, ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಲವಾರು ವರ್ಷಗಳಿಂದ ತ್ಯಾಗ ಮಾಡಿದ್ದಾರೆ' ಎಂದಿದ್ದಾರೆ.
ಅವೆರಡೂ ಪಕ್ಷಗಳು ಸಂದರ್ಭಾನುಸಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡರಲ್ಲೂ ರಾಷ್ಟ್ರೀಯ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಕೆಲಸ ಮಾಡಿದ್ದಾರೆ. ಹಾಗಾಗಿ ನ್ಯಾಯಬದ್ಧವಾಗಿ ರರಾಜಕೀಯ ಪಕ್ಷಗಳ ಮುಖಂಡರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಕರಣ್ ಸಿಂಗ್ ಒತ್ತಾಯ ಮಾಡಿದ್ದಾರೆ.
ಬದಲಾದ ಸನ್ನಿವೇಶದಲ್ಲಿ ಜಮ್ಮು ಕಾಶ್ಮೀರದಲ್ಲಿ ರಾಜಕೀಯ ಚರ್ಚೆ ಮುಂದುವರೆಯಬೇಕು, ಕೋಮು ಸೌರ್ಹಾರ್ದವನ್ನು ಯಾವುದೇ ಬೆಲೆ ತೆತ್ತಾದರೂ ಕಾಪಾಡಿಕೊಳ್ಳಬೇಕು, ಹಿಂಸೆಯನ್ನು ಕೊನೆಗಾಣಿಸಬೇಕು. ಆದಷ್ಟು ಶೀಘ್ರವಾಗಿ ಜಮ್ಮು ಕಾಶ್ಮೀರವು ಪೂರ್ಣಪ್ರಮಾಣದ ರಾಜ್ಯವಾಗಿ ಮಾನ್ಯತೆ ಪಡೆಯಬೇಕು. ಭಾರತದ ಇತರ ರಾಜ್ಯಗಳು ಅನುಭವಿಸುತ್ತಿರುವ ಸ್ವಾತಂತ್ರ್ಯ, ಹಕ್ಕುಗಳು ಕಣಿವೆ ರಾಜ್ಯದ ಜನರಿಗೆ ಧಕ್ಕಬೇಕು ಎಂದು ಕಣರ್ ಸಿಂಗ್ ಹೇಳಿದ್ದಾರೆ.
ಜಮ್ಮು ಕಾಶ್ಮೀರಕ್ಕಾಗಿ ಇಡೀಯ ಜೀವನವನ್ನು ಕಳೆದಿದ್ದೇನೆ. ನನ್ನ ಕುಟುಂಬದ ಹಿರಿಯರು ಸ್ಥಾಪಿಸಿದ, ನನ್ನ ತಂದೆ ಮಹಾರಾಜ ಹರಿಸಿಂಗ್ ಅವರು 1947ರಲ್ಲಿ ವಿಲೀನ ಒಪ್ಪಂದಕ್ಕೆ ಸಹಿಮಾಡಿದ ಜಮ್ಮು ಮತ್ತು ಕಾಶ್ಮೀರದ ಎಲ್ಲ ವರ್ಗ ಮತ್ತು ಪ್ರದೇಶಗಳ ಜನರ ಕಲ್ಯಾಣವೊಂದೇ ನನ್ನ ಕಳಕಳಿ ಎಂದು ಕರಣ್ ಸಿಂಗ್ ಪತ್ರದಲ್ಲಿ ಹೇಳಿದ್ದಾರೆ.












Click it and Unblock the Notifications