ಪಿ. ಚಿದಂಬರಂಗೆ ಗಾಯದ ಮೇಲೆ ಬರೆ: ಮತ್ತೆ ಸಿಬಿಐ ವಶಕ್ಕೆ
ನವದೆಹಲಿ, ಆಗಸ್ಟ್ 26: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಸಚಿವ ಪಿ. ಚಿದಂಬರಂ ಅವರ ಸಂಕಷ್ಟ ಮುಂದುವರಿದಿದೆ. ಸುಪ್ರೀಂಕೋರ್ಟ್ನಿಂದ ಜಾಮೀನು ದೊರೆತು ಬಂಧನದಿಂದ ಹೊರಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ಅವರಿಗೆ ಆಘಾತ ಎದುರಾಗಿದೆ. ಅತ್ತ ಸಿಬಿಐ ವಿಶೇಷ ನ್ಯಾಯಾಲಯವು ಅವರನ್ನು ಮತ್ತೆ ನಾಲ್ಕು ದಿನ ಸಿಬಿಐ ವಶಕ್ಕೆ ಒಪ್ಪಿಸಿದೆ. ಇದರಿಂದ ಅವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸಿಬಿಐ ವಿಶೇಷ ನ್ಯಾಯಾಲಯವು ಚಿದಂಬರಂ ಅವರ ಸಿಬಿಐ ವಶದ ಅವಧಿಯನ್ನು ಆಗಸ್ಟ್ 30ರವರೆಗೂ ವಿಸ್ತರಿಸಿದೆ.
ಚಿದಂಬರಂಗೆ ಮತ್ತೆ ಸಂಕಷ್ಟ: ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಜಾ
ಸುಪ್ರೀಂಕೋರ್ಟ್ ಮುಂದೆ ಚಿದಂಬರಂ ಅವರ ಮೂರು ಅರ್ಜಿಗಳು ವಿಚಾರಣೆಗೆ ಬಂದಿದ್ದವು. ಅವುಗಳಲ್ಲಿ ಒಂದೂ ಅವರ ಸಹಾಯಕ್ಕೆ ಬರಲಿಲ್ಲ. ಜಾರಿ ನಿರ್ದೇಶನಾಲಯವು ತಮ್ಮನ್ನು ಬಂಧಿಸದಂತೆ ತಡೆಯಾಜ್ಞೆ ನೀಡುವಂತೆ ಕೋರಿದ್ದ ಅರ್ಜಿಯನ್ನು ಮಾತ್ರ ಸುಪ್ರೀಂಕೋರ್ಟ್ ಪುರಸ್ಕರಿಸಿದೆ. ಆದರೆ, ಮಂಗಳವಾರದವರೆಗೆ ಮಾತ್ರ ಈ ರಕ್ಷಣೆ ನೀಡಲಾಗಿದೆ. ಈಗಾಗಲೇ ಸಿಬಿಐ ವಶದಲ್ಲಿರುವುದರಿಂದ ಅವರಿಗೆ ಇದರಿಂದ ಪ್ರಯೋಜನವಾಗುವುದಿಲ್ಲ.
ಜಾರಿ ನಿರ್ದೇಶನಾಲಯವು ದಾಖಲಿಸಿರುವ ಐಎನ್ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಅವರನ್ನು ಬಂಧಿಸಲು ಉದ್ದೇಶಿಸಿದೆ. ಹಣ ವರ್ಗಾವಣೆ ಪ್ರಕರಣದಲ್ಲಿ ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸುವ ದೆಹಲಿ ಹೈಕೋರ್ಟ್ನ ಆದೇಶದ ವಿರುದ್ಧದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಮುಂದುವರಿಸುವುದಾಗಿ ನ್ಯಾಯಮೂರ್ತಿಗಳಾದ ಆರ್. ಭಾನುಮತಿ ಮತ್ತು ಎಎಸ್ ಬೋಪಣ್ಣ ಅವರನ್ನು ಒಳಗೊಂಡ ನ್ಯಾಯಪೀಠ ತಿಳಿಸಿದೆ.
ಕಾರ್ತಿ ಇಂದ್ರಾಣಿ ಭೇಟಿ; ಚಿದು ಕಾರ್ಯತಂತ್ರ ರಹಸ್ಯ ಬಯಲು ಮಾಡಿದ 'ಇಡಿ'
ಇದೇ ಪ್ರಕರಣದಲ್ಲಿ ತನ್ನ ವಶದಲ್ಲಿರುವ ಚಿದಂಬರಂ ಅವರು ವಿಚಾರಣೆಗೆ ಸಹಕರಿಸುತ್ತಿಲ್ಲ. ಹೀಗಾಗಿ ಅವರನ್ನು ಮತ್ತಷ್ಟು ದಿನ ವಶಕ್ಕೆ ನೀಡಬೇಕು ಎಂದು ಸಿಬಿಐ ಕೋರಿತ್ತು. ಅದನ್ನು ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಮಾನ್ಯಮಾಡಿದರು. ಸಿಬಿಐ ಸಲ್ಲಿಸಿರುವ ಮನವಿ ನ್ಯಾಯುಯುತವಾಗಿದೆ ಎಂದು ಅವರು ಹೇಳಿದರು.
ಸಿಬಿಐ ವಶದಲ್ಲಿರುವ ಚಿದಂಬರಂ ಅವರನ್ನು ಅವರ ಪರ ವಕೀಲರು ಮತ್ತು ಕುಟುಂಬದವರು ಪ್ರತಿದಿನ ಅರ್ಧಗಂಟೆ ಭೇಟಿ ಮಾಡಲು ಅವಕಾಶ ನೀಡಲಾಗಿದೆ.
ಚಿದು ಜಾಮೀನು ನಿರಾಕರಿಸಿದ ಜಸ್ಟೀಸ್ ಸುನೀಲ್ ಗೌರ್ ನಿವೃತ್ತಿ
ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ತಮ್ಮನ್ನು ಕಿಂಗ್ಪಿನ್ ಎಂದಿರುವುದಲ್ಲದೆ, ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಕೂಡ ಭಾಗಿಯಾಗಿದ್ದೇನೆ ಎಂದು ಹೇಳುವ ಮೂಲಕ ದೆಹಲಿ ಹೈಕೋರ್ಟ್ ತಮ್ಮ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಚಿದಂಬರಂ ಸುಪ್ರೀಂಕೋರ್ಟ್ನಲ್ಲಿ ಅರೋಪಿಸಿದರು. 'ಪ್ರತಿದಿನ ನನ್ನ ವರ್ಚಸ್ಸಿಗೆ ಧಕ್ಕೆ ತರಲಾಗುತ್ತಿದೆ. ನನಗೆ ಹೇಗೆ ರಕ್ಷಣೆ ಸಿಗುತ್ತದೆ?' ಎಂದು ಚಿದಂಬರಂ ಪರ ವಕೀಲರು ಹೇಳಿದರು.